ಕರ್ನಾಟಕದಲ್ಲಿ 'ಕಾಲಾ'ಗೆ ರಕ್ಷಣೆ ಕೋರಿದ ರಜನಿಕಾಂತ್
ಚೆನ್ನೈ, ಜೂನ್ 5: 'ಕಾಲಾ' ಸಿನಿಮಾ ಬಿಡುಗಡೆಗೆ ಅನುಕೂಲವಾಗುವಂತೆ ಕರ್ನಾಟಕ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು ಎಂದು ನಟ ರಜನಿಕಾಂತ್ ಕೋರಿದ್ದಾರೆ.
ಕರ್ನಾಟಕದಲ್ಲಿ ಕಾಲಾ ಸಿನಿಮಾಕ್ಕೆ ಯಾವುದಾದರೂ ಸಮಸ್ಯೆ ಎದುರಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಕರ್ನಾಟಕದಲ್ಲಿರುವ ತಮಿಳು ಜನರು ಮಾತ್ರವಲ್ಲ, ಆದರೆ ಬೇರೆ ಭಾಷೆ ಮಾತನಾಡುವ ಜನರೂ ಸಿನಿಮಾ ನೋಡಲು ಬಯಸಿದ್ದಾರೆ. ಅವರಿಗೆ ವಂಚನೆಯಾಗಬಾರದು ಎಂದು ರಜನಿಕಾಂತ್ ಹೇಳಿದ್ದಾರೆ.
ಕಾವೇರಿಗೂ 'ಕಾಲಾ' ಸಿನಿಮಾಕ್ಕೂ ಏನು ಸಂಬಂಧ?: ಪ್ರಕಾಶ್ ರೈ
ಕರ್ನಾಟಕ ಸರ್ಕಾರವು ಚಿತ್ರಮಂದಿರ ಮತ್ತು ಪ್ರೇಕ್ಷಕರಿಗೆ ಸೂಕ್ತ ಭದ್ರತೆಯನ್ನು ನೀಡಲಿದೆ ಎಂಬುದಾಗಿ ನಾನು ನಂಬಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ಹಿರಿಯರಾದ ದೇವೇಗೌಡ ಅವರು ಅಲ್ಲಿದ್ದಾರೆ. ಸಿನಿಮಾದ ನಿಷೇಧಕ್ಕೆ ಅವರು ಖಂಡಿತಾ ಅವಕಾಶ ನೀಡುವುದಿಲ್ಲ ಎಂದು ರಜನಿಕಾಂತ್ ಹೇಳಿಕೆ ನೀಡಿದ್ದಾರೆ.
'ಇನ್ನೂ ವಿರೋಧ ನಿರೀಕ್ಷಿಸಿದ್ದೆ'
ಅತ್ತ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವಂತೆ ಕೋರುವ ಜತೆಗೆ, ಕಾನೂನು ಹೋರಾಟಕ್ಕೂ ಮುಂದಾಗಿರುವ ರಜನಿಕಾಂತ್, ತಮ್ಮ ಸಿನಿಮಾ ಬಿಡುಗಡೆಗೆ ಇನ್ನೂ ತೀವ್ರ ವಿರೋಧ ವ್ಯಕ್ತವಾಗಬಹುದು ಎಂಬ ನಿರೀಕ್ಷೆ ಹೊಂದಿದ್ದಾಗಿ ಹೇಳಿದ್ದಾರೆ.
'ನಾನು ಬಹಳ ವಿರೋಧವನ್ನು ನಿರೀಕ್ಷೆ ಮಾಡಿದ್ದೆ. ಆದರೆ, ಅದರ ಪ್ರಮಾಣ ತೀರಾ ಕಡಿಮೆ ಇದೆ. ಸಿನಿಮಾದಲ್ಲಿ ನಿಜಕ್ಕೂ ಒಳ್ಳೆಯ ಕಥೆಯಿದೆ. ಅದು ಚೆನ್ನಾಗಿ ಓಡಲಿದೆ. ಒಳ್ಳೆಯದನ್ನು ಪ್ರೇಕ್ಷಕರು ಖಂಡಿತಾ ಇಷ್ಟಪಡುತ್ತಾರೆ. ಚೆನ್ನಾಗಿಲ್ಲದಿದ್ದರೆ ಅವರು ಅದನ್ನು ಕೈಬಿಡುತ್ತಾರೆ' ಎಂದು ರಜನಿ ಹೇಳಿದ್ದಾರೆ.
'ಕಾಲಾ' ಬಿಡುಗಡೆಗೆ ಬಿಡಿ: ಪ್ರಕಾಶ್ ರೈ ಮತ್ತೆ ಸರಣಿ ಟ್ವೀಟ್
ತೂತುಕುಡಿಯಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ರಜನಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕೆಲವು ಸಮಾಜ ವಿರೋಧಿ ಶಕ್ತಿಗಳು ಹಿಂಸಾಚಾರ ನಡೆಸುತ್ತಿವೆ ಎಂದು ರಜನಿ ಹೇಳಿದ್ದರು.
ಅಲ್ಲದೆ ಪ್ರತಿಭಟನೆ ಆರಂಭವಾಗಿ 100 ದಿನ ಕಳೆದರೂ ಬೆಂಬಲಕ್ಕೆ ಬಾರದ ರಜನಿ, ಗೋಲಿಬಾರ್ನಲ್ಲಿ ಗಾಯಗೊಂಡ ಸಂತ್ರಸ್ತರನ್ನು ಮಾತನಾಡಿಸಲು ಕೆಲವು ದಿನಗಳ ನಂತರ ಆಸ್ಪತ್ರೆ ಭೇಟಿ ನೀಡಿದ್ದು, ಸ್ಥಳೀಯರನ್ನು ಕೆರಳಿಸಿತ್ತು.