ಬಗ್ಗಾ ಬಂಧನ; ಹೈಡ್ರಾಮಾ, ಸಿಧು ಕಿಡಿ- ಮೂರು ರಾಜ್ಯಗಳ ಪೊಲೀಸರ ಮಧ್ಯೆ ಸಂಘರ್ಷ
ಚಂಡೀಗಢ, ಮೇ 6: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಹೇಳಿಕೆ ನೀಡಿದ ಕಾರಣಕ್ಕೆ ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ಬಂಧಿಸಿರುವ ಘಟನೆ ರಾಜಕೀಯ ಕೆಸರೆರಚಾಟಕ್ಕೆ ಎಡೆ ಮಾಡಿಕೊಟ್ಟಿದೆ. ಬಗ್ಗಾರನ್ನು ಬಂಧಿಸಿರುವ ಘಟನೆಯನ್ನು ಬಲವಾಗಿ ಖಂಡಿಸಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು, ಆಮ್ ಆದ್ಮಿ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ಧಾರೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್ ತಮ್ಮ ವೈಯಕ್ತಿಕ ದ್ವೇಷಕ್ಕಾಗಿ ಪಂಜಾಬ್ ಪೊಲೀಸರ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಪಂಜಾಬ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷರೂ ಆದ ನವಜೋತ್ ಸಿಧು ಕಿಡಿಕಾರಿದ್ಧಾರೆ.
ಪಂಜಾಬ್: ಬಿಜೆಪಿ ನಾಯಕ ತೇಜಿಂದರ್ ಬಗ್ಗಾ ಅರೆಸ್ಟ್- ಯಾವ ಪ್ರಕರಣದಲ್ಲಿ ಗೊತ್ತಾ?
"ತಜಿಂದರ್ ಸಿಂಗ್ ಬಗ್ಗಾ ಬೇರೆ ಪಕ್ಷದವರೇ ಆಗಿರಬಹುದು, ಸೈದ್ಧಾಂತಿಕವಾಗಿ ಭಿನ್ನತೆ ಇರಬಹುದು. ಆದರೆ, ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಪಂಜಾಬ್ ಪೊಲೀಸರ ಮೂಲಕ ವೈಯಕ್ತಿಕ ಜಿದ್ದಿಗೆ ಬಿದ್ದಿದ್ದಾರೆ. ಪಂಜಾಬ್ ಪೊಲೀಸರ ಘನತೆಗೆ ಕುಂದು ತರುತ್ತಿದ್ದಾರೆ" ಎಂದು ಮಾಜಿ ಕ್ರಿಕೆಟಿಗರೂ ಆದ ಸಿಧು ಟ್ವೀಟ್ ಮಾಡಿದ್ಧಾರೆ.
ತಜಿಂದರ್ ಬಂಧನ ಯಾಕೆ?; ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಮಾರ್ಚ್ 30ರಂದು ಕೇಜ್ರಿವಾಲ್ಗೆ ಬೆದರಿಕೆ ಹಾಕಿ ಟ್ವೀಟ್ ಮಾಡಿದ್ದರು. ಈ ಸಂಬಂಧ ಪಂಜಾಬ್ನ ಸೈಬರ್ ಸೆಲ್ನಲ್ಲಿ ದೂರು ಕೊಡಲಾಗಿತ್ತು. ಇಂದು ಬೆಳಗ್ಗೆ ಪಂಜಾಬ್ ಪೊಲೀಸರು ದೆಹಲಿಯ ನಿವಾಸದಿಂದ ಬಗ್ಗಾರನ್ನು ಬಂಧಿಸಿದರು.
ಪಟಿಯಾಲ ಘರ್ಷಣೆ ನಿಯಂತ್ರಣದಲ್ಲಿ ವೈಫಲ್ಯ: 3 ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ
ದೆಹಲಿಯಲ್ಲಿ ತಜಿಂದರ್ ಪಾಲ್ರನ್ನ ಪಂಜಾಬ್ ಪೊಲೀಸರು ಬಂಧಿಸಿ ಕರೆದೊಯ್ದದ್ದು ಮೂರು ರಾಜ್ಯಗಳ ಪೊಲೀಸರ ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿದೆ. ಪಂಜಾಬ್ ಪೊಲೀಸರು ತಮಗೆ ಮುಂಚಿತವಾಗಿ ಮಾಹಿತಿ ಕೊಡದೆಯೇ ಅಥವಾ ಕಾರಣ ಕೊಡದೆಯೇ ಏಕಾಏಕಿ ತಜಿಂದರ್ರನ್ನು ಬಂಧಿಸಿದರು ಎಂದು ಹೇಳಿರುವ ದೆಹಲಿ ಪೊಲೀಸರು ಈ ಸಂಬಂಧ ಪಂಜಾಬ್ ಪೊಲೀಸರ ಮೇಲೆ ಕಿಡ್ನಾಪ್ ದೂರು ದಾಖಲಿಸಿದ್ದಾರೆ.
ನಂತರ ಪಂಜಾಬ್ ಪೊಲೀಸರು ತಜಿಂದರ್ರನ್ನು ವಿಚಾರಣೆಗೆಂದು ಮೊಹಾಲಿಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕುರುಕ್ಷೇತ್ರದ ಬಳಿ ಹರಿಯಾಣ ಪೊಲೀಸರು ತಡೆದಿದ್ದಾರೆ. ದೆಹಲಿ ಪೊಲೀಸರ ಮನವಿ ಮೇರೆಗೆ ಕುರುಕ್ಷೇತ್ರದಲ್ಲಿ ತಡೆಯಾಗಿ ನಿಂತ ಹರಿಯಾಣ ಪೊಲೀಸರು ಪಂಜಾಬ್ ಪೊಲೀಸರಿಗೆ ಮುಂದೆ ಹೋಗಲು ಬಿಡಲಿಲ್ಲ. ತಜಿಂದರ್ ವಿರುದ್ಧ ದೂರು ನೀಡಿದ್ದ ಎಎಪಿ ಮುಖಂಡ ಸನ್ನಿ ಸಿಂಗ್ ಅಹ್ಲುವಾಲಿಯಾ ಮೊಹಾಲಿ ನಿವಾಸಿಯಾಗಿದ್ದಾರೆ. ಹೀಗಾಗಿ ಮೊಹಾಲಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಬೇಕೆಂದು ಪಂಜಾಬ್ ಪೊಲೀಸರು ಐದು ಬಾರಿ ನೋಟೀಸ್ ನೀಡಿದ್ದರೂ ಬಗ್ಗೆ ಸ್ಪಂದಿಸಿರಲಿಲ್ಲ. ಹೀಗಾಗಿ, ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ನಾಳೆ ಅವರನ್ನ ಮೊಹಾಲಿ ಜಿಲ್ಲಾ ನ್ಯಾಯಾಲಯ ಎದುರು ಹಾಜರುಪಡಿಸುವ ನಿರೀಕ್ಷೆ ಇದೆ.
ತಜಿಂದರ್ ತಂದೆ ಹೇಳಿಕೆ: ದೆಹಲಿಯ ಜನಕಪುರಿಯಲ್ಲಿರುವ ತಜಿಂದರ್ ಸಿಂಗ್ ಬಗ್ಗಾ ನಿವಾಸಕ್ಕೆ 10-15 ಪಂಜಾಬ್ ಪೊಲೀಸರು ನುಗ್ಗಿದ್ದಾರೆ. ಆಗ ಬಗ್ಗಾ ವಿಡಿಯೋ ಮಾಡಲು ಹೋದಾಗ ಮುಖದ ಮೇಲೆ ಹಲ್ಲೆ ಮಾಡಿ ಫೋನ್ ಕಸಿದುಕೊಂಡಿದ್ದಾರೆ. ಈ ಘಟನೆಯ ವಿವರ ನೀಡಿದ ತಜಿಂದರ್ ತಂದೆ ಪ್ರೀತ್ ಪಾಲ್ ಸಿಂಗ್, "ನನ್ನ ಮಗನನ್ನು ಯಾಕೆ ಕಸ್ಟಡಿಗೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಕಾರಣ ಕೊಡಲಿಲ್ಲ" ಎಂದು ದೂರಿದ್ಧಾರೆ.
ದೆಹಲಿ ಪೊಲೀಸರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಜಿಂದರ್ರನ್ನ ಕಸ್ಟಡಿಗೆ ತೆಗೆದುಕೊಂಡ ಬಳಿಕವಷ್ಟೇ ತಮಗೆ ಮಾಹಿತಿ ನೀಡಲಾಗಿದೆ. ಮುಂಚೆಯೇ ತಮಗೆ ಮಾಹಿತಿ ಕೊಡಲಿಲ್ಲ" ಎಂದಿದ್ದಾರೆ.
ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಕಾರ್ಯದರ್ಶಿ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರ ಬಂಧನನ್ನು ಬಿಜೆಪಿ ನಾಯಕರು ಬಲವಾಗಿ ಖಂಡಿಸಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ರದ್ದು ಸರ್ವಾಧಿಕಾರಿ ಮನೋಭಾವವಾಗಿದೆ ಎಂದು ಟೀಕಿಸಿದ್ದಾರೆ. ಅತ್ತ, ಆಮ್ ಆದ್ಮಿ ಶಾಸಕ ನರೇಶ್ ಬಾಲ್ಯನ್ ತಜಿಂದರ್ ಬಂಧನವನ್ನು ಸಮರ್ಥಿಸಿಕೊಂಡಿದ್ದಾರೆ. ಕೇಜ್ರಿವಾಲ್ ಮೇಲೆ ಜೀವಬೆದರಿಕೆ ಹಾಕುತ್ತಿದ್ದುದು ಸರಿಯೇ ಎಂದು ಮರು ಪ್ರಶ್ನೆ ಹಾಕಿದ್ದಾರೆ.
(ಒನ್ಇಂಡಿಯಾ ಸುದ್ದಿ)