ತಮಿಳುನಾಡು ಸಿಎಂ ವಿರುದ್ಧ ದನಿಯೆತ್ತಿದ್ದ ನಟ ಬಂಧನ
ಚೆನ್ನೈ, ಸೆಪ್ಟೆಂಬರ್ 23: ತಮಿಳುನಾಡಿನ ಮುಖ್ಯಮಂತ್ರಿ ಓ ಪಳನಿಸ್ವಾಮಿ ಅವರ ವಿರುದ್ಧ ಅವಾಚ್ಯ ಶಬ್ದ ಬಳಸಿ, ನಿಂದಿಸಿದ ನಟ ಕಮ್ ರಾಜಕಾರಣಿ ಕರುಣಾಸ್ ಅವರನ್ನು ಚೆನ್ನೈ ಪೊಲೀಸರು ಭಾನುವಾರದಂದು ಬಂಧಿಸಿದ್ದಾರೆ.
ತಮಿಳು ಚಿತ್ರರಂಗದಲ್ಲಿ ಹಾಸ್ಯ ನಟನೆ ಮೂಲಕ ಮನೆಮಾತಾಗಿದ್ದ ಕರುಣಾಸ್ ಅವರು ನಂತರ ಎಐಎಡಿಎಂಕೆ ಪಕ್ಷ ಸೇರಿಕೊಂಡು ಶಾಸಕರಾದರು. ಸಾರ್ವಜನಿಕ ಸಭೆಯಲ್ಲಿ ತಮ್ಮ ಪಕ್ಷದ ನಾಯಕ, ಸಿಎಂ ಪಳನಿಸ್ವಾಮಿ ಅವರ ಜತೆಗೆ ನಿಲ್ಲಲು ಪೊಲೀಸರು ಅನುಮತಿ ನೀಡಲಿಲ್ಲ ಎಂದು ಇತ್ತೀಚೆಗೆ ಗರಂ ಆಗಿದ್ದರು.
ನಂತರ ನಡೆದ ಸಾರ್ವಜನಿಕ ಸಭೆಗಳಲ್ಲಿ ಪ್ರಚೋದನಾಕಾರಿ ಹಾಗೂ ಅವಹೇಳನಕಾರಿ ಭಾಷಣ ಮಾಡಿದ್ದಲ್ಲದೆ, ಜಾತಿ ಆಧಾರಿತ ಟೀಕೆ ಮಾಡಿದ್ದ ಆರೋಪ ಹೊಂದಿದ್ದಾರೆ. 47 ನಿಮಿಷಗಳ ದ್ವೇಷ ಭಾಷಣದ ವಿಡಿಯೋದಲ್ಲಿ ಸಿಎಂ, ಪೊಲೀಸ್ ಅಧಿಕಾರಿಗಳನ್ನು ನಿಂದಿಸಿದ್ದಾರೆ.
2017ರ ಕೂವತ್ತೂರು ರೆಸಾರ್ಟಿನಲ್ಲಿ ಎಐಎಡಿಎಂಕೆ ಶಾಸಕರನ್ನು ಕೂಡಿಟ್ಟಿದ್ದರ ಬಗ್ಗೆ ಮಾತನಾಡಬಲ್ಲೆ ಆದರೆ, ಸದ್ಯ ಇದು ಸಕಾಲವಲ್ಲ ಎಂದಿದ್ದಾರೆ. ಮುಕ್ಕುಲಥೊರ್ ಪುಲಿ ಪಡೈ ಎಂಬ ಜಾತಿ ಆಧಾರಿತ ಸಂಘಟನೆಯ ಮುಖ್ಯಸ್ಥರೂ ಆಗಿದ್ದಾರೆ.
2016ರ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಬೆಂಬಲದೊಂದಿಗೆ ಅವರು ರಾಮನಾಥಪುರಂ ಜಿಲ್ಲೆಯ ತಿರುವಡನೈ ವಿಧಾಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. ಆದರೆ, ಎಐಎಡಿಎಂಕೆಯ ರೆಬಲ್ ನಾಯಕ, ಆರ್ ಕೆ ನಗರ ಕ್ಷೇತ್ರದ ಶಾಸಕ ದಿನಕರ್ ಜತೆ ಹೆಚ್ಚಿನ ಸಂಪರ್ಕ ಹೊಂದಿರುವ ಕರುಣಾಸ್ ಅವರು ಪಳನಿಸ್ವಾಮಿ ಬಣದ ವಿರುದ್ಧ ಬಂಡಾಯ ಎದ್ದಿದ್ದಾರೆ.