ತಮಿಳುನಾಡು ಚುನಾವಣೆ:ಎಐಎಡಿಎಂಕೆ,ಬಿಜೆಪಿಯಿಂದ ಸ್ಥಾನ ಹಂಚಿಕೆ ಕುರಿತು ಮಾತುಕತೆ
ಚೆನ್ನೈ,ಫೆಬ್ರವರಿ 27: ತಮಿಳುನಾಡು ವಿಧಾನಸಭಾ ಚುನಾವಣೆ ಸನ್ನಿಹಿತವಾಗಿದೆ, ಏಪ್ರಿಲ್ 6 ರಂದು ಚುನಾವಣೆ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಎಐಎಡಿಎಂಕೆ ಹಾಗೂ ಬಿಜೆಪಿ ಸ್ಥಾನ ಹಂಚಿಕೆ ಕುರಿತು ಮಾತುಕತೆ ಆರಂಭಿಸಿದೆ.ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಹಿರಿಯ ನಾಯಕ ಎಂ ಚಕ್ರವರ್ತಿ, ನಾವು ಗೆಲ್ಲಬಹುದೆಂದು ಗುರುತಿಸಲಾಗಿರುವ 60 ವಿಧಾನಸಭಾ ಕ್ಷೇತ್ರಗಳಲ್ಲಿ ಮೈತ್ರಿ ಮಾಡಿಕೊಳ್ಳುವುದಕ್ಕೆ ಕೇಳುತ್ತಿದ್ದೇವೆ.
ತಮಿಳುನಾಡು ಚುನಾವಣೆ: ಮತದಾನ, ಫಲಿತಾಂಶ ಯಾವಾಗ?
ಎಐಎಡಿಎಂಕೆಗೆ ಪ್ರತ್ಯೇಕವಾದ ಯೋಜನೆಗಳಿರಬಹುದು ಎಂದು ಅವರು ತಿಳಿಸಿದ್ದಾರೆ. ಎಐಎಡಿಎಂಕೆ ಪಿಎಂಕೆ ನಿಯೋಗದ ಜೊತೆ ಇಂದು ಸಂಜೆ ಪ್ರತ್ಯೇಕ ಸಭೆ ನಡೆಸಲಿದೆ. ನಟ, ರಾಜಕಾರಣಿ ವಿಜಯ್ ಕಾಂತ್ ನೇತೃತ್ವದ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಮ್ ಹಾಗೂ ಜಿಕೆ ವಾಸನ್ ಅವರ ತಮಿಳ್ ಮಾಣಿಲ ಕಾಂಗ್ರೆಸ್ ಎಐಎಡಿಎಂಕೆಯ ಮಿತ್ರ ಪಕ್ಷಗಳಾಗಿವೆ.
ಶೀಘ್ರವೇ ಎರಡೂ ಪಕ್ಷಗಳು ಒಮ್ಮತಕ್ಕೆ ಬರಲಿದ್ದು, ಸ್ಥಾನ ಹಂಚಿಕೆಗೆ ಸಂಬಂಧಿಸಿದ ಘೋಷಣೆಯ ನಿರೀಕ್ಷೆ ಇದೆ.ಕೇಂದ್ರ ಸಚಿವ ಕೃಷ್ಣ ರೆಡ್ಡಿ, ಜನರಲ್ ವಿ.ಕೆ ಸಿಂಗ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ತಮಿಳುನಾಡು ಉಸ್ತುವಾರಿ ಸಿಟಿ ರವಿ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಎಲ್ ಮುರುಗನ್ ಅವರು ಮುಖ್ಯಮಂತ್ರಿ, ಎಐಎಡಿಎಂಕೆ ಸಹ ಸಂಯೋಜಕ ಕೆ ಪಳನಿಸ್ವಾಮಿ, ಎಐಎಡಿಎಂಕೆ ಸಂಯೋಜಕ ಹಾಗೂ ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರುಗಳೊಂದಿಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೇಶವ ವಿನಾಯಗನ್ ಸಹ ಭಾಗಿಯಾಗಿದ್ದರು.
ನೆರೆಯ ತಮಿಳುನಾಡಿನಲ್ಲಿ ಈಗಾಗಲೇ ಚುನಾವಣಾ ಚಟುವಟಿಕೆಗಳು ಬಿರುಸುಗೊಂಡಿವೆ. ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟ ಹಾಗೂ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟಗಳು ಪ್ರಮುಖವಾಗಿ ಸೆಣಸಾಟ ನಡೆಸುವ ನಿರೀಕ್ಷೆಯಿದೆ. ಕಮಲ ಹಾಸನ್ ಅವರ ಪಕ್ಷ ಸೇರಿದಂತೆ ಇತರೆ ಪಕ್ಷಗಳೂ ಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.
ತಮಿಳುನಾಡು ವಿಧಾನಸಭೆಯ ಅವಧಿಯು ಮೇ 24ರಂದು ಅಂತ್ಯಗೊಳ್ಳಲಿದೆ. ಚುನಾವಣೆಯ ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ. ಹೀಗಾಗಿ ಅವಧಿ ಪೂರ್ಣಗೊಳ್ಳುವ ಮುನ್ನವೇ ಹಾಲಿ ವಿಧಾನಸಭೆ ವಿಸರ್ಜನೆಯಾಗಿ ಹೊಸ ಸರ್ಕಾರ ಸ್ಥಾಪನೆಯಾಗಬಹುದು. ಆದರೆ ಇದು ಫಲಿತಾಂಶವನ್ನು ಅವಲಂಬಿಸಿದೆ. ತಮಿಳುನಾಡು ವಿಧಾನಸಭೆಯ ಒಟ್ಟು ಸೀಟುಗಳ ಪೈಕಿ 44 ಕ್ಷೇತ್ರಗಳು ಪರಿಶಿಷ್ಟ ಜಾತಿ ಹಾಗೂ ಎರಡು ಸೀಟುಗಳು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೀಸಲಾಗಿವೆ.