ತಮಿಳುನಾಡು ಚುನಾವಣೆಯಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿ: ಪಳನಿಸ್ವಾಮಿ ಘೋಷಣೆ
ಚೆನ್ನೈ, ನವೆಂಬರ್ 21: ತಮಿಳುನಾಡಿನಲ್ಲಿ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗಿನ ಮೈತ್ರಿಯನ್ನು ಎಐಎಡಿಎಂಕೆ ಮುಂದುವರಿಸಲಿದೆ. ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚೆನ್ನೈ ಭೇಟಿಯ ಸಂದರ್ಭದಲ್ಲಿ ಮೈತ್ರಿ ಮುಂದುವರಿಸುವ ಬಗ್ಗೆ ಮುಖ್ಯಮಂತ್ರಿ ಇ. ಪಳನಿಸ್ವಾಮಿ ಶನಿವಾರ ಈ ಘೋಷಣೆ ಮಾಡಿದ್ದಾರೆ.
'ಲೋಕಸಭೆ ಚುನಾವಣೆಯ ವೇಳೆ ಮಾಡಿಕೊಳ್ಳಲಾದ ಮೈತ್ರಿಯು ವಿಧಾನಸಭೆ ಚುನಾವಣೆಯಲ್ಲಿ ಮುಂದುವರಿಯಲಿದೆ. ನಾವು ಹತ್ತು ವರ್ಷಗಳ ಉತ್ತಮ ಆಡಳಿತ ನೀಡಿದ್ದೇವೆ. ನಮ್ಮ ಮೈತ್ರಿಕೂಟವು 2021ರ ವಿಧಾನಸಭೆ ಚುನಾವಣೆಯನ್ನೂ ಗೆಲ್ಲಲಿದೆ. ತಮಿಳುನಾಡು ಎಂದಿಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತದೆ' ಎಂದು ಪಳನಿಸ್ವಾಮಿ ಹೇಳಿದ್ದಾರೆ.
ಅಧಿಕಾರಕ್ಕೆ ಬಂದರೆ ಜಯಲಲಿತಾ ನಿಗೂಢ ಸಾವಿನ ತನಿಖೆ: ಸ್ಟಾಲಿನ್ ಹೇಳಿಕೆ
9 ವರ್ಷಕ್ಕೂ ಹೆಚ್ಚು ಸಮಯದಿಂದ ಸುದೀರ್ಘ ಆಡಳಿತ ನಡೆಸುತ್ತಿರುವ ಎಐಎಡಿಎಂಕೆ, ರಾಜ್ಯದಲ್ಲಿ ಮತ್ತೊಮ್ಮೆ ಡಿಎಂಕೆಯನ್ನು ಮಣಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ಸೀಟುಗಳ ಹಂಚಿಕೆ ಮಾಡಿಕೊಳ್ಳುವ ನಿರೀಕ್ಷೆಯಿದೆ.
ಅಮಿತ್ ಶಾ ತಮಿಳುನಾಡು ಭೇಟಿ: 'ಗೋಬ್ಯಾಕ್ ಅಮಿತ್ ಶಾ' ಟ್ವಿಟ್ಟರ್ ನಲ್ಲಿ ಭಾರೀ ಟ್ರೆಂಡಿಂಗ್
2011ರ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆಯನ್ನು ಭಾರಿ ಅಂತರದಿಂದ ಮಣಿಸಿ ಎಐಎಡಿಎಂಕೆ ಅಧಿಕಾರಕ್ಕೆ ಬಂದಿತ್ತು. ಆಗ ಜೆ ಜಯಲಲಿತಾ ಪಕ್ಷವನ್ನು ಮುನ್ನಡೆಸಿದ್ದರು. 2016ರ ಚುನಾವಣೆಯಲ್ಲಿಯೂ ಎಐಎಡಿಎಂಕೆ ಗೆಲುವು ಸಾಧಿಸಿತ್ತು. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ಭರ್ಜರಿ ಪ್ರದರ್ಶನ ನೀಡಿತ್ತು. ಕಾಂಗ್ರೆಸ್ ಜತೆ ಸೀಟು ಹಂಚಿಕೆ ಮಾಡಿಕೊಂಡಿದ್ದ ಡಿಎಂಕೆ, 39 ಲೋಕಸಭೆ ಸೀಟುಗಳಲ್ಲಿ ಕೇವಲ ಒಂದು ಕ್ಷೇತ್ರವನ್ನು ಎಐಎಡಿಎಂಕೆಗೆ ಬಿಟ್ಟುಕೊಟ್ಟು, ಉಳಿದ ಎಲ್ಲ ಸೀಟುಗಳಲ್ಲಿ ಜಯಭೇರಿ ಬಾರಿಸಿತ್ತು. 2016ರಲ್ಲಿ ಜಯಲಲಿತಾ ಮತ್ತು 2018ರಲ್ಲಿ ಕರುಣಾನಿಧಿ ನಿಧನದ ಬಳಿಕ ನಡೆದ ಮೊದಲ ಚುನಾವಣೆ ಇದಾಗಿತ್ತು. ಈ ಇಬ್ಬರೂ ಪ್ರಮುಖ ನಾಯಕರಿಲ್ಲದೆ ಮೊದಲ ಬಾರಿಗೆ ತಮಿಳುನಾಡು ವಿಧಾನಸಭೆ ಚುನಾವಣೆಗೆ ಅಡಿಯಿರಿಸುತ್ತಿದೆ.