ಹೆಣ್ಣು ಅಂದ್ರೆ ಪತ್ನಿ, ತಾಯಿ ಅಷ್ಟೇ ಅಲ್ಲ, 'ಹಣಕಾಸು ಸಚಿವೆ'ಯೂ ಹೌದು!
ಚೆನ್ನೈ, ಜೂನ್ 29: ಹೆಣ್ಣು ಅಂದ್ರೆ ಕೇವಲ ಪತ್ನಿ, ತಾಯಿಯಷ್ಟೇ ಅಲ್ಲ, ಆಕೆ ಹಣಕಾಸು ಸಚಿವೆಯೂ ಹೌದು. ಮಾಸಿಕ ವೇತನ ಪಡೆಯುವುದಿಲ್ಲ ಎಂಬ ಕಾರಣಕ್ಕೆ ಹೆಣ್ಣನ್ನು ನಿರುದ್ಯೋಗಿ ಎಂದು ಕರೆಯುವುದು ತಪ್ಪು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
2009 ರಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತಾಕಿ ಮೃತರಾದ ಮಾಲತಿ ಎಂಬುವವರಿಗೆ ಸಂಬಂಧಿಸಿದಂತೆ ಪುದುಚೇರಿ ಎಲೆಕ್ಟ್ರಿಸಿಟಿ ಬೋರ್ಡ್ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ಸಮಯದಲ್ಲಿ ಕೋರ್ಟು ಈ ರೀತಿ ಹೇಳಿದೆ.
ಬೀಫ್ ಫೆಸ್ಟ್ ನಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ
ಹುಲ್ಲು ಸಂಗ್ರಹಿಸಲೆಂದು ಹೋಗಿದ್ದಾಗ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತಾಕಿ ಮಾಲತಿ ಸಾವನ್ನಪ್ಪಿದ್ದರು. ಪತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದ ಅವರ ಸಾವಿನ ನಂತರ, ಆಕೆಯ ಸಾವಿಗೆ ಕಾರಣವಾದ ವಿದ್ಯುತ್ ಮಂಡಳಿ 5 ಲಕ್ಷ ರೂ.ಗಳ ಪರಿಹಾರ ನೀಡಬೇಕೆಂದು ಆಕೆಯ ಪತಿ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಸಂದರ್ಭದಲ್ಲಿ ತಮ್ಮ ಪತ್ನಿ ತಿಂಗಳಿಗೆ 3000 ರೂ.ಗಳನ್ನು ದುಡಿಯುತ್ತಿದ್ದರು ಎಂದು ಮಾಲತಿಯ ಪತಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಅವರ ಅಹವಾಲನ್ನು ಸ್ವೀಕರಿಸಿದ ನ್ಯಾಯಾಲಯ ಮಾಲತಿಯ ಕುಟುಂಬಕ್ಕೆ 4 ಲಕ್ಷ ರೂ.ಗಳ ಪರಿಹಾರ ನೀಡಬೇಕೆಂದು ತೀರ್ಪು ನೀಡಿತ್ತು.
ಜಯಾ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮದ್ರಾಸ್ ಹೈಕೋರ್ಟ್
ಇದಾದ ನಂತರ ಪುದುಚೇರಿ ವಿದ್ಯುತ್ ಮಂಡಳಿ, ಮಾಲತಿ ಯಾವುದೇ ಕೆಲಸ ಮಾಡುತ್ತಿರಲಿಲ್ಲ, ಆಕೆ ನಿರುದ್ಯೋಗಿ ಮತ್ತು ಗೃಹಿಣಿಯಾಗಿದ್ದರು. ಆದ್ದರಿಂದ ಆಕೆ ತಿಂಗಳು 3000 ರೂ.ದುಡಿಯುತ್ತಿದ್ದರು ಎಂಬ ಮಾತು ಸುಳ್ಳು. ಈ ಪರಿಹಾರ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಮಂಡಳಿ ಹೇಳಿತ್ತು. ಈ ಕುರಿತು ಮತ್ತೊಮ್ಮೆ ವಿಚಾರಣೆ ನಡೆಸಿದ ನ್ಯಾಯಾಲಯ, ಗೃಹಿಣಿಯನ್ನು ನಿರುದ್ಯೋಗಿ ಎನ್ನುವುದು ತಪ್ಪು, ಆಕೆಗೆ ತಿಂಗಳ ವೇತನ ಲಭಿಸುವುದಿಲ್ಲ ಎಂದ ಮಾತ್ರಕ್ಕೆ ಆಕೆ ನಿರುದ್ಯೋಗಿಯಲ್ಲ ಎಂದು ಕೋರ್ಟು ಹೇಳಿದೆ.
ಅಲ್ಲದೆ, ವಿದ್ಯುತ್ ಮಂಡಳಿ ಮಾಲತಿ ಕುಟುಂಬಕ್ಕೆ ನೀಡಬೇಕಾದ 4 ಲಕ್ಷ ರೂ. ಪರಿಹಾರ ಮೊತ್ತದಲ್ಲಿ ಯಾವುದೆ ಬದಲಾವಣೆ ಇಲ್ಲ ಎಂದು ಕೋರ್ಟ್ ಹೇಳಿದೆ.
ಹೆಣ್ಣು ಒಬ್ಬ ಕರ್ತವ್ಯ ನಿರತ ಪತ್ನಿ, ಅಕ್ಕರೆ ನೀಡುವ ತಾಯಿ, ಹಣಕಾಸು ಸಚಿವೆ, ಮನೆಯ ಖರ್ಚು ವೆಚ್ಚಳನ್ನು ನೋಡಿಕೊಳ್ಳುವ ಚಾರ್ಟರ್ಡ್ ಅಕೌಂಟಂಟ್. ಇದೀಗ ಪತ್ನಿಯ ಅಗಲಿಕೆಯಿಂದ ಪತಿಗೆ ಪ್ರೀತಿ ನೀಡುವ ಸಂಗಾತಿ ಇಲ್ಲದಂತಾಗಿದೆ, ಹಾಗೆಯೇ ಮಕ್ಕಳಿಗೂ ಅಕ್ಕರೆ ನೀಡುವ ತಾಯಿ ಇಲ್ಲದಂತಾಗಿದೆ.
ಹಣದ ಮೂಲಕ ಈ ಎಲ್ಲವನ್ನೂ ಅಳೆಯುವುದಕ್ಕಾಗದಿದ್ದರೂ, ಅವರ ಕುಟುಂಬಕ್ಕೆ ನೆರವಾಗುವ ದೃಷ್ಟಿಯಿಂದ ವಿದ್ಯುತ್ ಮಂಡಳಿ ಪರಿಹಾರ ನೀಡಲೇಬೇಕು ಎಂಬ ಮಹತ್ವದ ತೀರ್ಪನ್ನು ಮದ್ರಾಸ್ ನ್ಯಾಯಾಲಯ ನೀಡಿದ್ದು, ಐತಿಹಾಸಿಕವೆನ್ನಿಸಿದೆ.