ಡಿಎಂಕೆ ಹೀನಾಯವಾಗಿ ಸೋಲಲಿದೆ ಎಂದ ಕರುಣಾನಿಧಿ ಮಗ ಅಳಗಿರಿ
ಚೆನ್ನೈ (ತಮಿಳುನಾಡು), ಮಾರ್ಚ್ 17: ಡಿಎಂಕೆಯಿಂದ ಉಚ್ಚಾಟಿತರಾಗಿರುವ, ಮಾಜಿ ಮುಖ್ಯಮಂತ್ರಿ- ದಿವಂಗತಎಂ.ಕರುಣಾನಿಧಿ ಅವರ ಮಗ ಎಂ.ಕೆ.ಅಳಗಿರಿ ಪಕ್ಷಕ್ಕೆ ಮುಜುಗರ ಆಗುವಂಥ ಹೇಳಿಕೆ ನೀಡಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಆದೇನು ಸಾಧನೆ ಮಾಡಿತ್ತೋ ಅದೇ ಪುನರಾವರ್ತನೆ ಆಗಲಿದೆ ಎಂದಿದ್ದಾರೆ.
ಕೇಂದ್ರದ ಮಾಜಿ ಸಚಿವರೂ ಆಗಿರುವ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಭಾನುವಾರ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಭಾರೀ ಹಿನ್ನಡೆ ಅನುಭವಿಸಿತ್ತು. ಎದುರಾಳಿ ಎಐಎಡಿಎಂಕೆ ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳ ಪೈಕಿ 37 ಸ್ಥಾನಗಳಲ್ಲಿ ಜಯ ಗಳಿಸಿತ್ತು.
ಡಿಎಂಕೆ- ಕಾಂಗ್ರೆಸ್ ಕ್ಷೇತ್ರ ಹಂಚಿಕೆ ಪಟ್ಟಿ ಪ್ರಕಟಿಸಿದ ಎಂಕೆ ಸ್ಟಾಲಿನ್
ಮುಂಬರುವ ಚುನಾವಣೆಯಲ್ಲಿ ಡಿಎಂಕೆ ಕಣಕ್ಕೆ ಇಳಿಸಲಿರುವ ಅಭ್ಯರ್ಥಿಗಳ ಬಗ್ಗೆ ಒಂದು ವಾರದೊಳಗೆ ಅಭಿಪ್ರಾಯ ತಿಳಿಸುವುದಾಗಿ ಹೇಳಿದರು. ಮದುರೈನಲ್ಲಿ ಸಿಪಿಎಂ ಅಭ್ಯರ್ಥಿ ಎಸ್.ವೆಂಕಟೇಸನ್ ಭೇಟಿ ಮಾಡಿದ ಬಗ್ಗೆ ಪ್ರಶ್ನೆ ಕೇಳಿದಾಗ, ಸೌಹಾರ್ದಯುತವಾಗಿ ಭೇಟಿ ಮಾಡಲಿದ್ದೇನೆ. ಅವರು ಬಂದು, ನನ್ನನ್ನು ಭೇಟಿ ಮಾಡುವ ಹಾಗಿದ್ದರೆ ಗೌರವ ನೀಡುತ್ತೇನೆ ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಜತೆಗೆ ಡಿಎಂಕೆ ಮೈತ್ರಿ ಮಾಡಿಕೊಂಡಿದ್ದರೆ, ಬಿಜೆಪಿಯೊಂದಿಗೆ ಎಐಎಡಿಎಂಕೆ ಮೈತ್ರಿ ಮಾಡಿಕೊಂಡಿದೆ. ಸದ್ಯಕ್ಕೆ ಡಿಎಂಕೆಯನ್ನು ಎಂ.ಕೆ.ಸ್ಟಾಲಿನ್ ಮುನ್ನಡೆಸುತ್ತಿದ್ದಾರೆ.