ಅಶ್ಲೀಲ ಗೀತೆ ವಿವಾದ: ಬಂಧನ ಭೀತಿಯಲ್ಲಿ ನಟ ಸಿಂಬು
ಬೆಂಗಳೂರು, ಡಿ. 23: ತಮಿಳು ಚಿತ್ರರಂಗದ ಜನಪ್ರಿಯ ನಟ ಸಿಂಬು ಅಲಿಯಾಸ್ ಸಿಳಬರಸನ್ ಹಾಗೂ ಸಂಗೀತಗಾರ ಅನಿರುಧ್ ಅವರು ಪೊಲೀಸ್ ಬಂಧನ ಭೀತಿಯಲ್ಲಿದ್ದಾರೆ. ಅಶ್ಲೀಲ ಗೀತೆ ಹಾಡಿನ ವಿವಾದ ತಾರಕ್ಕೇರಿದ್ದು, ಕೊಯಮತ್ತೂರು ಹಾಗೂ ಚನ್ನೈ ಪೊಲೀಸರು ನಟನನ್ನು ಹುಡುಕಿಕೊಂಡು ಬೆಂಗಳೂರಿಗೂ ಬರುವ ನಿರೀಕ್ಷೆಯಿದೆ.
ಸಿಂಬು ಹಾಗೂ ಅನಿರುಧ್ ವಿರುದ್ಧ ಇಲ್ಲಿನ ರೇಸ್ ಕೋರ್ಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಶ್ಲೀಲ ಗೀತೆಯನ್ನು ಹಾಡುವ ಮೂಲಕ ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿರುವ ಆರೋಪವನ್ನು ಇಬ್ಬರ ಮೇಲೆ ಹೊರೆಸಲಾಗಿದೆ. [ಅಶ್ಲೀಲ ಗೀತೆ ವಿವಾದ: ನಟ ಸಿಂಬು ವಿರುದ್ಧ ಪ್ರಕರಣ ದಾಖಲು]
ಇದಲ್ಲದೆ ಚೆನ್ನೈನ ಮತ್ತೊಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಹಿಳಾ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 4 ಹಾಗೂ 6ರ ಅನ್ವಯ ಹಾಗೂ ಐಪಿಸಿ ಸೆಕ್ಷನ್ 509 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 67 ರ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎರಡು ಠಾಣೆಗಳಲ್ಲೂ ಎಫ್ ಐಆರ್ ಹಾಕಲಾಗಿದೆ.
ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಸಿಂಬುಗೆ ಮಂಗಳವಾರ ತೀವ್ರ ಹಿನಡೆ ಉಂಟಾಗಿತ್ತು. ಮದ್ರಾಸ್ ಹೈಕೋರ್ಟ್ ಮಧ್ಯಂತರ ಜಾಮೀನು ಅಥವಾ ತನಿಖೆಗೆ ತಡೆ ನೀಡಲು ನಿರಾಕರಿಸಿತ್ತು. ಮುಂದಿನ ವಿಚಾರಣೆಯನ್ನು ಜನವರಿ 2ಕ್ಕೆ ಮುಂದೂಡಲಾಗಿದೆ. ಬೀಪ್ ಸಾಂಗ್ ಹಾಡಿದ್ದಕ್ಕಾಗಿ ಸಿಂಬು ಈಗ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಗೆಳೆಯರ ಮನೆಯಲ್ಲಿ ಸಿಂಬು ಇರಬಹುದು ಎಂಬ ಮಾಹಿತಿ ಬಂದಿರುವ ಹಿನ್ನಲೆಯಲ್ಲಿ ಚೆನ್ನೈ ಪೊಲೀಸರು ಬೆಂಗಳೂರಿಗೆ ಬರುವ ನಿರೀಕ್ಷೆಯಿದೆ.