ವಿಷ್ಣುವಿನ ಹನ್ನೊಂದನೇ ಅವತಾರ ಜಯಲಲಿತಾ ಎಂದ ಎಐಎಡಿಎಂಕೆ ಶಾಸಕ
ಚೆನ್ನೈ, ಜೂನ್ 15: ಜಯಲಲಿತಾ ವಿಷ್ಣುವಿನ ಹನ್ನೊಂದನೇ ಅವತಾರವಂತೆ. ಹೀಗೆ ಹೇಳಿರುವುದು ಎಐಎಡಿಎಂಕೆ ಶಾಸಕ ಮಾರಿಯಪ್ಪನ್ ಕೆನಡಿ. ಅದೂ ತಮಿಳುನಾಡಿನ ವಿಧಾನಸಭೆಯಲ್ಲಿ.
ಜಯಲಲಿತಾರಿಂದ ಪ್ರೇರಣೆ ಪಡೆದು ಹಿಲರಿ ಕ್ಲಿಂಟನ್ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದಾರೆ ಎಂದು ಎಐಎಡಿಎಂಕೆ ವ್ಯಕ್ತಿಯೊಬ್ಬರು ಈ ಹಿಂದೆ ಹೇಳಿದ್ದರು. ಆದರೆ ಇಂಥ ವಿಚಿತ್ರ ಹೇಳಿಕೆಗಳಿಗೆ ಕಿರೀಟ ಎನಿಸುವಂಥ ಮಾತನ್ನು ಉನ್ನತ ಶಿಕ್ಷಣಕ್ಕೆ ನೀಡುವ ಅನುದಾನಕ್ಕೆ ಸಂಬಂಧಪಟ್ಟ ಚರ್ಚೆ ನಡೆಯುವ ವೇಳೆ ಶಾಸಕ ಮಾರಿಯಪ್ಪನ್ ಕೆನಡಿ ಆಡಿದ್ದಾರೆ.
ತಮ್ಮ ಭಾಷಣದ ವೇಳೆ ವಿಷ್ಣುವಿನ ಹತ್ತು ಅವತಾರಗಳನ್ನು ಹೇಳಿದ ಅವರು, ಜಯಲಲಿತಾ ಹನ್ನೊಂದನೇ ಅವತಾರ ಅಂದಿದ್ದಾರೆ. ಆಕೆಗೆ ಪರ್ಯಾಯ ಅಂದರೆ ಶಶಿಕಲಾ. ಪಕ್ಷಕ್ಕೆ ಮಾರ್ಗದರ್ಶನ ಮಾಡಲು ಅವರೇ ಸರಿ ಎಂದಿದ್ದಾರೆ. ಆ ನಂತರ ಟಿಟಿವಿ ದಿನಕನ್ ನನ್ನು ದಾರಿದೀಪ, ಪಕ್ಷದ ಭವಿಷ್ಯ ಎಂದೆಲ್ಲ ವಾಚಾಮಗೋಚರ ಹೊಗಳಿದ್ದಾರೆ.
ಜಯಾ ಬಂಗಲೆ ಪೊಯೆಸ್ ಗಾರ್ಡನ್ ನಲ್ಲಿ ರಾತ್ರಿ ಅಳುವ ಹೆಂಗಸಿನ ಧ್ವನಿ!
ಜಯಲಲಿತಾ ಬಗ್ಗೆ ಈ ಹಿಂದೆ ಶಶಿಕಲಾ ಕೂಡ ಅಂಥದ್ದೇ ಮಾತನಾಡಿದ್ದರು. ಪ್ರತಿ ದಿನ ಅಮ್ಮ ಆತ್ಮ ನನಗೆ ಹೇಳುತ್ತದೆ. ನಾನು ನಿನಗೆ ಈ ಒಂದೂವರೆ ಕೋಟಿ ಜನರ ಜವಾಬ್ದಾರಿ ವಹಿಸಿದ್ದೇನೆ ಎಂದಿದ್ದರು. ಮುಂದಿನ ಸರದಿ ಒ ಪನ್ನೀರ್ ಸೆಲ್ವಂ ಅವರದಾಗಿತ್ತು. ಜಯಾ ಸಮಾಧಿ ಎದುರು ಧ್ಯಾನ ಮಾಡಿದ್ದರು ಒಪಿಎಸ್.
ಜಯಾ ಸಮಾಧಿ ಮುಂದೆ ಕುಳಿತು ಪನ್ನೀರ್ ಸೆಲ್ವಂ ಮಾಡುತ್ತಿರುವುದೇನು?
ಸಟಕ್ಕನೆ ಎದ್ದವರೇ, ಇಲ್ಲಿಗೆ ಬರಲು ಒತ್ತಾಯಿಸಿದ್ದೇ ಅಮ್ಮನ ಆತ್ಮ. ನನಗೆ ನಿಜ ಹೇಳುವಂತೆ ಆಜ್ಞೆ ಮಾಡಿದೆ ಎಂದಿದ್ದರು. ಇನ್ನು ಪಕ್ಷದ ಕೌನ್ಸಿಲರ್ ಎಂ ಸ್ವಾಮಿನಾಥನ್ ತಂಜಾವೂರಿನಲ್ಲಿ ಜಯಾಗಾಗಿ ದೇವಸ್ಥಾನವನ್ನೇ ಕಟ್ಟಿದ್ದಾರೆ. ಅದು ಆಕೆ ತೀರಿಕೊಂಡ ಹತ್ತು ದಿನದ ಒಳಗಾಗಿ. ಚುನಾವಣೆ ಪ್ರಚಾರ ಹಾಗೂ ಸಭೆಗಳಲ್ಲಿ ಜಯಾರನ್ನು ದೇವತೆಯಂತೆಯೇ ಬಿಂಬಿಸಲಾಗುತ್ತಿತ್ತು.