ಪೌರ ಕಾರ್ಮಿಕ ಕೆಲಸಕ್ಕೆ ಅರ್ಜಿ ಹಾಕಿದ 7000 ಎಂಜಿನಿಯರ್ ಪದವೀಧರರು!
ಕೊಯಿಮತ್ತೂರು, ನವೆಂಬರ್ 28: ದೇಶದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗಿದೆ ಎಂದು ವಿಪಕ್ಷಗಳು ಎಷ್ಟೇ ಬೊಬ್ಬೆ ಇಟ್ಟರೂ, ಕೇಂದ್ರ ಸರ್ಕಾರ ಮಾತ್ರ ಅದು ಸುಳ್ಳು ಎನ್ನುತ್ತಲೇ ಬರುತ್ತಿದೆ.
ಆದರೆ ತಮಿಳುನಾಡಿನ ಕೊಯಿಮತ್ತೂರಿನಲ್ಲಿ 7,000 ಇಂಜಿನಿಯರ್ ಪದವೀಧರರು ಪೌರ ಕಾರ್ಮಿಕ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದು, 'ನಿರುದ್ಯೋಗದ ಸಮಸ್ಯೆ' ಇನ್ನೂ ಬಗೆಹರಿದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.
ಕಸ ಗುಡಿಸುವ ಕೆಲಸಕ್ಕೆ ಅರ್ಜಿ ಹಾಕಿದ್ದಾರೆ ಎಂಜಿನಿಯರ್, ಎಂಬಿಎ ಪದವೀಧರು
ಒಟ್ಟು 7000 ದಷ್ಟು ಇಂಜಿನಿಯರ್, ಪದವೀಧರರು, ಡಿಪ್ಲೊಮಾ ಪದವೀಧರರು ಪೌರ ಕಾರ್ಮಿಕ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಖಾಲಿ ಇರುವ ಹುದ್ದೆ ಕೇವಲ 549!
ಈ ಕೆಲಸಕ್ಕೆ ಅರ್ಜಿ ಅಲ್ಲಿಸಿದ ಶೇ. 70 ರಷ್ಟು ಜನ ಎಸ್ ಎಸ್ ಎಲ್ ಸಿ ಅಥವಾ ಅದಕ್ಕಿಂತ ಹೆಚ್ಚು ಓದಿದವರು! ಅದಕ್ಕೆ ಕಡಿಮೆ ಓದಿದವರಲ್ಲಿ ಕೇವಲ 30 ಪ್ರತಿಶತ ಜನರು ಮಾತ್ರವೇ ಈ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿ ಸಲ್ಲಿಸಿದ ಹಲವರು ಖಾಸಗಿ ಕಚೇರಿಗಳಲ್ಲಿ ಸಂಸ್ಥೆಗಳಲ್ಲಿ ಮಾಡುತ್ತಿದ್ದಾರೆ. ಆದರೆ ಇದು ಸರ್ಕಾರಿ ಕೆಲಸ ಎಂಬ ಕಾರಣಕ್ಕೆ, ಮತ್ತು ಆರಂಭಿಕ ವೇತನವೇ 15,700 ರೂ. ನಷ್ಟು ಇರುವುದರಿಂದ ಈ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಶೀಘ್ರದಲ್ಲೇ 75,000 ಹುದ್ದೆಗಳಿಗೆ ನೇಮಕಾತಿ: ಮೋದಿ ಸರ್ಕಾರದ ಗುರಿ
ಅಷ್ಟೇ ಅಲ್ಲ, ಕಳೆದ ಹತ್ತು ವರ್ಷಳಿಂದ ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಹಲವರು ಖಾಯಂ ಕೆಲಸಕ್ಕಾಗಿ ಮತ್ತೆ ಅರ್ಜಿ ಸಲ್ಲಿಸಿದ್ದಾರೆ.
ಪೌರ ಕಾರ್ಮಿಕರಿಗೆ ಆರಂಭಿಕ ವೇತನವೇ 15,000 ದ ಮೇಲಿದ್ದು, ಸಾಮಾನ್ಯವಾಗಿ ಈ ಕೆಲಸದಲ್ಲಿದ್ದವರಿಗೆ 20,000 ರೂ. ವರೆಗೂ ಸಂಬಳವಿದೆ. ಬೆಳಿಗ್ಗೆ ಮತ್ತು ಸಂಜೆ ತಲಾ 3 ತಾಸು ದುಡಿದರೆ ಸಾಕು. ಉಳಿದ ಸಮಯದಲ್ಲಿ ಬೇರೆ ಕೆಲಸವನ್ನೂ ಮಾಡುವುದಕ್ಕೆ ಅವಕಾಶವಿದೆ. ಆದರೆ ಖಾಸಗಿ ಸಂಸ್ಥೆಗಳಲ್ಲಾದರೆ ಕನಿಷ್ಠ 12 ತಗಾಸು ದುಡಿದರೂ ಬರುವ ಸಂಬಳ ಮಾತ್ರ 6-7 ಸಾವಿರ ರೂ.
ಅದೇ ಕಾರಣಕ್ಕಾಗಿಯೇ ಇದೀಗ ಇಂಜಿನಿಯರ್ ಪದವೀಧರರು ಸಹ, ಸರ್ಕಾರಿ ಕೆಲಸ ಎಂಬ ಕಾರಣಕ್ಕೆ ಈ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದಾರೆ.