ತಮಿಳುನಾಡಿನಲ್ಲಿ ರೆಸಾರ್ಟ್ ರಾಜಕೀಯ: ಸಿಎಂ ಬದಲಾವಣೆಗೆ ಪಟ್ಟು
ಎಐಡಿಎಂಕೆಯ 19 ಶಾಸಕರಿಂದ ರೆಸಾರ್ಟ್ ರಾಜಕಾರಣ. ಪನ್ನೀರ್ ಸೆಲ್ವಂ, ಪಳನಿಸ್ವಾಮಿ ಗುಂಪು ವಿಲೀನಗೊಂಡಿದ್ದಕ್ಕೆ ಆಕ್ರೋಶ.
ಚೆನ್ನೈ, ಆಗಸ್ಟ್ 22: ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಅಧಿನಾಯಕಿ ಶಶಿಕಲಾ ಹಾಗೂ ಅವರ ಸಂಬಂಧಿ ದಿನಕರನ್ ಅವರನ್ನು ಮೂಲೆಗುಂಪು ಮಾಡುವ ತಂತ್ರಗಾರಿಕೆಯನ್ನು ವಿರೋಧಿಸಿರುವ ಕೆಲ ಶಾಸಕರು, ಪಳನಿಸ್ವಾಮಿ ಅವರ ಸರ್ಕಾರವನ್ನು ಕೆಡವುವ ಬೆದರಿಕೆಯನ್ನೊಡ್ಡಿದ್ದಾರೆ.
ಪಳನಿಸ್ವಾಮಿ- ಪನ್ನೀರ್ ಸೆಲ್ವಂ ಒಂದಾದ ನಂತರ, ಶಶಿಕಲಾ ಹಾಗೂ ದಿನಕರನ್ ಅವರಿನ್ನು ಪಕ್ಷದಲ್ಲಿ ಮೂಲೆ ಗುಂಪಾಗುತ್ತಾರೆ ಎಂದೆಣಿಸಿದ (ಹೀಗೊಂದು ವದಂತಿಯೂ ಹರಡಿತ್ತು) ದಿನಕರನ್ ಬೆಂಬಲಿತ ಶಾಸಕರು, ಇದೀಗ ಚೆನ್ನೈನ ಹೊರವಲಯದಲ್ಲಿರುವ ರೆಸಾರ್ಟ್ ನಲ್ಲಿ ಯಾರ ಸಂಪರ್ಕಕ್ಕೂ ಸಿಗದಂತೆ ಹೋಗಿ ಸೇರಿಕೊಂಡಿದ್ದಾರೆ.
ಶಶಿಕಲಾ ಬೆಂಬಲದಿಂದ ಮುಖ್ಯಮಂತ್ರಿಯಾಗಿರುವ ಪಳನಿಸ್ವಾಮಿ, ಶಶಿಕಲಾ ವಿರೋಧಿಯಾಗಿರುವ ಪನ್ನೀರ್ ಸೆಲ್ವಂ ಅವರೊಂದಿಗೆ ಮತ್ತೆ ಮೈತ್ರಿ ಸಾಧಿಸಿ, ಶಶಿಕಲಾಗೆ ದ್ರೋಹ ಬಗೆದಿದ್ದಾರೆ. ಹಾಗಾಗಿ, ಪಳನಿಯವರು ಸಿಎಂ ಹುದ್ದೆಯಿಂದ ಕೆಳಗಿಳಿಯಬೇಕೆಂದು ಪಟ್ಟು ಹಿಡಿದಿದ್ದಾರೆ. ಇದೇ ವೇಳೆ, ಸರ್ಕಾರಕ್ಕೆ ತಮ್ಮಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಎರಡು ಗುಂಪುಗಳ ವಿಲೀನ
ಕೆಲವು ತಿಂಗಳುಗಳಿಂದ ಇಬ್ಭಾಗವಾಗಿದ್ದ ಎಐಎಡಿಎಂಕೆಯ ಪಳನಿಸ್ವಾಮಿ ಬಣ (ಶಶಿಕಲಾ ಹಿಡಿತವಿದ್ದ ಗುಂಪು) ಹಾಗೂ ಪನ್ನೀರ್ ಸೆಲ್ವಂ ಬಣ (ಜಯಲಲಿತಾ ವಿಧೇಯರ ಗುಂಪು) ಎರಡು ದಿನಗಳ ಹಿಂದಷ್ಟೇ ಪರಸ್ಪರ ಒಗ್ಗೂಡಿದ್ದವು.
ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ
ಪಳನಿ ಸ್ವಾಮಿ, ಪನ್ನೀರ್ ಸೆಲ್ವಂ ಗುಂಪುಗಳು ವಿಲೀನಗೊಂಡಿದ್ದರ ಫಲವಾಗಿ, ಪನ್ನೀರ್ ಸೆಲ್ವಂ ಅವರು ತಮಿಳುನಾಡಿನ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಎರಡನೇ ದಿನಗಲ್ಲಿ ಬಿರುಕು
ಎಐಎಡಿಎಂಕೆಯ ಉಭಯ ಬಣಗಳು ಒಂದಾಗಿದ್ದರಿಂದ ಪಕ್ಷದ ಹಲವಾರು ದಿನಗಳ ಬಿಕ್ಕಟ್ಟು ಮುಗಿದು ಇನ್ನೇನು ಸ್ಥಿರ ಸರ್ಕಾರ ಸ್ಥಾಪಿಸಿದೆ ಎನ್ನುವಷ್ಟರಲ್ಲೇ ಎಐಎಡಿಎಂಕೆಯಲ್ಲಿ ಮತ್ತೆ ಒಡಕು ಕಾಣಿಸಿಕೊಂಡಿದೆ.
ಪನ್ನೀರ್ ವಿರುದ್ಧ ಕ್ರಮಕ್ಕೆ ಒತ್ತಾಯ
ಮೂಲಗಳ ಪ್ರಕಾರ, ಚೆನ್ನೈ ಬಳಿಯಿರುವ ಮಹಾಬಲಿಪುರಂ ಬಳಿಯಿರುವ ರೆಸಾರ್ಟ್ ನಲ್ಲಿರುವ ಶಾಸಕರು, ಹಾಗೆ ಅಲ್ಲಿಗೆ ಹೋಗುವ ಮೊದಲು ರಾಜ್ಯಪಾಲ ವಿದ್ಯಾಸಾಗರ ರಾವ್ ಅವರಿಗೆ ಪತ್ರ ಬರೆದು, ಪಳನಿಸ್ವಾಮಿ ಅವರು ಪನ್ನೀರ್ ಸೆಲ್ವಂ ಅವರೊಂದಿಗೆ ಮೈತ್ರಿ ಮಾಡಿಕೊಂಡು ಈ ಹಿಂದೆ ಪಳನಿ ಸ್ವಾಮಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದ ಹೊಸತರಲ್ಲಿ ತೋರಿದ್ದ ವಿಶ್ವಾಸ ಮತಕ್ಕೆ ಅಪಮಾನ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಹಾಗಾಗಿ, ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ಪಳನಿಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.