ಆಸ್ಪತ್ರೆಗೆ ದಾಖಲಾದ ಕಮಲ್ಹಾಸನ್: ಶಸ್ತ್ರಚಿಕಿತ್ಸೆ ಮಾಡಲಿರುವ ವೈದ್ಯರು
ಚೆನ್ನೈ, ನವೆಂಬರ್ 22: ಖ್ಯಾತ ನಟ, ಮಕ್ಕಳ್ ನಿಧಿ ಮಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಅವರ ಆರೋಗ್ಯ ಸ್ಥಿತಿ ಕೆಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯರು ಹೇಳಿದ್ದಾರೆ.
2016 ರಲ್ಲಿ ಕಮಲ್ ಹಾಸನ್ ಅವರ ಕಾಲಿನ ಮೂಳೆ ಮುರಿದಿತ್ತು. ಆಗ ಕಾಲಿನ ಒಳಗೆ ಪಟ್ಟಿಯೊಂದನ್ನು ಹಾಕಲಾಗಿತ್ತು. ಈಗ ಅದು ತೊಂದರೆ ಕೊಡುತ್ತಿರುವ ಕಾರಣ ಅದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಗುವುದು ಎಂದು ವೈದ್ಯರು ಹೇಳಿದ್ದಾರೆ.
ಈ ಹಿಂದೆಯೇ ಕಾಲಿನ ಕಸಿಯನ್ನು ತೆಗೆಯಬೇಕಾಗಿತ್ತು. ಆದರೆ ಸಿನಿಮಾ ಮತ್ತು ರಾಜಕೀಯ ಒತ್ತಡಗಳ ಕಾರಣದಿಂದಾಗಿ ಕಮಲ್ ಹಾಸನ್ ಅವರು ಶಸ್ತ್ರಚಿಕಿತ್ಸೆಯನ್ನು ಮುಂದೂಡುತ್ತಲೇ ಬಂದಿದ್ದರು.
ಚೆನ್ನೈನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಕಮಲ್ ಹಾಸನ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದ್ದು, ಎರಡು ದಿನಗಳ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ.
ನಟರಾಗಿ ವಿಶ್ವದಾದ್ಯಂತ ಹೆಸರು ಮಾಡಿರುವ ಕಮಲ್ ಹಾಸನ್ ಇದೀಗ ರಾಜಕೀಯಕ್ಕೂ ಇಳಿದಿದ್ದಾರೆ. ಮಕ್ಕಳ ನಿಧಿ ಮಯಂ ಎಂಬ ಪಕ್ಷ ಸ್ಥಾಪನೆ ಮಾಡಿರುವ ಕಮಲ್ ಹಾಸನ್ ರಾಜಕೀಯ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.