ಆಸ್ಪತ್ರೆಯಲ್ಲಿ ಕರುಣಾನಿಧಿ ಅವರನ್ನು ಭೇಟಿಯಾದ ರಜನೀಕಾಂತ್
ಚೆನ್ನೈ, ಆಗಸ್ಟ್ 01: ಖ್ಯಾತ ನಟ, ರಾಜಕಾರಣಿ ರಜನೀಕಾಂತ್ ಅವರು ಗುರುವಾರ ರಾತ್ರಿ ತಮಿಳುನಾಡಿನ ಚೆನ್ನೈನ ಕಾವೇರಿ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಆರೋಗ್ಯ ವಿಚಾರಿಸಿದರು.
"ಈ ದೇಶದ ಅತ್ಯಂತ ಹಿರಿಯ ನಾಯಕರ ಆರೋಗ್ಯ ವಿಚಾರಿಸಲು ನಾನಿಲ್ಲಿಗೆ ಬಂದಿದ್ದೇನೆ. ನಾನು ಅವರನ್ನು ನೋಡಲು ಹೋದಾಗ ಅವರು ಮಲಗಿದ್ದರು. ಅವರ ಕುಟುಂಬಸ್ಥರ ಬಳಿ ಕರುಣಾನಿಧಿ ಅವರ ಆರೋಗ್ಯದ ಕುರಿತು ವಿಚಾರಿಸಿದ್ದೇನೆ. ಅವರು ಆದಷ್ಟು ಬೇಗ ಗುಣಮುಖರಾಗಲಿ" ಎಂದು ನಾನು ಹಾರೈಸುತ್ತೇನೆ ಎಂದು ಅವರು ಹೇಳಿದ್ದಾರೆ.
ಡಿಎಂಕೆ ಮುಖಂಡ ಎಂ ಕೆ ಅಳಗಿರಿ ಅವರನ್ನೂ ಈ ಸಂದರ್ಭದಲ್ಲಿ ರಜನೀಕಾಂತ್ ಭೇಟಿಯಾದರು.
ಕರುಣಾನಿಧಿ ಅನಾರೋಗ್ಯ: ಭೇಟಿಗೆಂದು ಚೆನ್ನೈಗೆ ಆಗಮಿಸಲಿರುವ ರಾಹುಲ್
ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಕರುಣಾನಿಧಿ ಅವರನ್ನು ರಕ್ತದೊತ್ತಡ ಕಡಿಮೆಯಾದ ಹಿನ್ನೆಲೆಯಲ್ಲಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ಜು.28 ರಂದು ದಾಖಲಿಸಲಾಗಿದೆ.
ಕಳೆದ ಮೂರು ದಿನಗಳಿಂದ ತೀವ್ರ ನಿಗಾ ಘಟಕದಲ್ಲೇ ಚಿಕಿತ್ಸೆ ಪಡೆಯುತ್ತಿರುವ 94 ವರ್ಷದ ಕರುಣಾನಿಧಿ ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಅವರು ಚೇತರಿಸಿಕೊಳ್ಳುತ್ತಿದ್ದಾರೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಕಾವೇರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಕರುಣಾನಿಧಿ ಅವರನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಗಣ್ಯರು ಭೇಟಿ ಮಾಡಿದ್ದು, ಅವರ ಅಭಿಮಾನಿಗಳ ದಂಡು ಆಸ್ಪತ್ರೆ ಎದುರು ಕಳೆದ ಮೂರ್ನಾಲ್ಕು ದಿನಗಳಿಂದ ಊಟ-ನಿದ್ದೆ ಬಿಟ್ಟು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದೆ.