ರೈತರ ಪ್ರತಿಭಟನೆ ಸರ್ಕಾರದ ವಿರುದ್ಧ ಅಲ್ಲ ಅದರ ನೀತಿಗಳ ವಿರುದ್ಧ: ಕಿಸಾನ್ ಸಂಘರ್ಷ ಸಮಿತಿ
ಹರ್ಯಾಣ,ಜನವರಿ 17: ರೈತರು ನಡೆಸುತ್ತಿರುವ ಪ್ರತಿಭಟನೆ ಸರ್ಕಾರದ ವಿರುದ್ಧ ಅಲ್ಲ, ಸರ್ಕಾರದ ನೀತಿಗಳ ವಿರುದ್ಧ ಎಂದು ಕಿಸಾನ್ ಸಂಘರ್ಷ ಸಮಿತಿ ಹೇಳಿದೆ.
ಹರ್ಯಾಣದ ಕಿಸಾನ್ ಸಂಘರ್ಷ ಸಮಿತಿಯ ಸಂಚಾಲಕ ಮಂದಿಪ್ ನತ್ವಾನ್, ಸರ್ಕಾರದ ಪರವಾಗಿ ಕೆಲವರು ಈ ಸಂಘರ್ಷವನ್ನು ಹಿಂಸಾತ್ಮಕ ರೂಪಕ್ಕೆ ತಿರುಗಿಸಲು ಬಯಸುತ್ತಿದ್ದಾರೆ. ರೈತರ ಪ್ರತಿಭಟನೆ ಸರ್ಕಾರದ ನೀತಿಗಳಿಗೆ ವಿರುದ್ಧವಾಗಿಯೇ ಹೊರತು ದೆಹಲಿ ಅಥವಾ ಕೇಂದ್ರ ಸರ್ಕಾರದ ವಿರುದ್ಧವಾಗಿ ಅಲ್ಲ.
ಅಶ್ರುವಾಯು ಪ್ರಯೋಗ: ರೈತರ ಜತೆ ಮನೋಹರ್ ಲಾಲ್ ಖಟ್ಟರ್ ಮಾತುಕತೆ ರದ್ದು
ಸಂಯುಕ್ತ ಕಿಸಾನ್ ಮೋರ್ಚ ಅಂತಿಮಗೊಳಿಸಿದ ತಂತ್ರಗಳನ್ನು ನಾವು ಜಾರಿಗೊಳಿಸಿ ಶಾಂತಿಯುತವಾಗಿ ಪ್ರತಿಭಟನೆ ಮುಂದುವರಿಸುತ್ತೇವೆ ಎಂದರು.
ಗಣರಾಜ್ಯೋತ್ಸವ ದಿನ ದೆಹಲಿಯ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿ ಟ್ರಾಕ್ಟರ್ ಮತ್ತು ಟಾಂಕ್ ಗಳ ಮೆರವಣಿಗೆ ಸಾಗಿಸಲಿದ್ದೇವೆ ಎಂದು ಹೇಳುತ್ತಿದ್ದರು. ಆದರೆ ಅಂತಹ ಯಾವುದೇ ಕಾರ್ಯಕ್ರಮ ಕಿಸಾನ್ ಮೋರ್ಚದಿಂದ ಅಂತಿಮಗೊಂಡಿಲ್ಲ. ಇಂತಹ ಹೇಳಿಕೆಗಳನ್ನು ರೈತರ ಹಿತಾಸಕ್ತಿಗಳಿಗೆ ಪೂರಕವಾಗಿ ಇಲ್ಲ ಎಂದು ಮಂದಿಪ್ ನತ್ವಾನ್ ಹೇಳಿದರು.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನಾ ನಿರತ ರೈತರು ಇದೇ ಜನವರಿ 26ರಂದು ಗಣರಾಜ್ಯೋತ್ಸವ ದಿನ ಟ್ರಾಕ್ಟರ್ ಮೆರವಣಿಗೆ ತಯಾರಿ ನಡೆಸುತ್ತಿದ್ದರೆ, ರೈತ ಸಂಘಟನೆಗಳು ಕಿಸಾನ್ ರಿಪಬ್ಲಿಕ್ ಡೇ ಪರೇಡ್ ನಲ್ಲಿ ದೆಹಲಿ ರಿಂಗ್ ರೋಡ್ ನ್ನು ನಡೆಸಲು ಮುಂದಾಗಿವೆ.
ಇನ್ನು ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲ, ಸುಮಾರು ಎರಡು ತಿಂಗಳಿನಿಂದ ನಾವು ಗಾಳಿ, ಬಿಸಿಲು, ಶೀತ ಎಂದು ಕಷ್ಟಪಡುತ್ತಾ ಪ್ರತಿಭಟನೆಯಲ್ಲಿ ತೊಡಗಿದ್ದೇವೆ.
ಸರ್ಕಾರ ನಮ್ಮ ಜೊತೆ ಮಾತುಕತೆಯನ್ನು ನಡೆಸಿ ಸಮಸ್ಯೆ ಬಗೆಹರಿಸುವ ದಿನವನ್ನು ಮುಂದೂಡುತ್ತಲೇ ಇದೆ. ಅನವಶ್ಯಕವಾಗಿ ವಿಷಯವನ್ನು ಎಳೆಯುತ್ತಾ ಹೋಗುತ್ತಿದೆ, ಇದರಿಂದ ನಾವು ಸುಸ್ತು ಹೊಡೆದು ಪ್ರತಿಭಟನೆ ಹಿಂಪಡೆಯುತ್ತೇವೆ ಎಂಬ ಆಲೋಚನೆ ಸರ್ಕಾರದ್ದು, ಇದೊಂದು ಪಿತೂರಿ, ಆದರೆ ನಾವು ಹಿಂದೆ ಸರಿಯುವುದಿಲ್ಲ ಎಂದರು.