ಪುದುಕೋಟ್ಟೈನ ತಿರುಮಯಂನಲ್ಲಿ ಅಪಘಾತ; 10 ಮಂದಿ ಅಯ್ಯಪ್ಪ ಭಕ್ತರ ಸಾವು
ಚೆನ್ನೈ, ಜನವರಿ 6: ಟ್ರೇಲರ್ ಲಾರಿ ಹಾಗೂ ವ್ಯಾನ್ ಮಧ್ಯೆ ಅಪಘಾತವಾಗಿ ಹತ್ತು ಮಂದಿ ಮೃತಪಟ್ಟು, ಐವರು ಗಾಯಗೊಂಡ ಘಟನೆ ಭಾನುವಾರ ಸಂಭವಿಸಿದೆ. ಹತ್ತೂ ಮಂದಿ ಅಯ್ಯಪ್ಪ ಭಕ್ತರು ತೆಲಂಗಾಣ ರಾಜ್ಯದವರು. ತಮಿಳುನಾಡಿನ ಪುದುಕೋಟ್ಟೈ ಜಿಲ್ಲೆಯ ತಿರುಮಯಂ ಬೈ ಪಾಸ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಶಬರಿಮಲೆಯಿಂದ ತೆಲಂಗಾಣಕ್ಕೆ AP 28 TD 6809 ನೋಂದಣಿ ಸಂಖ್ಯೆಯ ವ್ಯಾನ್ ನಲ್ಲಿ ಹಿಂತಿರುಗುತ್ತಿದ್ದಾಗ ಮಧ್ಯಾಹ್ನ ಎರಡೂ ಮೂವತ್ತರ ವೇಳೆ ಈ ದುರ್ಘಟನೆ ನಡೆದಿದೆ. ಎದುರಿನಿಂದ ಬಂದ ಟ್ರೇಲರ್ ಲಾರಿಯು ವ್ಯಾನ್ ಗೆ ಡಿಕ್ಕಿಯಾಗಿದೆ. ಲಾರಿ ಚಾಲಕನು ಸ್ಥಳದಲ್ಲಿ ವಾಹನ ಬಿಟ್ಟು, ಪರಾರಿಯಾಗಿದ್ದಾನೆ.
ವ್ಯಾನ್ ನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಇತರ ಐವರು ತಿರುಮಯಂನ ಸರಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾರೆ. ಶವಗಳನ್ನು ತಿರುಮಯಂನ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಐವರು ಗಾಯಾಳುಗಳನ್ನು ಪುದುಕೋಟ್ಟೈ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ, 11 ಮಂದಿ ಸಾವು
ಪುದುಕೋಟ್ಟೈ ಜಿಲ್ಲಾಧಿಕಾರಿ ಎಸ್.ಗಣೇಶ್, ಎಸ್ ಪಿ ಸೆಲ್ವರಾಜ್ ಅಪಘಾತ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ತಿರುಮಯಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.