ಪಂಜಾಬ್ ಹೊಸ ಸಿಎಂ ಆಯ್ಕೆ ಬಗ್ಗೆ ಸುಖ್ ಜಿಂದರ್ ಸಿಂಗ್ ರಾಂಧಾವ ಪ್ರತಿಕ್ರಿಯೆ
ಅಮೃತಸರ್, ಸೆಪ್ಟೆಂಬರ್ 19: "ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಚರಂಜಿತ್ ಸಿಂಗ್ ಚನ್ನಿ ಆಯ್ಕೆಯು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವಾಗಿದ್ದು, ಅದನ್ನು ನಾನು ಸ್ವಾಗತಿಸುತ್ತೇನೆ," ಎಂಗು ಸುಖ್ ಜಿಂದರ್ ಸಿಂಗ್ ರಾಂಧಾವ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನಾಯಕರ ಜೊತೆಗೆ ಭಾನುವಾರ ನಡೆಸಿದ ಚರ್ಚೆಯಲ್ಲಿ ಬಹುಪಾಲು ಕಾಂಗ್ರೆಸ್ ಶಾಸಕರು ಸುಖ್ ಜಿಂದರ್ ರಾಂಧವ ಹೆಸರನ್ನು ಸೂಚಿಸಲಾಗಿತ್ತು. ಇದರ ಮಧ್ಯೆಯೂ ನಡೆದ ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಚರಂಜಿತ್ ಸಿಂಗ್ ಚನ್ನಿ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ಬಗ್ಗೆ ಸ್ವತಃ ರಾಂಧವ ಪ್ರತಿಕ್ರಿಯೆ ನೀಡಿದ್ದಾರೆ.
Breaking News: ಪಂಜಾಬ್ ಸಿಎಂ ಸ್ಥಾನಕ್ಕೆ ಚರಂಜಿತ್ ಸಿಂಗ್ ಚನ್ನಿ ಆಯ್ಕೆ
"ಇದು ಹೈಕಮಾಂಡ್ ನಿರ್ಧಾರವಾಗಿದ್ದು, ನಾನು ಸ್ವಾಗತಿಸುತ್ತೇನೆ. ಚೆನ್ನಿ ನನ್ನ ಚಿಕ್ಕ ಸಹೋದರನಿದ್ದಂತೆ, ಈ ವಿಷಯದಲ್ಲಿ ನಾನು ಯಾವುದೇ ರೀತಿ ಅಸಮಾಧಾನವನ್ನು ಹೊಂದಿಲ್ಲ," ಎಂದು ಸುಖ್ ಜಿಂದರ್ ಸಿಂಗ್ ರಾಂಧಾವ ಹೇಳಿದ್ದಾರೆ. ಅಮರೀಂದರ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಚುರುಕು ಪಡೆದುಕೊಂಡಿತ್ತು. ಕಾಂಗ್ರೆಸ್ ಶಾಸಕರೆಲ್ಲ ರಾಂಧಾವ ಹೆಸರನ್ನು ಸೂಚಿಸಿದ್ದು, ಇನ್ನೇನು ಅಧಿಕೃತ ಘೋಷಣೆ ಹೊರ ಬೀಳಲಿದೆ ಎನ್ನುವಷ್ಟರಲ್ಲೇ ಹೈಕಮಾಂಡ್ ನಾಯಕರು ತಮ್ಮ ತೀರ್ಮಾನವನ್ನೇ ಬದಲಿಸಿಕೊಂಡಿದ್ದಾರೆ. ದಲಿತ ನಾಯಕನಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದೆ.
ಪಂಜಾಬ್ ಸಿಎಂ ಬಗ್ಗೆ ಹರೀಶ್ ರಾವತ್ ಟ್ವೀಟ್:
ರಾಜ್ಯದ ಬಹುಪಾಲು ಕಾಂಗ್ರೆಸ್ ಶಾಸಕರು ಮುಂದಿನ ಸಿಎಂ ಸ್ಥಾನಕ್ಕೆ ಸುಖ್ ಜಿಂದರ್ ರಾಂಧವ ಹೆಸರನ್ನೇ ಘೋಷಿಸಲಿದ್ದಾರೆ ಎಂದು ಎದುರು ನೋಡುತ್ತಿದ್ದರು. ಆದರೆ ಹೈಕಮಾಂಡ್ ನಾಯಕರು ತೆಗೆದುಕೊಂಡ ಅಚ್ಚರಿಯ ತೀರ್ಮಾನದ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಹರೀಶ್ ರಾವತ್ ಟ್ವೀಟ್ ಮಾಡಿದ್ದಾರೆ. ಚರಂಜಿತ್ ಸಿಂಗ್ ಚನ್ನಿ ಪಂಜಾಬಿನ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
It gives me immense pleasure to announce that Sh. #CharanjitSinghChanni has been unanimously elected as the Leader of the Congress Legislature Party of Punjab.@INCIndia @RahulGandhi @INCPunjab pic.twitter.com/iboTOvavPd
— Harish Rawat (@harishrawatcmuk) September 19, 2021
ರಾಜಭವನದತ್ತ ಕಾಂಗ್ರೆಸ್ ನಾಯಕರು:
ಪಂಜಾಬ್ ಮುಖ್ಯಮಂತ್ರಿ ಆಯ್ಕೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಘೋಷಣೆ ಹೊರಡಿಸುತ್ತಿದ್ದಂತೆ ಚಂಡೀಗಢದ ರಾಜಭವನದತ್ತ ಕಾಂಗ್ರೆಸ್ ನಾಯಕರು ತೆರಳಿದರು. ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ರಾಜಭವನಕ್ಕೆ ತೆರಳಿದ್ದರೆ, ಇತ್ತ ಚಂಡೀಗಢದ ಜೆಡೆಬ್ಲ್ಯು ಮ್ಯಾರಿಯಟ್ ಹೋಟೆಲ್ ನಿಂದ ರಾಜಭವನಕ್ಕೆ ಚರಂಜಿತ್ ಸಿಂಗ್ ಚನ್ನಿ ತೆರಳಿದ್ದಾರೆ. ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವುದಾಗಿ ಅವರು ಹೇಳಿದ್ದಾರೆ.
‘My best wishes to Charanjit Singh Channi. I hope he’s able to keep the border state of Punjab safe and protect our people from the growing security threat from across the border’: @capt_amarinder pic.twitter.com/oO2F6JUZ6J
— Raveen Thukral (@RT_Media_Capt) September 19, 2021
ಮಾಜಿ ಸಿಎಂ ಅಮರೀಂದರ್ ಸಿಂಗ್ ಶುಭಾಶಯ:
ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ ಅಮರೀಂದರ್ ಸಿಂಗ್, ಭಾನುವಾರ ರಾಜ್ಯದ ನೂತನ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿಗೆ ಶುಭಾಷಯ ಕೋರಿದ್ದಾರೆ. "ಗಡಿ ರಾಜ್ಯವಾದ ಪಂಜಾಬ್ ಅನ್ನು ಸುರಕ್ಷಿತವಾಗಿಡಲು ಮತ್ತು ಗಡಿಯುದ್ದಕ್ಕೂ ಹೆಚ್ಚುತ್ತಿರುವ ಭದ್ರತಾ ಬೆದರಿಕೆಯಿಂದ ನಮ್ಮ ಜನರನ್ನು ರಕ್ಷಿಸುವಲ್ಲಿ ಅವರು ಸಮರ್ಥರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ," ಎಂದು ಟ್ವೀಟ್ ಮಾಡಿದ್ದಾರೆ.