ರಾಜಕೀಯ ಪ್ರವೇಶ, ಪಕ್ಷ ಸ್ಥಾಪನೆ ಬಗ್ಗೆ ಬ್ರೇಕಿಂಗ್ನ್ಯೂಸ್ ಕೊಟ್ಟ ರಜನಿ
ಚೆನ್ನೈ, ಜುಲೈ 12: ಅಭಿಮಾನಿಗಳಿಗೆ ಮೂರು ಪುಟಗಳ ಪತ್ರ ಬರೆದು ರಾಜಕೀಯ ರಂಗ ಪ್ರವೇಶಿಸುತ್ತಿಲ್ಲ ಎಂದು ಘೋಷಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಇಂದು ಮಹತ್ವ ಘೋಷಣೆ ಮಾಡಿದ್ದಾರೆ.
ರಜನಿ ಮಕ್ಕಳ್ ಮಂಡ್ರಮ್ ಸಂಘಟನೆ ರಾಜಕೀಯ ಚಟುವಟಿಕೆಗಳನ್ನು ಬಂದ್ ಮಾಡಲಿದ್ದು, ಅಭಿಮಾನಿಗಳ ಸಂಘವಾಗಿ ಮಾತ್ರ ಉಳಿಯಲಿದೆ ಎಂದು ರಜನಿ ಹೇಳಿದ್ದಾರೆ.
ರಾಜ್ಯದ ಹಿತದೃಷ್ಟಿಯಿಂದ ರಾಜಕೀಯ ರಂಗದಲ್ಲಿ ರಜನಿ ಅಗತ್ಯ ಹೆಚ್ಚಿದೆ ಎಂದು ಅಭಿಮಾನಿಗಳು ಆಗ್ರಹಪೂರ್ವಕ ಮನವಿ ಮಾಡಿದ್ದರು. ಆದರೆ, ರಾಜಕೀಯ ಪ್ರವೇಶ ಹಾಗೂ ರಾಜಕೀಯ ಪಕ್ಷ ಸ್ಥಾಪನೆ ಬಗ್ಗೆ ಮತ್ತೆ ಯೋಚಿಸುವುದಿಲ್ಲ ಎಂದು ರಜನಿ ಘೋಷಿಸಿದ್ದಾರೆ.
ರಜನಿ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದು ತಮಿಳ್ ಅರುವಿ ಮಣಿಯನ್ ಅವರ ನೇತೃತ್ವದಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿ ಹೊಸ ಪಕ್ಷದ ಹಿಂದಿನ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಬಹುದು ಎಂದೇ ನಂಬಲಾಗಿತ್ತು. ಆದರೆ, ಸಂಪೂರ್ಣವಾಗಿ ರಾಜಕೀಯದಿಂದ ರಜನಿ ದೂರ ಉಳಿಯಲು ನಿರ್ಧರಿಸಿದ್ದು, ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ರಜನಿ ಅವರ ಮೂತ್ರಪಿಂಡದಲ್ಲಿ ಸಮಸ್ಯೆ ಇರುವುದರಿಂದ ಅವರು ಹೆಚ್ಚು ಓಡಾಡುವುದು ಸೂಕ್ತವಲ್ಲ ಮತ್ತು ಕೋವಿಡ್ನಿಂದ ತೀವ್ರ ಅಪಾಯವಾಗಬಹುದು ಎಂದು ವೈದ್ಯರು ಸಲಹೆ ನೀಡಿದ್ದರು. ಇತ್ತೀಚೆಗೆ ಅಮೆರಿಕಕ್ಕೆ ತೆರಳಿ ಚಿಕಿತ್ಸೆ ಪಡೆದು ಚೆನ್ನೈಗೆ ಹಿಂತಿರುಗಿದ್ದಾರೆ.
''ಭವಿಷ್ಯದಲ್ಲೂ ರಾಜಕೀಯ ಪ್ರವೇಶದ ಬಗ್ಗೆ ಆಲೋಚಿಸಿಲ್ಲ,'' ಎಂದು 70 ವರ್ಷ ವಯಸ್ಸಿನ ರಜನಿ ಹೇಳಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಗೂ ಮುನ್ನವೇ ರಜನಿ ರಾಜಕೀಯದಿಂದ ಹೆಜ್ಜೆ ಹಿಂದಕ್ಕೆ ಇಟ್ಟಿದ್ದು, ಯಾರಿಗೂ ಲಾಭವೂ ಆಗಲಿಲ್ಲ, ನಷ್ಟವೂ ಆಗಲಿಲ್ಲ. 1996ರಲ್ಲಿ ''ಜಯಲಲಿತಾಗೆ ಮತ ಹಾಕಿದರೆ ದೇವರು ಕೂಡಾ ತಮಿಳುನಾಡನ್ನು ರಕ್ಷಿಸಲು ಸಾಧ್ಯವಿಲ್ಲ'' ಎಂದು ರಜನಿ ಹೊಡೆದ ಒಂದೇ ಡೈಲಾಗ್ ಡಿಎಂಕೆಗೆ ವರದಾನವಾಗಿ ಅಧಿಕಾರಕ್ಕೇರುವಂತೆ ಮಾಡಿತ್ತು. ಈ ಬಾರಿ ರಜನಿ ಸ್ಪರ್ಧೆಯಿಂದ ಹಿಂದಕ್ಕೆ ಸರಿದಿದ್ದಲ್ಲದೆ, ಯಾವುದೇ ಪಕ್ಷಕ್ಕೂ ಬೆಂಬಲ ವ್ಯಕ್ತಪಡಿಸದಿದ್ದದ್ದು ಡಿಎಂಕೆಗೆ ಲಾಭವಾಯಿತೋ ಬಿಟ್ಟಿತೋ ಒಟ್ಟಾರೆ ದಶಕದ ನಂತರ ಡಿಎಂಕೆ ಗದ್ದುಗೆ ಏರಲು ಸಾಧ್ಯವಾಯಿತು. ಎಂಕೆ ಸ್ಟಾಲಿನ್ ಜೀವಮಾನದ ಆಕಾಂಕ್ಷೆ ಈಡೇರಿತು. ರಜನಿ ಸದ್ಯಕ್ಕೆ ಸೂಪರ್ ಸ್ಟಾರ್ ಆಗಿ ಸಿನಿಮಾ ರಂಗಕ್ಕೆ ಸೀಮಿತವಾಗಿರಲಿದ್ದಾರೆ.