ಜಯಲಲಿತಾ ಇಲ್ಲದ ಎಐಎಡಿಎಂಕೆ ಈಗ ಮೋದಿಯ ಗುಲಾಮ: ಓವೈಸಿ ವಾಗ್ದಾಳಿ
ಚೆನ್ನೈ, ಮಾರ್ಚ್ 13: ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ಅವರ ಗೈರು ಹಾಜರಿಯಲ್ಲಿ ಅವರ ಎಐಎಡಿಎಂಕೆ ಪಕ್ಷವು ನರೇಂದ್ರ ಮೋದಿ ಅವರ ಗುಲಾಮನಾಗಿ ಬದಲಾಗಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆ ಸಂಬಂಧ ಶುಕ್ರವಾರ ಚೆನ್ನೈನಲ್ಲಿ ಪ್ರಚಾರ ನಡೆಸಿದ ಅವರು, 'ಎಐಎಡಿಎಂಕೆ ಈಗ ಮೇಡಂ ಜಯಲಲಿತಾ ಅವರ ಪಕ್ಷವಾಗಿ ಉಳಿದಿಲ್ಲ. ಅವರು ಬಿಜೆಪಿಯಿಂದ ಪಕ್ಷವನ್ನು ದೂರದಲ್ಲಿ ಇರಿಸಿಕೊಂಡಿದ್ದರು. ದುರದೃಷ್ಟವಶಾತ್, ಎಐಎಡಿಎಂಕೆ ಈಗ ನರೇಂದ್ರ ಮೋದಿ ಅವರ ಗುಲಾಮನಾಗಿ ಬದಲಾಗಿದೆ' ಎಂದು ಟೀಕಿಸಿದರು.
ಸೂಪರ್ ಸ್ಟಾರ್ ಸೋತಿದ್ದು ಎಲ್ಲಿ; ತಮಿಳುನಾಡು ರಾಜಕೀಯದಲ್ಲಿ ರಜನಿಕಾಂತ್!
ತಮಿಳುನಾಡು ಚುನಾವಣೆಗಾಗಿ ಟಿಟಿವಿ ದಿನಕರನ್ ಅವರ ಅಮ್ಮಾ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಜತೆಗಿನ ತಮ್ಮ ಪಕ್ಷದ ಮೈತ್ರಿಯನ್ನು ಸಮರ್ಥಿಸಿಕೊಂಡ ಓವೈಸಿ, ಕಾಂಗ್ರೆಸ್ ಜತೆಗಿನ ಮುಖ್ಯ ವಿರೋಧಪಕ್ಷ ಡಿಎಂಕೆ ಮೈತ್ರಿಯನ್ನು ಪ್ರಶ್ನಿಸಿ ಟೀಕಾಪ್ರಹಾರ ನಡೆಸಿದರು.
ಮೋದಿಯ ಅಡಿಯಾಳು
'ಆಡಳಿತಾರೂಢ ಎಐಎಡಿಎಂಕೆ ಮತ್ತು ವಿರೋಧಪಕ್ಷ ಡಿಎಂಕೆ ಎರಡೂ ಪಕ್ಷಗಳು ಅಣ್ಣಾ ಅವರ (ಸಿಎನ್ ಅಣ್ಣಾದುರೈ) ಅವರು ಹಾಕಿದ ಮಾರ್ಗದಿಂದ ದೂರ ಸರಿದಿವೆ. ಬಿಜೆಪಿಯು ತಮಿಳುನಾಡು ಪ್ರವೇಶಿಸದಂತೆ ಜಯಲಲಿತಾ ತಡೆದಿದ್ದರು. ಆದರೆ ಅವರ ಪಕ್ಷ ಮೋದಿ ಅವರ ಅಡಿಯಾಳಾಗಿದೆ' ಎಂದು ಆರೋಪಿಸಿದರು.
ನಮ್ಮನ್ನು ಬಿ ಟೀಮ್ ಎನ್ನುತ್ತಾರೆ
'ಶಿವ ಸೇನಾ ಬಾಬ್ರಿ ಮಸೀದಿಯನ್ನು ತ್ಯಾಗ ಮಾಡಿದ್ದಕ್ಕೆ ತಾವು ಹೆಮ್ಮೆ ಪಡುವುದಾಗಿ ಶಿವಸೇನಾ ಮುಖ್ಯಮಂತ್ರಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಹೇಳಿದ್ದರು. ಇಂದು ಶಿವಸೇನಾವನ್ನು ಡಿಎಂಕೆ ಒಪ್ಪಿಕೊಳ್ಳುತ್ತದೆಯೇ? ದಿನಕರನ್ ಸಾಹೇಬ್ ಮತ್ತು ನನ್ನನ್ನು ಬಿಜೆಪಿಯ ಬಿ ಟೀಮ್ ಎಂದು ಆರೋಪಿಸಲಾಗಿದೆ. ಆದರೆ ಶಿವಸೇನಾಕ್ಕೆ ಅಧಿಕಾರಕ್ಕೆ ಬರಲು ನೆರವಾದ ಕಾಂಗ್ರೆಸ್ ಜತೆ ಡಿಎಂಕೆ ಕುಳಿತುಕೊಂಡಿದೆ' ಎಂದು ಟೀಕಿಸಿದರು.
ತಮಿಳುನಾಡು ಚುನಾವಣೆ; ತಮ್ಮ ಸ್ಪರ್ಧಾ ಕಣ ಘೋಷಿಸಿದ ಕಮಲ ಹಾಸನ್
ಶಿವಸೇನಾ ಕೋಮುವಾದಿಯೇ? ಜಾತ್ಯತೀತವೇ?
'ನಾವು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಬಿಜೆಪಿಗೆ ಲಾಭವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಡಿಎಂಕೆ ನನಗೆ ತಮ್ಮ ಜಾತ್ಯತೀತತೆಯ ವ್ಯಾಖ್ಯಾನವನ್ನು ಹೇಳಬಲ್ಲದೇ? ಮಹಾರಾಷ್ಟ್ರದಲ್ಲಿ ಶಿವಸೇನಾಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ನಿಮ್ಮ ಪ್ರಕಾರ ಶಿವಸೇನಾ ಜಾತ್ಯತೀತವೋ ಅಥವಾ ಕೋಮುವಾದಿಯೋ?' ಎಂದು ಪ್ರಶ್ನಿಸಿದರು.
ಡಿಎಂಕೆಗೆ ಅಹಂಕಾರ
'ದುರದೃಷ್ಟವಶಾತ್ ಡಿಎಂಕೆಗೆ ರಾಜಕೀಯ ಕೃತಜ್ಞತೆಯ ಕೊರತೆ ಇದೆ ಮತ್ತು ಅತ್ಯಂತ ಅಹಂಕಾರ ಪಕ್ಷವಾಗಿದೆ. ಹಾಗೆಯೇ ಡಿಎಂಕೆಯ ಮಿತ್ರ ಪಕ್ಷ ಒಂದು ಕಡೆ ತಾನು ಜಾತ್ಯತೀತ ಎಂದು ಹೇಳಿಕೊಳ್ಳುತ್ತದೆ. ಆದರೆ ಇನ್ನೊಂದು ಕಡೆ ಕೇಂದ್ರ ಸರ್ಕಾರದ ಕಠಿಣ ಕಾನೂನುಗಳನ್ನು ಬೆಂಬಲಿಸುತ್ತದೆ' ಎಂದು ಯುಎಪಿಎ ಕಾಯ್ದೆಯನ್ನು ಕಾಂಗ್ರೆಸ್ ಬೆಂಬಲಿಸಿದ್ದರ ವಿರುದ್ಧ ಕಿಡಿಕಾರಿದರು.