ಜಯಲಲಿತಾ ಹುಟ್ಟುಹಬ್ಬದಂದು ಶಶಿಕಲಾ ನಟರಾಜನ್ ಮಾಡಿದ ಹೊಸ ಶಪಥ
ಚೆನ್ನೈ, ಫೆಬ್ರವರಿ 24: ಬುಧವಾರ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರ 73ನೇ ಜನ್ಮದಿನವಾಗಿದ್ದು, ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಅವರು ತಮ್ಮ ನಿವಾಸದಲ್ಲಿ ಜಯಲಲಿತಾ ಅವರ ಭಾವಚಿತ್ರಕ್ಕೆ ಹೂವುಗಳನ್ನು ಅರ್ಪಿಸಿ ಸ್ಮರಿಸಿದರು.
ನಾಲ್ಕು ವರ್ಷದ ನಂತರ ಈಚೆಗೆ ಜೈಲಿನಿಂದ ಬಿಡುಗಡೆಯಾಗಿ, ತಮಿಳುನಾಡಿಗೆ ಹಿಂದಿರುಗಿರುವ ಶಶಿಕಲಾ ನಟರಾಜನ್, ರಾಜ್ಯ ರಾಜಕೀಯದಲ್ಲಿ ಮತ್ತೆ ಸಕ್ರಿಯವಾಗಿ ತೊಡಗಿಕೊಳ್ಳುವ ಸೂಚನೆಯನ್ನು ಈಗಾಗಲೇ ನೀಡಿದ್ದಾರೆ. ಶಶಿಕಲಾ ಹಿಂದಿರುಗುವಿಕೆ ತಮಿಳುನಾಡು ರಾಜಕೀಯದಲ್ಲಿ ಸಂಚಲನವನ್ನೇ ಮೂಡಿಸಿದೆ. ಇದೀಗ ಡಿಎಂಕೆ ವಿರುದ್ಧ ಸಮರ ಸಾರಿರುವ ಶಶಿಕಲಾ, "ಅಮ್ಮ ಸರ್ಕಾರ"ವನ್ನು ಎದುರಿಗಿಟ್ಟುಕೊಂಡು ಮತ್ತೆ ಸರ್ಕಾರ ರಚನೆಗೆ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ. ಮುಂದೆ ಓದಿ...
ಬೆಂಬಲಿಗರಿಗೆ ಕರೆ ಕೊಟ್ಟ ಶಶಿಕಲಾ
ಜಯಲಲಿತಾ ಜನ್ಮದಿನದ ಸಂದರ್ಭ ಜಯಲಲಿತಾ ಅವರ ಬೆಂಬಲಿಗರಿಗೆ ಶಶಿಕಲಾ ಕರೆ ನೀಡಿದ್ದಾರೆ. ಅಮ್ಮ ಬೆಂಬಲಿಗರೇ ನೀವೆಲ್ಲಾ ಒಗ್ಗಟ್ಟಾಗಿ ಎಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ ಇನ್ನು ಕೆಲವೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿಎಂಕೆ ಎಂಬ ಶತ್ರುವನ್ನು ಸೋಲಿಸಲು ಎಲ್ಲರೂ ಒಂದಾಗಲೇಬೇಕಿದೆ ಎಂದು ತಿಳಿಸಿದ್ದಾರೆ.
ಶಶಿಕಲಾ ನಟರಾಜನ್ ಒಡೆತನದ ಕೋಟ್ಯಂತರ ಆಸ್ತಿ ಸರ್ಕಾರದ ವಶಕ್ಕೆ
"ತಮಿಳುನಾಡಿನಲ್ಲಿ ಅಮ್ಮ ಸರ್ಕಾರ ಬರಲೇಬೇಕು"
ಜಯಲಲತಾ ಬೆಂಬಲಿಗರೆಲ್ಲಾ ಒಟ್ಟಾಗಬೇಕಿದೆ. ಜಯಲಲಿತಾ ಸರ್ಕಾರ ಇನ್ನೂ ನೂರು ವರ್ಷ ಆಡಳಿತ ನಡೆಸಲಿದೆ ಎಂಬುದನ್ನು ಸಾಬೀತುಪಡಿಸುವುದು ನಮ್ಮ ಗುರಿಯಾಗಿರಬೇಕಿದೆ. ನಮ್ಮ ಶತ್ರು ಈಗ ಡಿಎಂಕೆ. ಎಲ್ಲಾ ಕಾರ್ಯಕರ್ತರೂ ಅಮ್ಮ ಸರ್ಕಾರವನ್ನು ಗೆಲ್ಲಿಸಲು ಮುಂದಾಗಬೇಕು ಹಾಗೂ ತಮಿಳುನಾಡಿನಲ್ಲಿ ಅಮ್ಮ ಸರ್ಕಾರ ಬರಲೇಬೇಕು" ಎಂದು ಹೇಳಿದ್ದಾರೆ.
"100 ವರ್ಷಗಳ ಕಾಲ ತಮ್ಮ ಸರ್ಕಾರವಿರಬೇಕೆಂದು ಹೇಳಿದ್ದರು"
ತಮಿಳುನಾಡಿನಲ್ಲಿ ಅಮ್ಮ ಸರ್ಕಾರವೇ ಆಡಳಿತದಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದ ಅವರು, ತಾವು ಕೊರೊನಾದಿಂದ ಗುಣಮುಖರಾಗಲು ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದರು. ತನ್ನ ಸಾವಿನ ನಂತರವೂ ತನ್ನ ಸರ್ಕಾರ ನೂರು ವರ್ಷಗಳ ಕಾಲ ಮುಂದುವರೆಯಬೇಕು ಎಂದು ಅಮ್ಮ ಹೇಳಿದ್ದರು. ಅದು ಸಾಧ್ಯವಾಗುವಂತೆ ನಾವು ನೋಡಿಕೊಳ್ಳಬೇಕು. ಈ ಚುನಾವಣೆಯಲ್ಲಿ ಅವರ ಈ ಕನಸು ನನಸಾಗುವಂತೆ ಮಾಡಲು ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.
"ಅಮ್ಮಾ" ಸರ್ಕಾರದಿಂದ ರೈತರಿಗೆ 24 ಗಂಟೆ ವಿದ್ಯುತ್; ಚುನಾವಣೆ ಸಮೀಪದಲ್ಲಿ ಸಿಎಂ ಘೋಷಣೆ
ಪ್ರತಿ ಬಾರಿಯೂ "ಅಮ್ಮ" ಎಂದ ಶಶಿಕಲಾ ನಟರಾಜನ್
ಈ ಬಾರಿ ಶಶಿಕಲಾ ನಟರಾಜನ್, ಎಐಎಡಿಎಂಕೆ ಸರ್ಕಾರ ಎಂದು ಹೇಳದೇ ಪ್ರತಿ ಬಾರಿ ಸರ್ಕಾರವನ್ನು "ಅಮ್ಮ ಸರ್ಕಾರ" ಎಂದು ಸಂಬೋಧಿಸಿದ್ದು ಆಸಕ್ತಿದಾಯಕ ಎನಿಸಿತ್ತು. ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ತಮಿಳುನಾಡಿಗೆ ಮರಳಿದ ನಂತರ ಎಐಎಡಿಎಂಕೆ ಸರ್ಕಾರ ನಿಯಂತ್ರಣಕ್ಕೆ ಶಶಿಕಲಾ ಪ್ರಯತ್ನಿಸುತ್ತಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ ಚೆನ್ನೈ ಪ್ರವೇಶಿಸಿರುವ ಶಶಿಕಲಾ ಅವರನ್ನು ಎಐಎಡಿಎಂಕೆ ಎಲ್ಲಾ ರೀತಿಯಿಂದಲೂ ಕಟ್ಟಿಹಾಕಲು ಯತ್ನಿಸುತ್ತಿದೆ. ಯಾವುದೇ ಕಾರಣಕ್ಕೂ ಶಶಿಕಲಾ, ದಿನಕರನ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ, ಡಿಎಂಕೆ ನಮ್ಮ ಎದುರಾಳಿ ನಾವು ಒಟ್ಟಿಗೆ ಮಟ್ಟಹಾಕಬೇಕಿದೆ ಎಂದು ಶಶಿಕಲಾ ಕರೆ ನೀಡಿದ್ದಾರೆ.