ನೀಟ್ ಪರೀಕ್ಷೆ ಭೀತಿ: 5 ದಿನಗಳಲ್ಲಿ ಮೂವರು ವಿದ್ಯಾರ್ಥಿಗಳ ಆತ್ಮಹತ್ಯೆ!
ಚೆನ್ನೈ, ಸೆಪ್ಟೆಂಬರ್ 15: ತಮಿಳುನಾಡಿನಲ್ಲಿ ವೈದ್ಯನಾಗುವ ಕನಸು ಕಟ್ಟಿಕೊಂಡ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಐದು ದಿನಗಳಲ್ಲಿ ಮೂವರು ವಿದ್ಯಾರ್ಥಿಗಳು ಅನುತ್ತೀರ್ಣದ ಭೀತಿಯಲ್ಲೇ ಸಾವಿನ ಮನೆಗೆ ಸೇರಿದ್ದಾರೆ.
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(NEET) ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಲ್ಲೇ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ವರದಿಯಾಗಿದೆ. ಸಪ್ಟೆಂಬರ್ 12ರಂದು ನೀಟ್ ಪರೀಕ್ಷೆಗೆ ಹಾಜರಾಗಿದ್ದ ಸೌಂದರ್ಯ ಟಿ ಎಂಬ ವಿದ್ಯಾರ್ಥಿನಿಯು ಫೇಲ್ ಆಗುವ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೀಟ್ ಪರೀಕ್ಷೆ ಮುಗಿದ ಮೂರ್ನಾಲ್ಕು ದಿನಗಳಲ್ಲಿ ಮೂವರು ವಿದ್ಯಾರ್ಥಿಗಳು ಸಾವಿಗೆ ಶರಣಾಗಿದ್ದಾರೆ ಎಂದು ಗೊತ್ತಾಗಿದೆ.
ತಮಿಳುನಾಡು; ನೀಟ್ನಿಂದ ಶಾಶ್ವತ ವಿನಾಯಿತಿ ಮಸೂದೆ ಮಂಡಿಸಿದ ಸ್ಟಾಲಿನ್
ನೀಟ್ ಪರೀಕ್ಷಾ ಪತ್ರಿಕೆಯು ತುಂಬಾ ಕಠಿಣವಾದ ಪ್ರಶ್ನೆಗಳನ್ನು ಒಳಗೊಂಡಿತ್ತು. ನಾನು ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿಲ್ಲ, ನೀಟ್ ಪರೀಕ್ಷೆ ಪಾಸ್ ಆಗುವುದೇ ಅನುಮಾನವಾಗಿದೆ ಎಂದುಕೊಂಡ ವಿದ್ಯಾರ್ಥಿನಿಯು ಪರೀಕ್ಷೆ ಮುಗಿಸಿದ ದಿನದಿಂದಲೂ ಖಿನ್ನತೆಗೆ ಒಳಗಾಗಿದ್ದಳು ಎಂದು ಪೋಷಕರು ಹೇಳಿದ್ದಾರೆ.
ಸಪ್ಟೆಂಬರ್ 15ರಂದು ವಿದ್ಯಾರ್ಥಿನಿ ಆತ್ಮಹತ್ಯೆ:
ಪೋಷಕರು ಎಂದಿನಂತೆ ಸೆಪ್ಟೆಂಬರ್ 15ರಂದು ತಮ್ಮ ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗಿದ್ದರು. ತಾಯಿ ಮನೆಗೆ ವಾಪಸ್ ಆದ ಸಂದರ್ಭದಲ್ಲಿ ವಿದ್ಯಾರ್ಥಿನಿ ಸೌಂದರ್ಯ ಶವವಾಗಿ ಪತ್ತೆಯಾಗಿದ್ದಾಳೆ. ವಿದ್ಯಾರ್ಥಿನಿ ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ವೆಲ್ಲೂರಿನ ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಈ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ವಕೀಲ ದಂಪತಿಯ ಪುತ್ರಿ ಆತ್ಮಹತ್ಯೆ:
ವೈದ್ಯಕೀಯ ವ್ಯಾಸಂಗ ಮಾಡುವ ಕನಸು ಕಂಡಿದ್ದ ವಿದ್ಯಾರ್ಥಿನಿಯು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮೃತ ವಿದ್ಯಾರ್ಥಿನಿಯನ್ನು ಕನಿಮೋಳಿ ಎಂದು ಗುರುತಿಸಲಾಗಿದೆ. ವಕೀಲ ದಂಪತಿ ಆಗಿರುವ ತಂದೆ ಕರುಣಾನಿಧಿ ತಾಯಿ ವಿಜಯಲಕ್ಷ್ಮಿ ಪುತ್ರಿ ಕನಿಮೋಳಿ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣಳಾಗಿದ್ದರು. ಆದರೆ ಇತ್ತೀಚಿಗೆ ನಡೆದ ನೀಟ್ ಪರೀಕ್ಷೆಯ ಸರಿಯಾಗದ ಹಿನ್ನೆಲೆ ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗೊತ್ತಾಗಿದೆ.
ಪರೀಕ್ಷೆಗೆ ಹಾಜರಾಗುವ ಮೊದಲೇ ಆತ್ಮಹತ್ಯೆ:
ಕಳೆದ ಸೆಪ್ಟೆಂಬರ್ 12 ರಂದು ನೀಟ್ ಪರೀಕ್ಷೆಗೆ ಹಾಜರಾಗುವ ಕೆಲವು ಗಂಟೆಗಳ ಮೊದಲೇ 19 ವರ್ಷದ ಯುವಕ ಸೇಲಂ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. "ಬೆಳಗಿನ ಜಾವ 3.45 ರ ಸುಮಾರಿಗೆ ಬಾಲಕ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಕುಟುಂಬದವರು ನಮಗೆ ಮಾಹಿತಿ ನೀಡಿದ್ದಾರೆ" ಎಂದು ಮೆಟ್ಟೂರು ವ್ಯಾಪ್ತಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೀಟ್ ಪರೀಕ್ಷೆಯಿಂದ ವಿನಾಯಿತಿ:
ತಮಿಳುನಾಡು ವಿಧಾನಸಭೆಯು ಸೋಮವಾರ 12ನೇ ತರಗತಿಯ ಪರೀಕ್ಷೆಗಳಲ್ಲಿ (ಮಧ್ಯಂತರ) ವಿದ್ಯಾರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ನೀಟ್ನಿಂದ ವಿನಾಯಿತಿ ಮತ್ತು ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಕೋರಿ ಮಸೂದೆಯನ್ನು ಅಂಗೀಕರಿಸಿದೆ. ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಪದವಿಪೂರ್ವ ವೈದ್ಯಕೀಯ ಪದವಿ ಕೋರ್ಸ್ಗಳ ಕಾಯ್ದೆ -2021ಕ್ಕೆ ತಮಿಳುನಾಡು ಪ್ರವೇಶವನ್ನು ಪರಿಚಯಿಸಿದ್ದರು ಮತ್ತು ಅದನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು. ಈ ಹಿಂದೆ ಸದನದಿಂದ ಹೊರನಡೆದಿದ್ದ ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ ನಂತರ ಮಸೂದೆ ಬೆಂಬಲಿಸಲು ಮರಳಿ ಬಂದಿತು. ಮಾಜಿ ಸಿಎಂ ಮತ್ತು ವಿರೋಧ ಪಕ್ಷದ ನಾಯಕ, ಕೆ ಪಳನಿಸ್ವಾಮಿ ತಮ್ಮ ಪಕ್ಷವು ಮಸೂದೆಗೆ ಬೆಂಬಲ ಸೂಚಿಸಿದ್ದರು. ಆದರೆ, ಮಸೂದೆಯನ್ನು ಮತಕ್ಕೆ ಹಾಕಿದಾಗ ಬಿಜೆಪಿಯ ಸದಸ್ಯರು ಸಭಾತ್ಯಾಗ ಮಾಡಿದರು.
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]