''ಮಾಜಿ ಪ್ರಧಾನಿ ರಾಜೀವ್ ಗಾಂಧಿಗೆ ನೀಡಿದ ಭಾರತರತ್ನ ಹಿಂಪಡೆಯಿರಿ''
ಚಂದೀಗಢ, ಡಿಸೆಂಬರ್ 07: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನೀಡಿದ ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತರತ್ನವನ್ನು ಹಿಂಪಡೆಯುವಂತೆ ಶಿರೋಮಣಿ ಅಕಾಲಿ ದಳ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರು ಆಗ್ರಹಿಸಿದ್ದಾರೆ.
1991ರಲ್ಲಿ ಮರಣೋತ್ತರವಾಗಿ ರಾಜೀವ್ ಗಾಂಧಿ ಅವರಿಗೆ ಭಾರತರತ್ನ ನೀಡಲಾಗಿದೆ. ಆದರೆ, ಸಿಖ್ ಹತ್ಯಾಕಾಂಡಕ್ಕೆ ರಾಜೀವ್ ಗಾಂಧಿ ಆದೇಶ ನೀಡಿದ್ದರು ಎಂಬ ಆರೋಪವಿದೆ.
1984ರ ಸಿಖ್ ಹತ್ಯಾಕಾಂಡ : ರಾಜೀವ್ ಗಾಂಧಿ ನಿಜಕ್ಕೂ ಆದೇಶ ನೀಡಿದ್ರಾ?
ಮಾಜಿ ಪ್ರಧಾನಿ ಐ.ಕೆ.ಗುಜ್ರಾಲ್ ಅವರ 100 ನೇ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, 'ಐ.ಕೆ.ಗುಜ್ರಾಲ್ ನೀಡಿದ್ದ ಸಲಹೆಯನ್ನು ಒಪ್ಪಿದ್ದರೆ ಸಿಖ್ ಮಾರಣಹೋಮವನ್ನು ತಡೆಯಬಹುದಾಗಿತ್ತು' ಎಂದು ಹೇಳಿದ್ದನ್ನು ಬಾದಲ್ ಉಲ್ಲೇಖಿಸಿದ್ದಾರೆ.
''ಆಗಿನ ಗೃಹ ಸಚಿವ ಪಿ.ವಿ.ನರಸಿಂಹರಾವ್ ಅವರಿಗೆ ಸೇನೆಯನ್ನು ಕೂಡಲೇ ಕರೆಸಿಕೊಳ್ಳುವಂತೆ ಸಲಹೆ ನೀಡಿದ್ದರು. ಆದರೆ ಸಲಹೆಯನ್ನು ನರಸಿಂಹರಾವ್ ಸ್ವೀಕರಿಸಿರಲಿಲ್ಲ'' ಎಂದು ಮನಮೋಹನ್ ಸಿಂಗ್ ಹೇಳಿದ್ದರು.
ಈ ಹತ್ಯಾಕಾಂಡ ನಡೆಸಲು ಆದೇಶ ನೀಡಿದ ವ್ಯಕ್ತಿಯ ಬಗ್ಗೆ ಇಡೀ ಸಿಖ್ ಸಮುದಾಯಕ್ಕೆ ಆಕ್ರೋಶವಿದೆ. ತಡವಾಗಿಯಾದರೂ ನ್ಯಾಯಸಿಗಬೇಕಿದೆ. ಈ ಅನ್ಯಾಯ ಸರಿಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿಖ್ ಪರಿವಾರದ ಪರವಾಗಿ ಕೋರುತ್ತೇನೆ ಎಂದು ಬಾದಲ್ ಹೇಳಿದರು.
ಸಿಖ್ ಹತ್ಯಾಕಾಂಡ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾತು
ಇದಲ್ಲದೆ, ರಾಜೀವ್ ಗಾಂಧಿ ಅವರ ಹೆಸರನ್ನು ರಸ್ತೆ, ಏರ್ ಪೋರ್ಟ್, ವಿದ್ಯಾಸಂಸ್ಥೆ, ಸರ್ಕಾರಿ ಯೋಜನೆಗಳಿಂದ ತೆಗೆದು ಹಾಕುವಂತೆ ಮನವಿ ಮಾಡಿದ್ದಾರೆ. ಇದರ ಬದಲು ಶಹೀದ್ ಭಗತ್ ಸಿಂಗ್, ಉಧಮ್ ಸಿಂಗ್ ಅವರ ಹೆಸರಿಡುವಂತೆ ಕೋರಿದ್ದಾರೆ.
ಜಸ್ಟೀಸ್ ನಾನಾವತಿ ಆಯೋಗದಿಂದ ಈ ಪ್ರಕರಣದ ತನಿಖೆ ನಡೆಸಲಾಗಿತ್ತು. ಅಂದಿನ ಸರ್ಕಾರವೇ ತನ್ನ ಜನರನ್ನು ಕೊಲ್ಲಲು ಆದೇಶ ನೀಡಿತ್ತು. ಸಿಖ್ಖರು ಹೆಚ್ಚಾಗಿದ್ದ ಪ್ರದೇಶವನ್ನು ನಾಶ ಪಡಿಸುವ ಆದೇಶವನ್ನು ಖುದ್ದು ಪ್ರಧಾನಿ ರಾಜೀವ್ ಗಾಂಧಿ ನೀಡಿದ್ದರು. ಅಂದು ಅವರು ಮಾಡಿದ ಕರ್ಮಕ್ಕೆ ತಕ್ಕ ಬೆಲೆ, ನ್ಯಾಯ ಸಿಗಬೇಕಿದೆ. ಆದರೆ, ಆಯೋಗದ ವರದಿಯಲ್ಲಿ ರಾಜೀವ್ ಗಾಂಧಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ.