ಖಾಸಗಿ ಉದ್ಯೋಗಗಳಲ್ಲಿ ಶೇ 75 ಸ್ಥಳೀಯ ಮೀಸಲಾತಿ: ತಡೆಯಾಜ್ಞೆ ರದ್ದು
ನವದೆಹಲಿ, ಫೆಬ್ರವರಿ 17: ಹರ್ಯಾಣದಲ್ಲಿ ನೆಲೆಸಿರುವ ವ್ಯಕ್ತಿಗಳಿಗೆ ಖಾಸಗಿ ವಲಯದ ಉದ್ಯೋಗ ಸಂಸ್ಥೆಗಳಲ್ಲಿ ಶೇ 75 ರಷ್ಟು ಮೀಸಲಾತಿ ಒದಗಿಸುವ ಕಾಯಿದೆ ಜಾರಿಗೆ ಇದ್ದ ಅಡ್ಡಿ ಆತಂಕ ದೂರಾಗಿದೆ. ಹರ್ಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯಿದೆ- 2020ಕ್ಕೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಗುರುವಾರದಂದು ರದ್ದುಗೊಳಿಸಿದೆ. ವಿಧಾನಸಭೆ ಚುನಾವಣೆ 2022 ಸಂದರ್ಭದಲ್ಲಿ ಈ ತೀರ್ಪು ಮಹತ್ವ ಪಡೆದುಕೊಳ್ಳುವ ಸಾಧ್ಯತೆಯಿದೆ.
ಹರ್ಯಾಣ ಸರ್ಕಾರ ಮತ್ತು ಫರಿದಾಬಾದ್ ಇಂಡಸ್ಟ್ರೀಸ್ ಅಸೋಸಿಯೇಷನ್ ನಡುವಣ ಪ್ರಕರಣದ ಮೂಲಕ ಮಹತ್ವದ ತೀರ್ಪು ಹೊರ ಬಂದಿದೆ. ಆದರೆ, ಉದ್ಯೋಗದಾತರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹರ್ಯಾಣ ಸರ್ಕಾರಕ್ಕೆ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಪಿ ಎಸ್ ನರಸಿಂಹ ಅವರಿದ್ದ ಪೀಠ ಸೂಚಿಸಿದೆ. ಕಾಯಿದೆಗೆ ತಡೆ ನೀಡಲು ಪಂಜಾಬ್ ಮತ್ತು ಹರ್ಯಾಣ ನ್ಯಾಯಾಲಯ ಸೂಕ್ತ ಕಾರಣಗಳನ್ನು ನೀಡಿಲ್ಲ ಹೀಗಾಗಿ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಹೊಸ ಕಾಯ್ದೆ: ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ ಶೇ.75ರಷ್ಟು ಉದ್ಯೋಗ
ಹರ್ಯಾಣದ ಕಾರ್ಮಿಕರು ವಲಸೆ ಹೋಗುವುದನ್ನು ತಡೆಯಬೇಕು. ರಾಜ್ಯದ ವಿದ್ಯಾವಂತರಿಗೆ ರಾಜ್ಯದಲ್ಲಿಯೇ ಉದ್ಯೋಗ ಸೃಷ್ಟಿಸಬೇಕು. ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ ಶೇ.75ರಷ್ಟು ಹುದ್ದೆಗಳನ್ನು ಮೀಸಲಿರಿಸಿದ ಮಸೂದೆ ಕರಡನ್ನು ಉಪ ಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ಸಿದ್ಧಪಡಿಸಿದ್ದರು. ಈ ಮಹತ್ವದ ಕಾಯ್ದೆಗೆ ರಾಜ್ಯಪಾಲ ಸತ್ಯದೇವ್ ನಾರಾಯಣ ಆರ್ಯ ಕಳೆದ ವರ್ಷ ಅನುಮೋದನೆ ನೀಡಿದ್ದರು.
ಆದರೆ, ಮಹತ್ವದ ಮಸೂದೆಗೆ ರಾಜ್ಯಪಾಲರು ಅನುಮೋದನೆ ನೀಡಿದ ಬೆನ್ನಲ್ಲೇ ಮಸೂದೆಯು ಕಾಯ್ದೆಯಾಗಿ ಪರಿವರ್ತನೆಯಾಗಿ ಜಾರಿಗೆ ಬರುವ ವೇಳೆಗೆ ಕಾನೂನು ಹೋರಾಟ ಆರಂಭವಾಯಿತು.
ನಾಲ್ಕು ರಾಜ್ಯಗಳಲ್ಲಿ ಇಂತಹ ಕಾನೂನು ಜಾರಿಯಲ್ಲಿರುವುದರಿಂದ ಎಲ್ಲಾ ಪ್ರಕರಣಗಳನ್ನು ಸುಪ್ರೀಂಕೋರ್ಟ್ಗೆ ವರ್ಗಾಯಿಸಲು ಕೋರಲಾಗುವುದು ಹೀಗಾಗಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಆದೇಶವನ್ನು ತಡೆ ಹಿಡಿಯಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರಿದ್ದರು. ವಲಸಿಗರು ಇತರ ರಾಜ್ಯಗಳಲ್ಲಿ ನೆಲೆಸುವುದನ್ನು ನಿಯಂತ್ರಿಸಲು ಈ ಕಾಯಿದೆಯು ಒಂದು ಸಾಧನವಾಗಿದೆ ಎಂದು ಅವರು ಇದೇ ವೇಳೆ ವಾದಿಸಿದರು.
ವಿಚಾರಣೆ ವೇಳೆ ಮಧ್ಯಪ್ರವೇಶಿಸಿದ ಫರಿದಾಬಾದ್ ಇಂಡಸ್ಟ್ರೀಸ್ ಅಸೋಸಿಯೇಷನ್ ಪರ ವಾದ ಮಂಡಿಸುತ್ತಿರುವ ಹಿರಿಯ ನ್ಯಾಯವಾದಿ ದುಶ್ಯಂತ್ ದವೆ, ಕಾನೂನನ್ನು ಒಂದು ದಿನದ ಮಟ್ಟಿಗೆ ಜಾರಿಗೆ ತಂದರೂ ಕೂಡ ನ್ಯಾಯಾಲಯ ನಿತ್ಯ ವ್ಯಾಜ್ಯಗಳನ್ನು ಎದುರಿಸಬೇಕಾಗುತ್ತದೆ ಏಕೆಂದರೆ 9 ಲಕ್ಷ ಕಂಪೆನಿಗಳಿವೆ ಎಂದು ತಿಳಸಿದರು. ಇದಕ್ಕೆ ಪೂರಕವಾಗಿ ವಾದ ಮಂಡಿಸಿದ ಮನೇಸರ್ ನೌಕರರ ಸಂಘದ ಪರ ವಕೀಲ ಶ್ಯಾಂ ದಿವಾನ್ ''ಇದು ವ್ಯವಹಾರದ ಮೇಲೆ ಆಳ ಪರಿಣಾಮ ಬೀರುತ್ತದೆ. ಹೈಕೋರ್ಟ್ ವಿಭಾಗೀಯ ಪೀಠ ಸರಿಯಾದ ರೀತಿಯಲ್ಲಿ ಇದನ್ನು ಪರಿಗಣಿಸಿತ್ತು. ಈ ಆದೇಶವನ್ನು (ಸುಪ್ರೀಂ ಕೋರ್ಟ್ ಆದೇಶ) ಮಧ್ಯಂತರ ಆದೇಶ ಎಂದು ಮಾತ್ರವೇ (ಸರ್ಕಾರ) ಪರಿಗಣಿಸಲಿ. ಕಾಯಿದೆಯ ವಿರುದ್ಧ ತಡೆಯಾಜ್ಞೆ ತೆರವಾಗಿದೆ ಎಂದು ಭಾವಿಸಿ ಅವರು (ಸರ್ಕಾರ) ಬಲವಂತದ ಕ್ರಮಗಳಿಗೆ ಮುಂದಾಗಬಾರದು'' ಎಂದರು.
ಆಗ ಅಸೋಸಿಯೇಷನ್ಗಳಿಗೆ ಮಧ್ಯಂತರ ರಕ್ಷಣೆ ನೀಡುವುದಾಗಿ ಸ್ಪಷ್ಟಪಡಿಸಿದ ಸುಪ್ರೀಂ ಪೀಠ ಹೈಕೋರ್ಟ್ ನಾಲ್ಕು ವಾರಗಳ ಒಳಗೆ ಪ್ರಕರಣವನ್ನು ನಿರ್ಧರಿಸಲಿ ಎಂದು ಸೂಚಿಸಿ ವಿಚಾರಣೆಯನ್ನು ಮುಂದೂಡಿತು.
ಹರಿಯಾಣ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಖಾಸಗಿ ಕಂಪನಿಗಳಲ್ಲೂ ಸ್ಥಳೀಯರಿಗೆ ಶೇ.75ರಷ್ಟು ಮೀಸಲಾತಿ ನೀಡುವುದಾಗಿ ದುಷ್ಯಂತ್ ಚೌತಾಲಾ ಅವರ ನೇತೃತ್ವದ ಜನನಾಯಕ್ ಜನತಾ ಪಕ್ಷವು ಆಶ್ವಾಸನೆ ನೀಡಿತ್ತು. 90 ಸ್ಥಾನಗಳಲ್ಲಿ 10 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ ಜೆಜೆಪಿಯು ಬಿಜೆಪಿ ಜೊತೆಗೆ ಸೇರಿಕೊಂಡು ಮೈತ್ರಿ ಸರ್ಕಾರವನ್ನು ರಚಿಸಿತು. ಇದೀಗ ತನ್ನ ಚುನಾವಣಾ ಆಶ್ವಾಸನೆಗೆ ಸಂಬಂಧಿಸಿದ ಕಾನೂನು ಜಾರಿಗೊಳಿಸಿತ್ತು.