ತಮಿಳುನಾಡು; ವಿಶೇಷ ರೈಲುಗಳ ಸಂಚಾರ ರದ್ದು
ಚೆನ್ನೈ, ಜೂನ್ 29 : ತಮಿಳುನಾಡಿನಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯ ಸರ್ಕಾರದ ಮನವಿಯ ಅನ್ವಯ ನೈಋತ್ಯ ರೈಲ್ವೆ ರಾಜ್ಯದಲ್ಲಿ ಸಂಚಾರ ನಡೆಸುವ ವಿಶೇಷ ರೈಲುಗಳನ್ನು ಜುಲೈ 15ರ ತನಕ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಜೂನ್ 29ರ ಸೋಮವಾರದಿಂದಲೇ ಅನ್ವಯವಾಗುವಂತೆ ವಿಶೇಷ ರೈಲುಗಳ ಸಂಚಾರವನ್ನು ರದ್ದುಗೊಳಿಸಿ ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ. ರಾಜ್ಯದಲ್ಲಿನ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 82,275ಕ್ಕೆ ಏರಿಕೆಯಾಗಿದೆ.
ರೈಲು ಸಂಚಾರದ ಬಗ್ಗೆ ಮಹತ್ವದ ಆದೇಶ ಪ್ರಕಟ
ನೈಋತ್ಯ ರೈಲ್ವೆ ಈ ಕುರಿತು ಟ್ವೀಟ್ ಮಾಡಿದೆ. ತಮಿಳುನಾಡು ಸರ್ಕಾರದ ಆದೇಶದ ಅನ್ವಯ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದು, ಯಾವ-ಯಾವ ರೈಲು ಸಂಚಾರ ನಡೆಸುವುದಿಲ್ಲ ಎಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ.
ನವದೆಹಲಿಯಿಂದ ಸಂಚಾರ ನಡೆಸುವ ಸೂಪರ್ ಫಾಸ್ಟ್ ರೈಲು ಎಂದಿನಂತೆ ಸಂಚಾರವನ್ನು ನಡೆಸಲಿದೆ ಎಂದು ನೈಋತ್ಯ ರೈಲ್ವೆ ಸ್ಪಷ್ಟಪಡಿಸಿದೆ. ಒಟ್ಟು 7 ರೈಲುಗಳ ಸಂಚಾರವನ್ನು ಜುಲೈ 15ರ ತನಕ ರದ್ದುಗೊಳಿಸಲಾಗಿದೆ.
ವಿಶೇಷ ರೈಲುಗಳಲ್ಲಿ ಸಂಚಾರ ನಡೆಸಲು ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರ ಟಿಕೆಟ್ ರದ್ದುಗೊಳಿಸಲಾಗಿದ್ದು ಹಣವನ್ನು ವಾಪಸ್ ಮಾಡಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಮಿಳುನಾಡಿನಲ್ಲಿ ಒಂದೇ ದಿನ 3940 ಮಂದಿಗೆ ಕೊರೊನಾವೈರಸ್ ಪಾಸಿಟಿವ್
ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಭಾನುವಾರ ಒಂದೇ ದಿನ ರಾಜ್ಯದಲ್ಲಿ 3,940 ಹೊಸ ಪ್ರಕರಣಗಳು ದಾಖಲಾಗಿವೆ.