ತಮಿಳುನಾಡಿನಲ್ಲಿ ಏನಿದು ಕಲ್ಲಕುರುಚಿ ಶಾಸಕರ ''ಕಲ್ಯಾಣ'' ಸುದ್ದಿ!
ಚೆನ್ನೈ, ಅ. 6: ಕಲ್ಲಕುರಿಚಿ ಎಐಎಡಿಎಂಕೆಯ 35 ವರ್ಷದ ದಲಿತ ಶಾಸಕ ಹಾಗೂ 19 ವರ್ಷದ ಬ್ರಾಹ್ಮಣ ಯುವತಿ ಕಲ್ಯಾಣ ಸದ್ಯ ತಮಿಳುನಾಡಿನ ಬಹುಚರ್ಚಿತ, ವಿವಾದಿತ ಸುದ್ದಿಯಾಗಿದೆ.
ಅಂತರ್ಜಾತಿ ವಿವಾಹದ ಬೆನ್ನಲ್ಲೇ ನನ್ನ ಪುತ್ರಿ ಸೌಂದರ್ಯಳನ್ನು ಶಾಸಕ ಪ್ರಭು ಕಡೆಯವರು ಅಪಹರಿಸಿದ್ದಾರೆ ಎಂದು ವಧುವಿನ ತಂದೆ ಎಸ್ ಸ್ವಾಮಿನಾಥನ್(48) ಆರೋಪಿಸಿದ್ದಾರೆ. ನಂತರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೂ ಯತ್ನಿಸಿದ್ದಾರೆ. ಇದೀಗ ನವ ದಂಪತಿ ವಿಡಿಯೋ ಸಂದೇಶ ನೀಡಿದ್ದು, ನಾವು ಪರಸ್ಪರ ಪ್ರೇಮಿಸಿದ್ದೆವು, ಸೌಂದರ್ಯ ಸ್ವಇಚ್ಛೆಯಿಂದ ಮನೆಯಿಂದ ಬಂದಿದ್ದಾರೆ. ಇದು ಮೋಸದಿಂದ ಆಗಿರುವ ಮದುವೆ ಏನಲ್ಲ ಎಂದಿದ್ದಾರೆ.
ವಧು ಸೌಂದರ್ಯ (19) ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಕಲ್ಲಕುರಿಚಿ ಕ್ಷೇತ್ರವನ್ನು ಪ್ರತಿನಿಧಿಸುವ ತಿಯಾಗದುರಗಂ ನಿವಾಸಿ ಪ್ರಭು ಅವರು ಬಿ ಟೆಕ್ ಪದವೀಧರರಾಗಿದ್ದಾರೆ. ಅಕ್ಟೋಬರ್ 5ರಂದು ಸೋಮವಾರ ಬೆಳಗ್ಗೆ ಪ್ರಭು ಅವರ ಮನೆಯಲ್ಲಿ ಇಬ್ಬರು ಮದುವೆಯಾಗಿದ್ದಾರೆ.
ಏನಿದು ಗಲಾಟೆ ಕಲ್ಯಾಣ:
ತಿರುಚಂಗೋಡಿನ ಆರ್ಟ್ಸ್ ಕಾಲೇಜಿನಲ್ಲಿ 2ನೇ ಪಿಯುಸಿ ಓದುತ್ತಿರುವ ನನ್ನ ಮಗಳು ಸೌಂದರ್ಯಳನ್ನು ಮರಳು ಮಾಡಿ, ಪ್ರೇಮಿಸುವ ನಾಟಕವಾಡಿ ಶಾಸಕ ಪ್ರಭು ನನ್ನ ಮಗಳನ್ನು ಕಿಡ್ನಾಪ್ ಮಾಡಿದ್ದಾನೆ ಎಂದು ಅಕ್ಟೋಬರ್ 01 ರಂದು ಸ್ವಾಮಿನಾಥನ್ ಆರೋಪಿಸಿದ್ದರು. ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ವಿಷಯವನ್ನು ಪೊಲೀಸರ ಮುಂದೆ ಹೇಳಲು ಸಾಧ್ಯವಿಲ್ಲ. ಪೊಲೀಸ್ ಠಾಣೆಗೆ ಹೋಗದಂತೆ ಜೀವ ಬೆದರಿಕೆ ಹಾಕಿದ್ದಾರೆ ಎಂದಿದ್ದರು.
ಮದುವೆ ಮಂಟಪದ ಮುಂದೆ ಗಲಾಟೆ
ಸೋಮವಾರ ಬೆಳಗ್ಗೆ ಮದುವೆ ಜರುಗುತ್ತಿರುವ ಬಗ್ಗೆ ತಿಳಿಸಿದ ಸ್ವಾಮಿನಾಥನ್ ಅವರು ಮಂಟಪದ ಮುಂದೆ ನಿಂತು, ತಮ್ಮ ಮೈಮೇಲಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಅಲ್ಲಿದ್ದ ಪೊಲೀಸ್ ಸಿಬ್ಬಂದಿ ತಕ್ಷಣವೇ ತಡೆದು ಬುದ್ಧಿ ಹೇಳಿದ್ದಾರೆ. ಜೊತೆಗೆ ಸ್ವಾಮಿನಾಥನ್ ವಿರುದ್ಧಭಾರತೀಯ ದಂಡ ಸಂಹಿತೆ ಸೆಕ್ಷನ್ 309ರಂತೆ ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿಕೊಳ್ಳಲು ಸ್ಥಳೀಯ ಠಾಣೆಗೆ ಸೂಚಿಸಿದ್ದಾರೆ. ಅದರಂತೆ ಪ್ರಕರಣ ದಾಖಲಾಗಿ ಎಫ್ಐಆರ್ ಹಾಕಲಾಗಿದೆ.
15 ವರ್ಷದಿಂದ ಪ್ರಭು ಬಲ್ಲ ಸ್ವಾಮಿನಾಥನ್
ಚಿಕ್ಕ ವಯಸ್ಸಿನಿಂದಲೂ ಪ್ರಭು ಸ್ವಾಮಿನಾಥನ್ ಮನೆಯಲ್ಲೇ ಮನೆ ಮಗನಂತೆ ಬೆಳೆದ ಹುಡುಗ. ಹೀಗಾಗಿ ಸ್ವಾಮಿನಾಥನ್ ಕುಟುಂಬಕ್ಕೆ ಚಿರಪರಿಚಿತ. ಆದರೆ, ತಮ್ಮ ಮಗಳ ಜೊತೆ ಪ್ರಭು ಯಾವಾಗ ಪ್ರೀತಿ ಮಾಡಲು ಶುರು ಮಾಡಿದ ಎಂಬುದು ತಿಳಿಯದೇ ಹೋಗಿದೆ. ಆದರೆ ನಾಲ್ಕು ವರ್ಷದ ಹಿಂದೆ ಒಂದು ದಿನ ಧೈರ್ಯ ಮಾಡಿದ ಪ್ರಭು, ಸೌಂದರ್ಯಳನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ. ಆದರೆ ಸ್ವಾಮಿನಾಥನ್ ಅವರಿಗೆ ಆಶ್ಚರ್ಯ, ಸಿಟ್ಟು ಒಮ್ಮೆಗೆ ಬಂದಿದೆ. ಅವಳಿನ್ನೂ ಮೈನರ್ ಮದುವೆ, ಪ್ರೀತಿ ವಿಷಯ ಈಗ ಬೇಡ ಎಂದು ಪ್ರಭುಗೆ ಬುದ್ಧಿ ಹೇಳಿದ್ದಾರೆ.
|
ಶಾಸಕ ಪ್ರಭು ವಿಡಿಯೋ ಪ್ರತಿಕ್ರಿಯೆ
ಶಾಸಕ ಪ್ರಭು ಹೇಳುವಂತೆ, ''ಆ ಸಮಯಕ್ಕೆ ಅವರಿಗೆ ಜಾತಿ ಅಡ್ಡ ಬಂದಿರಲಿಲ್ಲ. ಇಬ್ಬರ ನಡುವೆ ವಯಸ್ಸಿನ ಅಂತರವಿದೆ ಎಂದಿದ್ದರು. ನಾನು ಕೂಡಾ ಅವಳಿಗೆ 18 ತುಂಬುವ ತನಕ ಕಾದು ನಂತರ ಮದುವೆಗೆ ಮುಂದಾದೆ, ಇಬ್ಬರು ಪ್ರೇಮಿಸಿ ಮದುವೆಯಾಗಿದ್ದೇವೆ, ಕಿಡ್ನಾಪ್, ಕೊಲೆ ಬೆದರಿಕೆ ಎಲ್ಲವೂ ಕಟ್ಟುಕಥೆ, ಕಾನೂನು ಪ್ರಕಾರವೇ ನಡೆದುಕೊಂಡಿದ್ದೇನೆ'' ಎಂದಿದ್ದಾರೆ.