'ಅಭಿನಂದನ್' ತಂದೆ ತಾಯಿಗೆ ವಿಮಾನದಲ್ಲಿ ಅಭಿಮಾನದ ಸ್ವಾಗತ
ಚೆನ್ನೈ, ಮಾರ್ಚ್ 01 : ಶುಭ ಶುಕ್ರವಾರದಂದು ಪಾಕ್ ಬಂದಿಯಾಗಿರುವ ವಿಂಗ್ ಕಮಾಂಡರ್ ಅಭಿನಂದನ್ ಅವರು ಬಿಡುಗಡೆಯಾಗುತ್ತಾರೆ ಎಂಬ ಸುದ್ದಿ ಖಚಿತವಾಗುತ್ತಿದ್ದಂತೆ, ನಿರಾತಂಕರಾಗಿರುವ ಅವರ ಪೋಷಕರು ಕೂಡಲೆ ಚೆನ್ನೈನಿಂದ ದೆಹಲಿಗೆ ವಿಮಾನ ಹತ್ತಿದ್ದಾರೆ.
ವಿಮಾನ ಹತ್ತುತ್ತಿದ್ದಂತೆ ಏರ್ ಮಾರ್ಷಲ್ (ನಿವೃತ್ತ) ಎಸ್ ವರ್ಧಮಾನ್ ಮತ್ತು ಶೋಭಾ ವರ್ಧಮಾನ್ ಅವರಿಗೆ ಸಿಕ್ಕಿದ್ದು ಎಂಥಾ ಸ್ವಾಗತ! ವಿಮಾನದಲ್ಲಿದ್ದವರೆಲ್ಲ ಎದ್ದುನಿಂತು ಕರತಾಡನ ಮಾಡಿದ್ದಾರೆ. ಅವರ ಮಗ 'ಅಭಿ' ಇಡೀ ದೇಶವನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿದ್ದಕ್ಕೆ ಸಿಕ್ಕಿದ್ದು ಅಭೂತಪೂರ್ವ ಸ್ವಾಗತ. ಅಂಥ ಧೀರ ಮಗನನ್ನು ಪಡೆದ ಹೆಮ್ಮೆ ಅವರದಾಗಿತ್ತು.
ಅಭಿನಂದನ್ ಬಿಡುಗಡೆ LIVE: ವಿಂಗ್ ಕಮಾಂಡರ್ ಆಗಮನಕ್ಕೆ ದೇಶದೆಲ್ಲೆಡೆ ಕಾತರ
ತಮ್ಮ ಮಗನನ್ನು ಸಂಕಷ್ಟದ ಸಮಯದಲ್ಲಿ ಇಡೀ ದೇಶ ಈಪರಿ ಬೆಂಬಲಿಸಿದ್ದಕ್ಕೆ, ಅಭಿನಂದನ್ ಅವರನ್ನು ವಾಪಸ್ ಕರೆತನ್ನಿ ಎಂಬ ಅಭಿಯಾನ ಆರಂಭಿಸಿದ್ದಕ್ಕೆ ಸಿಂಹಕುಟ್ಟಿ ವರ್ಧಮಾನ್ ಅವರು ದೇಶದ ನಾಗರಿಕರಿಗೆ ಹೃದಯಪೂರ್ವ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ದುರಾದೃಷ್ಟವಶಾತ್ ಸಿಕ್ಕಿಬಿದ್ದಿದ್ದರು
ಅಮೆರಿಕ ನಿರ್ಮಿತ, ಪಾಕಿಸ್ತಾನದ ಯುದ್ಧ ವಿಮಾನ ಎಫ್-16 ಅನ್ನು ಹಿಮ್ಮೆಟ್ಟಿಸುವ ಭರದಲ್ಲಿ ಅಭಿನಂದನ್ ಅವರು ಪಾಕ್ ಆಕ್ರಮಿತ ಕಾಶ್ಮೀರವನ್ನು ಪ್ರವೇಶಿಸಿದ್ದರು. ಆಗ ಅವರು ಚಲಾಯಿಸುತ್ತಿದ್ದ ಪುರಾತನ ಮಿಗ್ 21 ಬೈಸನ್ ಯುದ್ಧ ವಿಮಾನವನ್ನು ಪಾಕ್ ಸೇನೆ ಹೊಡೆದುರುಳಿಸಿತ್ತು. ಆದರೆ, ಅಭಿನಂದನ್ ಅವರು ಅದೃಷ್ಟವಶಾತ್ ಪ್ಯಾರಾಶೂಟ್ ನಿಂದ ಜಿಗಿದು ಪಾರಾಗಿದ್ದರು. ಆದರೆ, ದುರಾದೃಷ್ಟವಶಾತ್ ಅಲ್ಲಿನ ಸ್ಥಳೀಯರು ಮತ್ತು ಪಾಕ್ ಸೈನಿಕರ ಕೈಗೆ ಸಿಕ್ಕಿಬಿದ್ದಿದ್ದರು.
ಸ್ವಾಗತ 'ಸಿಂಗಂ' ವಿಂಗ್ ಕಮಾಂಡರ್ ಅಭಿನಂದನ್, ನೀವೇ ನಿಜವಾದ ಹೀರೋ!
ಅಭಿಯನ್ನು ವಾಪಸ್ ಕರೆತರುವಂತೆ ಒತ್ತಡ
ಎರಡೂ ರಾಷ್ಟ್ರಗಳ ನಡುವೆ ಯುದ್ಧ ಆರಂಭವಾಗಿಲ್ಲದಿದ್ದರೂ ಅಭಿನಂದನ್ ಅವರನ್ನು ಯುದ್ಧಕೈದಿಯಂತೆ ನಡೆಸಿಕೊಂಡಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ, ಭಾರತ ಪಾಕ್ ಸೈನ್ಯದ ಮೇಲೆ ದಾಳಿ ಮಾಡಿರದಿದ್ದರೂ, ಪಾಕ್ ಪ್ರತಿಯಾಗಿ ಭಾರತದ ಸೈನಿಕರ ಮೇಲೆ ದಾಳಿ ಮಾಡಿದ್ದಕ್ಕೂ ಪ್ರತಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅಭಿನಂದನ್ ಅವರನ್ನು ವಾಪಸ್ ಕರೆತರುವಂತೆ ಭಾರತದ ಮೇಲೆ ಮತ್ತು ಅವರನ್ನು ಕಳಿಸಿಕೊಡುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರಲಾಗಿತ್ತು.
ಅಮೆರಿಕ, ಸೌದಿ ಅರೇಬಿಯಾ, ಯುಎಇ ಒತ್ತಡಕ್ಕೆ ಮಣಿದು ಅಭಿನಂದನ್ ಬಿಡುಗಡೆ
ಬಿಡುಗಡೆ ಮಾಡುವುದಾಗಿ ಇಮ್ರಾನ್ ಘೋಷಣೆ
ಅಮೆರಿಕ, ಸೌದಿ ಅರೇಬಿಯಾ ಮತ್ತು ಯುಎಇನಿಂದ ರಾಜತಾಂತ್ರಿಕ ಒತ್ತಡ ಬಂದಿದ್ದರಿಂದ ಅಭಿನಂದನ್ ಅವರನ್ನು ಬಿಡುಗಡೆ ಮಾಡದೆ ಪಾಕಿಸ್ತಾನಕ್ಕೆ ವಿಧಿಯೇ ಇರಲಿಲ್ಲ. ಅಲ್ಲದೆ, ಪಾಕಿಸ್ತಾನಗ ಈ ವಿಷಯದಲ್ಲಿ ಜಿನೀವಾ ಒಪ್ಪಂದವನ್ನು ಉಲ್ಲಂಘಿಸಿದ್ದರಿಂದ ಪಾಕಿಸ್ತಾನ ಇಬ್ಬಂದಿಗೆ ಸಿಲುಕಿತ್ತು. ಇದೆಲ್ಲದರ ಪರಿಣಾಮವಾಗಿ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಅಭಿನಂದನ್ ಅವರನ್ನು ಬೇಷರತ್ ಆಗಿ ಬಿಡುಗಡೆ ಮಾಡುತ್ತಿರುವುದಾಗಿ ಸಂಸತ್ತಿನಲ್ಲಿ ಘೋಷಿಸಿದರು.
ಮುಗಿಲುಮುಟ್ಟಿದ ಹರ್ಷೋದ್ಘಾರ
ಈ ಸುದ್ದಿ ಹೊರಬೀಳುತ್ತಿದ್ದಂತೆ ಭಾರತದಾದ್ಯಂತ ಹರ್ಷೋದ್ಘಾರ ಮುಗಿಲುಮುಟ್ಟಿದೆ. ಅಭಿ ಅವರ ಸ್ವಾಗತಕ್ಕಾಗಿ ಇಡೀ ದೇಶವೇ ಕಾದು ಕುಳಿತಿದೆ. ಅವರನ್ನು ವಾಘಾ ಬಾರ್ಡರ್ ಮೂಲಕ ಇಂದು ಮಧ್ಯಾಹ್ನ ಕಳಿಸಿಕೊಡುವ ಸಾಧ್ಯತೆ ಇದೆ. ಅಭಿನಂದನ್ ಅವರ ತಂದೆ ತಾಯಿಯರು ದೆಹಲಿಗೆ ರಾತ್ರಿ 1 ಗಂಟೆ ಸುಮಾರಿಗೆ ತಲುಪಿದ ನಂತರ, ಕೂಡಲೆ ಅಲ್ಲಿಂದ ಅಮೃತಸರವನ್ನು ತಲುಪಿದ್ದಾರೆ. ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಅಭಿನಂದನ್ ಅವರು ಭಾರತದೊಳಗೆ ಪ್ರವೇಶಿಸಲಿದ್ದಾರೆ.
ಇಡೀ ಕುಟುಂಬವೇ ದೇಶ ಸೇವೆಯಲ್ಲಿ
ವರ್ಧಮಾನ್ ಅವರ ಇಡೀ ಕುಟುಂಬವೇ ದೇಶಸೇವೆಯಲ್ಲಿ ನಿರತವಾಗಿದೆ. ಅಭಿನಂದನ್ ಅವರು ಭಾರತೀಯ ವಾಯು ಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿದ್ದರೆ, ಅವರ ತಂದೆ ಸಿಂಹಕುಟ್ಟಿ ವರ್ಧಮಾನ್ ಅವರು ನಿವೃತ್ತ ಏರ್ ಮಾರ್ಷಲ್. ತಾಯಿ ಕೂಡ ವೈದ್ಯೆಯಾಗಿದ್ದು ವಿಶ್ವದಾದ್ಯಂತ ಸಂಚರಿಸಿ ಯುದ್ಧಪೀಡಿತ ಪ್ರದೇಶ ಪ್ರದೇಶಗಳಲ್ಲಿ ಶುಶ್ರೂಷೆ ಮಾಡಿದ್ದಾರೆ. ಅಭಿನಂದನ್ ಅವರ ಹೆಂಡತಿ ಕೂಡ ಸ್ಕ್ವ್ಯಾಡ್ರನ್ ಲೀಡರ್ ಆಗಿದ್ದು ನಿವೃತ್ತರಾಗಿದ್ದಾರೆ.