ತಮಿಳುನಾಡಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ಗುರಿ ಎಂದ ಅಣ್ಣಾಮಲೈ
ಚೆನ್ನೈ, ಜುಲೈ 14: ತಮಿಳುನಾಡು ಬಿಜೆಪಿ ಅಧ್ಯಕ್ಷರನ್ನಾಗಿ ನಿವೃತ್ತ ಪೊಲೀಸ್ ಅಧಿಕಾರಿ ಕೆ. ಅಣ್ಣಾಮಲೈ ಅವರನ್ನು ನೇಮಿಸಲಾಗಿದ್ದು, ಅಧಿಕಾರ ವಹಿಸಿಕೊಳ್ಳುವ ಮುನ್ನ ಕೊಯಮತ್ತೂರಿನಿಂದ ಚೆನ್ನೈಗೆ ಮೂರು ದಿನಗಳ ಸುದೀರ್ಘ ರಸ್ತೆ ಪ್ರಯಾಣ ಹಮ್ಮಿಕೊಂಡಿದ್ದಾರೆ.
ಈ ಪ್ರಯಾಣದಲ್ಲಿ ಹಲವಾರು ಸ್ಥಳಗಳಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಅಣ್ಣಾಮಲೈ ಮಾತನಾಡಲಿದ್ದಾರೆ. ಗುರುವಾರ ರಾತ್ರಿ ಚೆನ್ನೈನ ತಂಬರಂ ತಲುಪಿದ ನಂತರ ಅಣ್ಣಾಮಲೈ ಶುಕ್ರವಾರ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
Breaking News: ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಕೆ ಅಣ್ಣಾಮಲೈ
ಬುಧವಾರ ಕೊಯಮತ್ತೂರಿನಲ್ಲಿ ಪ್ರಯಾಣದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ಬಿಜೆಪಿಯ ಹಲವು ಯೋಜನೆಗಳನ್ನು ಹಂಚಿಕೊಂಡರು. "2026ರಲ್ಲಿ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರುವುದು ಬಿಜೆಪಿಯ ಗುರಿ. 2026ರಲ್ಲಿ ವಿಧಾನಸಭೆಗೆ 150 ಶಾಸಕರು ಪ್ರವೇಶಿಸಲಿದ್ದಾರೆ. ತಮಿಳುನಾಡನ್ನು ಬಿಜೆಪಿ ಆಳಬೇಕು ಎನ್ನುವುದು ನಮ್ಮ ಪ್ರಧಾನಿ ಮೋದಿ ಜೀ ಅವರ ಕನಸು" ಎಂದು ಹೇಳಿದ್ದಾರೆ.
ತಮಿಳುನಾಡನ್ನು ವಿಭಜಿಸುವ ಇತ್ತೀಚಿನ ಬೇಡಿಕೆ ಕುರಿತು ಪಕ್ಷದ ನಿಲುವನ್ನು ಶುಕ್ರವಾರ ಅಧಿಕಾರ ವಹಿಸಿಕೊಂಡ ನಂತರ ವ್ಯಕ್ತಪಡಿಸುವುದಾಗಿ ತಿಳಿಸಿದರು.
ಜುಲೈ 8ರಂದು ಅಣ್ಣಾಮಲೈ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿತ್ತು.
ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕ ಅಣ್ಣಾಮಲೈಗೆ ಅರವಕುರುಚಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿತ್ತು. ರಾಜ್ಯದ ಬಿಜೆಪಿ ಉಸ್ತುವಾರಿ ಸಿ. ಟಿ. ರವಿ ಸೇರಿದಂತೆ ಹಲವು ನಾಯಕರು ಅಣ್ಣಾಮಲೈ ಪರವಾಗಿ ಪ್ರಚಾರ ನಡೆಸಿದ್ದರು. ಅಣ್ಣಾಮಲೈ 68 ಸಾವಿರ ಮತಗಳನ್ನು ಪಡೆದು ಸೋಲು ಕಂಡಿದ್ದರು.