ಕೊನೆಗೂ ಎಐಎಡಿಎಂಕೆ ಬಣಗಳ ವಿಲೀನ ಸಕ್ಸಸ್
ಚೆನ್ನೈ, ಆಗಸ್ಟ್ 21: ಹಲವು ದಿನಗಳಿಂದ ತಮಿಳುನಾಡಿನ ಎಐಎಡಿಎಂಕೆ ಪಕ್ಷದಲ್ಲಿ ನಡೆಯುತ್ತಿದ್ದ ಜಂಗೀಕುಸ್ತಿ ಕೊನೆಯಾಗಿದೆ. ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಒ ಪನ್ನೀರ್ ಸೆಲ್ವಂ ಬಣಗಳು ಕೊನೆಗೂ ಒಂದಾಗಿವೆ.
AIADMK ವಿಲೀನ: ಪಳನಿಸ್ವಾಮಿ ಸಿಎಂ, ಪನ್ನೀರ್ ಸೆಲ್ವಂಗೆ ಪಕ್ಷದ ಹೊಣೆ
ಚೆನ್ನೈನಲ್ಲಿರು ಎಐಎಡಿಎಂಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಎರಡೂ ಬಣಗಳು ಒಂದಾಗಿರುವುದನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಇಂದು ಸಂಜೆ 5 ಗಂಟೆಗೆ ಸಂಪುಟ ವಿಸ್ತರಣೆ ನಡೆಯಲಿದ್ದು ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈಗಾಗಲೇ ನೂತನ ಸಚಿವರ ಪಟ್ಟಿಯನ್ನು ರಾಜ್ಯಪಾಲ ವಿದ್ಯಾಸಾಗರ ರಾವ್ ರಿಗೆ ರವಾನಿಸಲಾಗಿದೆ.
ಮುಖ್ಯಮಂತ್ರಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಮುಂದುವರಿಯಲಿದ್ದಾರೆ. ಒ ಪನ್ನೀರ್ ಸೆಲ್ವಂಗೆ ಉಪ ಮುಖ್ಯಮಂತ್ರಿ ಮತ್ತು ಹಣಕಾಸು ಖಾತೆ ನೀಡಲಾಗಿದೆ. ಇನ್ನು ಪಕ್ಷದ ಸಂಚಾಲಕ ಹುದ್ದೆಯನ್ನೂ ಪನ್ನೀರ್ ಸೆಲ್ವಂ ನಿಭಾಯಿಸಲಿದ್ದಾರೆ.
ಮುಖ್ಯಮಂತ್ರಿ ಪಳನಿಸ್ವಾಮಿ ಪಕ್ಷದ ಸಹ ಸಂಚಾಲಕರಾಗಲಿದ್ದಾರೆ. ಕೆಪಿ ಮುನಿಸ್ವಾಮಿ ಉಪ ಸಂಚಾಲಕ ಹುದ್ದೆ ನಿಭಾಯಿಸಲಿದ್ದಾರೆ. 11 ಸಚಿವರ ಸಮಿತಿ ಪಕ್ಷವನ್ನು ಮುನ್ನಡೆಸಲಿದೆ.
ವಿಲೀನದ ನಂತರ ಮಾತನಾಡಿರುವ ಪಳನಿಸ್ವಾಮಿ, "ಎಐಎಡಿಎಂಕೆಯ ಎರಡೆಲೆ ಗುರುತನ್ನು ಮರಳಿ ಪಡೆಯುವುದು ನಮ್ಮ ಸದ್ಯದ ಪ್ರಮುಖ ಗುರಿ," ಎಂದು ಹೇಳಿದ್ದಾರೆ.