ಬಿಜೆಪಿ ಸೇರಿದ ಬಹುಭಾಷಾ ಗ್ಲಾಮರ್ ನಟಿ ನಮಿತಾ
ಚೆನ್ನೈ, ಡಿಸೆಂಬರ್ 01: ದಕ್ಷಿಣ ಭಾರತದಲ್ಲಿ ಒಂದು ಕಾಲದಲ್ಲಿ ಪಡ್ಡೆಗಳ ನಿದ್ದೆಗೆಡೆಸಿದ್ದ ಗ್ಲಾಮರ್ ಬೊಂಬೆ ನಮಿತಾ ಅವರು ಭಾರತೀಯ ಜನತಾ ಪಕ್ಷ(ಬಿಜೆಪಿ)ವನ್ನು ಅಧಿಕೃತವಾಗಿ ಸೇರಿಕೊಂಡಿದ್ದಾರೆ.
ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ನಮಿತಾ ಅವರು ಪಕ್ಷಕ್ಕೆ ಸೇರ್ಪಡೆಗೊಂಡರು. ಅವರಿಗೆ ಬಿಜೆಪಿ ಬಾವುಟ ನೀಡಿ, ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡಲಾಯಿತು. ಇದಕ್ಕೂ ಮುನ್ನ ಹಿರಿಯ ನಟ ರಾಧಾರವಿ ಕೂಡಾ ಬಿಜೆಪಿ ಸೇರಿಕೊಂಡಿದ್ದಾರೆ. ಜೆಪಿ ನಡ್ಡಾ ಅವರು ಸದ್ಯ ಚೆನ್ನೈ ಪ್ರವಾಸದಲ್ಲಿದ್ದು, ತಮಿಳುನಾಡಿನಲ್ಲಿ ಬಿಜೆಪಿ ಬೆಳವಣಿಗೆಗೆ ಬೇಕಾದ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.
ವೈರಲ್ ಫೋಟೋ: ಮದುವೆ ನಂತರ ಈ ನಟಿ ಹೇಗೆ ಬದಲಾದ್ರು ನೋಡಿ
ನಮಿತಾ ಅವರು ರಾಜಕೀಯ ಸೇರುವ ಸುದ್ದಿ ಎರಡು ಮೂರು ವರ್ಷಗಳಿಂದ ಗಿರಕಿ ಹೊಡೆಯುತ್ತಲೇ ಇತ್ತು. ಕೈಲಿ ಸಿನಿಮಾ ಇಲ್ಲ, ರಾಜಕೀಯಕ್ಕೆ ಸೇರದೆ ಏನು ಮಾಡುತ್ತಾರೆ ಬಿಡಿ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ, ಸೂಕ್ತ ಕಾಲಕ್ಕೆ ಕಾಯುತ್ತಿದ್ದ ನಮಿತಾ ಅವರಿಗೆ 'ಅಮ್ಮ' ಪಕ್ಷದಿಂದ ರೆಡ್ ಕಾರ್ಪೆಟ್ ಸ್ವಾಗತ ಸಿಕ್ಕಿತ್ತು. ತಮಿಳುನಾಡು ವಿಧಾನಸಭೆ ಚುನಾವಣೆ 2016ರಲ್ಲಿ ಸ್ಟಾರ್ ಪ್ರಚಾರಕಿಯಾಗಿ ಸೀರೆಯುಟ್ಟು ಪ್ರಚಾರಕ್ಕಿಳಿದಿದ್ದರು.
ಹೌದು, ನಮಿತಾ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆಡಳಿತಾರೂಢ ಎಐಎಡಿಎಂಕೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಖುದ್ದು ಮುಖ್ಯಮಂತ್ರಿ ಜಯಲಲಿತಾ ಅವರು ನಮಿತಾ ಅವರನ್ನು ರಾಜಕೀಯವೆಂಬ ಹೊಸ ಗ್ಲಾಮರ್ ಲೋಕಕ್ಕೆ ಬರಮಾಡಿಕೊಂಡಿದ್ದರು.
ಜಯಲಲಿತಾ ಮೇಲಿನ ಅಭಿಮಾನ
ಹಿಂದೊಮ್ಮೆ ಸಿನಿಮಾ ಶೂಟಿಂಗ್ ಬೋರ್ ಎನಿಸಿ ತನ್ನ ಆಪ್ತ ಸಹಾಯಕಿ ಜೊತೆಗೂಡಿ ತಮಿಳುನಾಡಿನ ಹಳ್ಳಿಗಳಲ್ಲಿ ಸುತ್ತಾಡುತ್ತಿದ್ದ ಸಂದರ್ಭದಲ್ಲಿ ಸ್ಥೂಲ ಸುಂದರಿ ನಮಿತಾಳಿಗೆ ಎಲ್ಲೆಡೆ 'ಅಮ್ಮ'ನ ದರ್ಶನವಾಗಿದೆ. ಭಕ್ತಿ ಭಾವದಿಂದ ಅಮ್ಮನ ಬಗ್ಗೆ ಕೇಳಿ ತಿಳಿದುಕೊಂಡ ನಮಿತಾ ಮನದಲ್ಲಿ ರಾಜಕೀಯದಲ್ಲಿ ಬೆಳೆ ಬಿತ್ತುವ ಬಗ್ಗೆ ಆಸಕ್ತಿ ಬೆಳೆದಿದೆ. ಜಯಲಲಿತಾ ಅವರ ಕಾರ್ಯ ವೈಖರಿ ಬಗ್ಗೆ ನಾನು ಇಂಪ್ರೆಸ್ ಅಗಿದ್ದೇನೆ, ಜನಾನುರಾಗಿಯಾಗಿ ಅವರು ಮಾಡಿದ ಕಾರ್ಯಗಳು ಅನುಕರಣೀಯ ಎಂದಿದ್ದರು ನಮಿತಾ.
ಗ್ಲಾಮರ್ ನಟಿ ನಮಿತಾ ಈಗ ಜಯಲಲಿತಾ ಪರ ಪ್ರಚಾರಕಿ!
ಬಿಎ ಪದವೀಧರೆ ನಮಿತಾ
ನಮಿತಾ ಬಿಎ ಲಿಟರೇಚರ್ ನಲ್ಲಿ ಪದವಿ ಪಡೆದಿದ್ದಾರೆ. ಇಂಗ್ಲಿಷ್, ತಮಿಳು, ಹಿಂದಿ, ಗುಜರಾತಿಯಲ್ಲಿ ಮಾತನಾಡುವ ಚಾಕಚಕ್ಯತೆ ಇದೆ. ಸೂಕ್ಷ್ಮ ಮನಸ್ಸಿನ ನಮಿತಾ ವ್ಯವಹಾರ ಚತುರೆ. ಜನರ ಸಮಸ್ಯೆಗೆ ಸದಾಕಾಲ ಸ್ಪಂದಿಸುವ ಗುಣ ಆಕೆಗೆ ಮೊದಲಿನಿಂದಲೂ ಇದೆ. ರಾಜಕಾರಣಿಯಾಗಲು ಇಷ್ಟು ಅರ್ಹತೆ ಸಾಕು ಎನ್ನುತ್ತಾರೆ ಅಕೆ ಅಭಿಮಾನಿಗಳು.
ಮಿಸ್ ಸೂರತ್ ಪಟ್ಟ ಗಳಿಸಿದ್ದ ಬೆಡಗಿ
ಬಟ್ಟೆ ವ್ಯಾಪಾರಿಯೊಬ್ಬಳ ಮಗಳಾದ ಉತ್ತರದ ಬೆಡಗಿ 1998ರಲ್ಲಿ ನಮಿತಾರಿಗೆ ಮಿಸ್ ಸೂರತ್ ಪಟ್ಟ ಒಲಿಯಿತು. 2001ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ನಮಿತಾ ಕೇವಲ ಭಾರತದಲ್ಲಷ್ಟೆ ಅಲ್ಲ ವಿದೇಶಗಳಲ್ಲೂ ಅಪಾರ ಅಭಿಮಾನಿ ಬಳಗವಿದೆ. ಕನ್ನಡ ಚಿತ್ರರಂಗಕ್ಕೆ ನಮಿತಾ ಎಂಟ್ರಿ ಕೊಟ್ಟಿದ್ದು 2006ರಲ್ಲಿ. ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ನೀಲಕಂಠ ಚಿತ್ರದ ಮೂಲಕ. ಈ ಚಿತ್ರಕ್ಕೆ ಸಾಯಿ ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದರು. ತಮ್ಮ ಚೊಚ್ಚಲ ಚಿತ್ರದಲ್ಲೆ ನಮಿತಾ ಕನ್ನಡ ಪ್ರೇಕ್ಷಕರ ಹೃದಯ ಕದ್ದರು.
ಈಗಲೂ ಅಭಿಮಾನಿಗಳಿದ್ದಾರೆ
ತಮಿಳುನಾಡಿನಲ್ಲಿ ನಮಿತಾಗೆ ಅಪಾರ ಅಭಿಮಾನಿ ಬಳಗವಿದೆ. ಆದರೆ, ಅದೆಲ್ಲವೂ 2011ಕ್ಕೂ ಮುಂಚಿನ ಮಾತಾಯಿತು. ನಂತರ ರಾಜಕೀಯ ಸೇರಿ ಜಯಲಲಿತಾ ಅವರ ಜನಪ್ರಿಯ ಯೋಜನೆಗಳ ಪ್ರಚಾರ ಮಾಡುವ ಮೂಲಕಜನರ ಗಮನ ಸೆಳೆದರು. ''ರಾಜಕೀಯ ಸೇರಿ ಜನರಿಗೆ ಏನಾದರೂ ಒಳ್ಳೆದು ಮಾಡುವ ಹಂಬಲವಿದೆ. ಅಭಿಮಾನಿಗಳು ನನಗೆ ಕೊಟ್ಟಿರುವ ಪ್ರೀತಿಗೆ ನಾನು ಪ್ರತಿಯಾಗಿ ಏನಾದರೂ ಕೊಡಬೇಕು ಎನಿಸಿದೆ'' ಎಂದು ನಮಿತಾ ಹೇಳಿಕೊಂಡಿದ್ದರು. ನಂತರ ಸಿನಿಮಾ, ರಾಜಕೀಯದಿಂದಲೂ ದೂರಾಗಿ ಮದುವೆ ಮಾಡಿಕೊಂಡು ಹಾಯಾಗಿದ್ದವರು ಈಗ ಮತ್ತೆ ಸುದ್ದಿಯಲ್ಲಿದ್ದಾರೆ.