ನೀರಿನ ಹರಿವು; 11 ವರ್ಷಗಳ ಬಳಿಕ ದಾಖಲೆ ಬರೆದ ಕಾವೇರಿ ನದಿ
ಚೆನ್ನೈ, ನವೆಂಬರ್ 30; ಕಾವೇರಿ ನದಿಯಲ್ಲಿ 11 ವರ್ಷಗಳ ಬಳಿಕ ಭಾರೀ ಪ್ರಮಾಣದ ನೀರಿನ ಹರಿವು ದಾಖಲಾಗಿದೆ. ಅಕ್ಟೋಬರ್-ಡಿಸೆಂಬರ್ ನಡುವಿನ ಈಶಾನ್ಯ ಮುಂಗಾರು ಅವಧಿಯಲ್ಲಿ ಇಷ್ಟು ಪ್ರಮಾಣದ ನೀರು ನದಿಯಲ್ಲಿ ಹರಿಯುತ್ತಿದೆ. ಬಿಳಿಗೊಂಡ್ಲು ಮಾಪನ ಕೇಂದ್ರದಲ್ಲಿ ದಾಖಲಾದಂತೆ ಅಕ್ಟೋಬರ್ 1 ರಿಂದ 118.62 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ.
ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಜಟಾಪಟಿ ನಡೆಯುತ್ತದೆ. ಈ ವರ್ಷ ಕರ್ನಾಟಕದ ಮಂಡ್ಯದಲ್ಲಿರುವ ಕಾವೇರಿ ಕೊಳ್ಳದ ಪ್ರಮುಖ ಜಲಾಶಯ ಕೆಆರ್ಎಸ್ ಭರ್ತಿಯಾಗಿದ್ದು ಅಕ್ಟೋಬರ್ ಅಂತ್ಯದಲ್ಲಿ.
ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ಕೊಟ್ಟ 'ಕಾವೇರಿ'
ಆದರೆ ಕೆಆರ್ಎಸ್ ಭರ್ತಿಯಾಗದಿದ್ದರೂ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ಸೂಚನೆಯಂತೆ ಕರ್ನಾಟಕ ತಮಿಳುನಾಡಿಗೆ ನೀರು ಹರಿಸುತ್ತಲೇ ಇತ್ತು. ಬಿಳಿಗೊಂಡ್ಲು ಮಾಪನ ಕೇಂದ್ರದಲ್ಲಿ ದಾಖಲಾದಂತೆ ಅಕ್ಟೋಬರ್ 1 ರಿಂದ 118.62 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. 2010ರಲ್ಲಿನ ನೈಋತ್ಯ ಮುಂಗಾರು ಸಮಯದಲ್ಲಿ ಡ್ಯಾಂನಲ್ಲಿ 107 ಅಡಿ ಟಿಎಂಸಿ ಅಡಿ ನೀರಿತ್ತು. 11 ವರ್ಷಗಳ ಬಳಿಕ ಅತಿ ಹೆಚ್ಚು ನೀರಿನ ಹರಿವು ದಾಖಲಾಗಿದೆ.
ಕೆಆರ್ಎಸ್ ಭರ್ತಿ; ನದಿ ಪಾತ್ರದ ಜನರಿಗೆ ಎಚ್ಚರಿಕೆ
ಕರ್ನಾಟಕ-ತಮಿಳುನಾಡು ಗಡಿಭಾಗದಲ್ಲಿರುವ ಬಿಳಿಗೊಂಡ್ಲು ಮಾಪನ ಕೇಂದ್ರದಲ್ಲಿ 1974-75ರಿಂದ 10 ಸಂದರ್ಭದಲ್ಲಿ ಮಾತ್ರ ನೀರಿನ ಹರಿವು ಮೂರಂಕಿ ದಾಟಿದ ಅಂಕಿ ಅಂಶಗಳಿವೆ. ಅದರಲ್ಲಿ ಈ ವರ್ಷದ ನೀರಿನ ಹರಿವು ಸಹ ಸೇರಿದೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸೂಚಿಸಿದ ಪ್ರಾಧಿಕಾರ
ಕಾವೇರಿ ನದಿಯಲ್ಲಿ ಮೂರು ತಿಂಗಳ ಅವಧಿಯಲ್ಲಿ (ಅಕ್ಟೋಬರ್-ಡಿಸೆಂಬರ್) ಇದುವರೆಗಿನ ಅತಿ ಹೆಚ್ಚು ನೀರಿನ ಹರಿವು 2005ರಲ್ಲಿ 167 ಟಿಎಂಸಿ ಅಡಿ, 2000ದಲ್ಲಿ 152 ಟಿಎಂಸಿ ಅಡಿ ಮತ್ತು 1977ರಲ್ಲಿ 137 ಟಿಎಂಸಿ ಅಡಿ ದಾಖಲಾಗಿದೆ.
ನವೆಂಬರ್ ತಿಂಗಳಿನಲ್ಲಿ ನೀರಿನ ಹರಿವು 70.34 ಟಿಎಂಸಿ ಅಡಿ ದಾಖಲಾಗಿದೆ. 47 ವರ್ಷಗಳಲ್ಲೇ ಇದು ಅತಿ ಹೆಚ್ಚಿನ ನೀರಿನ ಹರಿವು. 2010ರಲ್ಲಿ 61.18 ಟಿಎಂಸಿ ಅಡಿ ನೀರು ಹರಿದಿತ್ತು. ಕಳೆದ ತಿಂಗಳು ತಮಿಳುನಾಡು 48.28 ಟಿಎಂಸಿ ಅಡಿ ನೀರನ್ನು ಪಡೆದಿತ್ತು.
ನವೆಂಬರ್ 29ರ ಮಾಹಿತಿಯಂತೆ ನೀರು ಸಂಗ್ರಹ 210.08 ಟಿಎಂಸಿ ಆಗಿದೆ. ವಾಡಿಕೆಗಿಂತ 53.4 ಟಿಎಂಸಿ ನೀರು ಅಧಿಕವಾಗಿದೆ. ಕೆಆರ್ಎಸ್ನಿಂದ ಬಿಡುವ ನೀರು ಬಿಳಿಗೊಂಡ್ಲು ಮಾಪನ ಕೇಂದ್ರದ ಮೂಲಕ ಮೆಟ್ಟೂರು ಡ್ಯಾಂ ತಲುಪುತ್ತದೆ. ಮೆಟ್ಟೂರು ಡ್ಯಾಂ ಬಿಳಿಗೊಂಡ್ಲುವಿನಿಂದ 70 ಕಿ. ಮೀ. ದೂರದಲ್ಲಿದೆ.
120 ಅಡಿ ನೀರು ಸಂಗ್ರಹ ಸಾಮರ್ಥ್ಯದ ಮೆಟ್ಟೂರು ಜಲಾಶಯ ಭರ್ತಿಯಾದರೆ 93.47 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತದೆ. ಜಲಾಶಯಕ್ಕೆ 21,725 ಕ್ಯುಸೆಕ್ ಒಳಹರಿವು ಇದ್ದು, 22,830 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಭರ್ತಿಯಾದ ಕೆಆರ್ಎಸ್ ಡ್ಯಾಂ; ಕಾವೇರಿ ಕೊಳ್ಳದ ಪ್ರಮಖ ಜಲಾಶಯ ಕೆಆರ್ಎಸ್ ನೈಋತ್ಯ ಮುಂಗಾರು ಅವಧಿಯಲ್ಲಿ ಭರ್ತಿಯಾಗುತ್ತದೆ. ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲೇ ಭರ್ತಿಯಾಗುತ್ತಿದ್ದ ಜಲಾಶಯ ಈ ಬಾರಿ ಸೆಪ್ಟೆಂಬರ್ ಮಾಸಾಂತ್ಯವಾದರೂ ಭರ್ತಿಯಾಗಿರಲಿಲ್ಲ. ಇದರಿಂದಾಗಿ ರೈತರು ಮತ್ತು ಜನರು ಆತಂಕಗೊಂಡಿದ್ದರು.
ಆದರೆ ಅಕ್ಟೋಬರ್ ತಿಂಗಳಿನಲ್ಲಿ ಚಂಡಮಾರುತದ ಪ್ರಭಾವದಿಂದ ಸುರಿದ ಮಳೆಯಿಂದಾಗಿ ಅಕ್ಟೋಬರ್ ಅಂತ್ಯದಲ್ಲಿ ಡ್ಯಾಂ ಭರ್ತಿಯಾಯಿತು. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವೆಂಬರ್ ತಿಂಗಳಿನಲ್ಲಿ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿದರು.
ಈ ಬಾರಿ ಕೊಡಗು ಸೇರಿದಂತೆ ಕಾವೇರಿ ಕಣಿವೆಯಲ್ಲಿ ಪ್ರವಾಹ ಸೃಷ್ಟಿಸುವ ಮಳೆ ಮುಂಗಾರು ಅವಧಿಯಲ್ಲಿ ಸುರಿಯಲಿಲ್ಲ. ಹೀಗಾಗಿ ಕೆಆರ್ಎಸ್ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬರಲೇ ಇಲ್ಲ. ಜುಲೈ, ಆಗಸ್ಟ್ ತಿಂಗಳಲ್ಲಿ ಮಳೆ ಸುರಿಯಿತಾದರೂ ಜಲಾಶಯ ಭರ್ತಿಯಾಗುವಷ್ಟರ ಮಟ್ಟಿಗೆ ನೀರು ಜಲಾಶಯಕ್ಕೆ ಹರಿದು ಬರಲಿಲ್ಲ.
Recommended Video
2018ರ ನಂತರ ಮೂರು ವರ್ಷಗಳ ಕಾಲ ಭಾರೀ ಮಳೆ ಸುರಿದಿದ್ದರಿಂದ ಜಲಾಶಯ ಬೇಗ ಭರ್ತಿಯಾಗಿದ್ದಲ್ಲದೆ, ಅಪಾರ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗಿತ್ತು. ಈ ಬಾರಿ ತಡವಾದರೂ ಸಹ ಕಾವೇರಿ ಕಣಿವೆಯಲ್ಲಿ ಒಂದಿಷ್ಟು ಮಳೆಯಾಗಿ ಜಲಾಶಯ ಭರ್ತಿಯಾಗಿದೆ. ತಮಿಳುನಾಡು ರಾಜ್ಯಕ್ಕೆ ವಾಡಿಕೆಗಿಂತ ಹೆಚ್ಚಿನ ನೀರು ಹರಿದು ಹೋಗಿದ್ದು, ಕಾವೇರಿ ವಿವಾದ ತಣ್ಣಗಾಗಿದೆ.