ಇರಾನ್ ನಿಂದ ಅಂತೂ-ಇಂತೂ ತಮಿಳುನಾಡಿಗೆ 40 ಮೀನುಗಾರರು ವಾಪಸ್!
ಚೆನ್ನೈ, ಜುಲೈ.16: ಕೊರೊನಾವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇರಾನ್ ನಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಈ ಹಿನ್ನೆಲೆ ಇರಾನ್ ನಲ್ಲಿ ಸಿಲುಕಿದ್ದ ಭಾರತೀಯ ಮೀನುಗಾರರನ್ನು ಬುಧವಾರ ವಾಪಸ್ ಕರೆದುಕೊಂಡ ಬರಲಾಗಿದೆ.
ವಿದೇಶದಲ್ಲಿ ಸಿಲುಕಿದ್ದ ತಮಿಳುನಾಡು ಮೂಲದ 40 ಮೀನುಗಾರರು ತವರಿಗೆ ವಾಪಸ್ ಮರಳಿದ್ದಾರೆ. ಕನ್ಯಾಕುಮಾರಿ, ನಾಗಪಟ್ಟಣಂ, ತುತ್ತುಕುಡಿ, ರಾಮನಾಥಪುರಂ, ನಾಗಪಟ್ಟಣಂ, ಕುಡಲ್ಲೂರು, ತಿರುನೆಲ್ವೇಲಿಯ ಈ ಮೀನುಗಾರರನ್ನು ಆಯಾ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ದಕ್ಷಿಣ ಭಾರತಕ್ಕೆ ದಂಗು ಬಡಿಸಿದ ಕೊರೊನಾವೈರಸ್; ಇಲ್ಲಿದೆ ರಿಪೋರ್ಟ್!
ಇರಾನ್ ನಿಂದ ಆಗಮಿಸಿದ 40 ಮೀನುಗಾರರನ್ನು ಕೊರೊನಾವೈರಸ್ ಸೋಂಕು ಪರೀಕ್ಷಿಸುವ ಹಿನ್ನೆಲೆ ಸ್ಕ್ರೀನಿಂಗ್ ಗೆ ಒಳಪಡಿಸಲಾಗಿತ್ತು. ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಮುಂದಿನ 14 ದಿನಗಳ ಕಾಲ ಹೋಮ್ ಕ್ವಾರೆಂಟೈನ್ ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ.
ತಮಿಳುನಾಡಿನಲ್ಲಿ ಕೊರೊನಾವೈರಸ್ ಚಿತ್ರಣ:
ಕೊರೊನಾವೈರಸ್ ಸೋಂಕು ಹರಡುವಿಕೆಯ ಅಟ್ಟಹಾಸಕ್ಕೆ ಈಗಾಗಲೇ ತಮಿಳುನಾಡು ತತ್ತರಿಸಿ ಹೋಗಿದೆ. ರಾಜ್ಯದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯು 1,51,820ಕ್ಕೆ ಏರಿಕೆಯಾಗಿದೆ. ಈ ಪೈಕಿ 1,02,310 ಸೋಂಕಿತರು ಗುಣಮುಖರಾಗಿರುವುದು ಕೊಂಚ ಸಮಾಧಾನ ತರುತ್ತದೆ. ಆದರೂ ಸಕ್ರಿಯ ಪ್ರಕರಣಗಳ ಸಂಖ್ಯೆ 47,343ರಷ್ಟಿದೆ. ಇನ್ನು, ಮಹಾಮಾರಿಗೆ ಇದುವರೆಗೂ 2,167 ಜನರು ಪ್ರಾಣ ಬಿಟ್ಟಿದ್ದಾರೆ.