ಡ್ರಗ್-ರೇಪ್ ವರದಿ ಪ್ರಕಟಿಸುವಂತೆ ಸಿಧು ಒತ್ತಾಯ: ಉಪವಾಸದ ಎಚ್ಚರಿಕೆ
ಚಂಡೀಗಢ, ನವೆಂಬರ್ 25: ಡ್ರಗ್ಸ್ ಹಾವಳಿ ಮತ್ತು ಅತ್ಯಾಚಾರ ಘಟನೆಗಳ ವರದಿಗಳನ್ನು ಸಾರ್ವಜನಿಕಗೊಳಿಸುವಂತೆ ಒತ್ತಾಯಿಸಿದ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಆಮರಣಾಂತ ಉಪವಾಸ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮೊಗಾ ಜಿಲ್ಲೆಯ ಬಾಘಪುರಾಣ ಪಟ್ಟಣದಲ್ಲಿ ಗುರುವಾರದಂದು ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾದಕ ದ್ರವ್ಯ ಹಾವಳಿ ಮತ್ತು ಅತ್ಯಾಚಾರ ಘಟನೆಗಳ ವರದಿಯನ್ನು ಕಾಂಗ್ರೆಸ್ ಸರಕಾರ ಪ್ರಕಟಿಸದಿದ್ದರೆ ಆಮರಣಾಂತ ಉಪವಾಸ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ನನ್ನ ಆತ್ಮಸಾಕ್ಷಿ ಮತ್ತು ಎಲ್ಲಾ ಪಂಜಾಬಿಗಳ ಆತ್ಮಸಾಕ್ಷಿಯು ನ್ಯಾಯವನ್ನು ಬಯಸುತ್ತದೆ. ನಮಗೆ ನ್ಯಾಯ ಒದಗಿಸಲು ಸಾಧ್ಯವಾಗದ ಸರ್ಕಾರವಿದ್ದೂ ಏನು ಪ್ರಯೋಜನ. ಡ್ರಗ್ಸ್ ನಿಂದಾಗಿ ಅದೆಷ್ಟೋ ತಾಯಂದಿರು ಪತಿ ಮತ್ತು ಪುತ್ರರನ್ನು ಕಳೆದುಕೊಂಡಿದ್ದಾರೆ. ಅಂಥಹ ನೂರಾರು ಮತ್ತು ಸಾವಿರಾರು ಮಹಿಳೆಯರು ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಜೊತೆಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಬದಲು ಹಿಂದಿನ ಮುಖ್ಯಮಂತ್ರಿ ನಾಲ್ಕೈದು ವರ್ಷ ನಿದ್ದೆ ಮಾಡಿದ್ದು ಯಾಕೆ ಅನ್ನೋದು ಪಂಜಾಬ್ ಜನರಿಗೆ ಗೊತ್ತಾಗಬೇಕು.
#WATCH | Punjab Congress chief Navjot Singh Sidhu says he will go on a hunger strike against the state govt if it doesn't make public the reports on drugs menace & the sacrilege incident pic.twitter.com/xfb0cb2xuG
— ANI (@ANI) November 25, 2021
ಅಮರಣಾಂತ ಉಪವಾಸ
ಪಂಜಾಬ್ ಸರ್ಕಾರ ಈ ವರದಿಯನ್ನು ಬಹಿರಂಗಗೊಳಿಸದಿದ್ದರೆ, ನಾನು ನನ್ನ ದೇಹವನ್ನು ಪಣಕ್ಕಿಟ್ಟು ಉಪವಾಸ ಮಾಡುತ್ತೇನೆ. ನನ್ನ ತ್ಯಾಗದಿಂದಾದರೂ ವಿಷಯದ ಬಗ್ಗೆ ಸರ್ಕಾರದಿಂದ ಉತ್ತರವನ್ನು ಬಯಸುತ್ತೇನೆ. ಆ ವರದಿಯೂ ಹೊರಬರಬೇಕು. ವರದಿಯನ್ನೂ ಬಹಿರಂಗಗೊಳಿಸದೇ ಇದ್ದರೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿಗೆ ಎಚ್ಚರಿಸಿದ್ದಾರೆ. "ನಾನು ಪಕ್ಷದ ಅಧ್ಯಕ್ಷ. ನನಗೆ ಯಾವುದೇ ಆಡಳಿತಾತ್ಮಕ ಅಧಿಕಾರವಿಲ್ಲ. ಹೀಗಾಗಿ ನಾನು ಚನ್ನಿ ಅವರಿಗೆ ಮಾದಕವಸ್ತುಗಳ ಹಾವಳಿ ಮತ್ತು ಅತ್ಯಾಚಾರ ಘಟನೆಗಳ ವಿಷಯಗಳ ಬಗ್ಗೆ ಕಾರ್ಯನಿರ್ವಹಿಸಲು ಅವರಿಗೆ ನಿರ್ದೇಶನ ನೀಡುತ್ತೇನೆ,'' ಎಂದು ಅವರು ಹೇಳಿದರು.
ದಿವಾಳಿಯತ್ತ ಪಂಜಾಬ್
ಮುಂದುವರೆದು ಮಾತನಾಡಿದ ಅವರು, ಪಂಜಾಬ್ ದಿವಾಳಿಯತ್ತ ಸಾಗುತ್ತಿದೆ ಎಂದು ಹೇಳಿದರು. ಕಳೆದುಹೋದ ವೈಭವವನ್ನು ಮರಳಿ ಪಡೆಯಲು, ಪಂಜಾಬ್ ಅನ್ನು ಮುನ್ನಡೆಸಲು, ರಾಜ್ಯದ ಹಣಕಾಸು ಪುನರ್ರಚನೆ ಮತ್ತು ಸುವ್ಯವಸ್ಥಿತ ಅಗತ್ಯವಿದೆ. ಪಂಜಾಬ್ ಸರ್ಕಾರವು ಗಣಿಗಾರಿಕೆಯಿಂದ 2,000 ಕೋಟಿ ರೂ. ಮತ್ತು ಅಬಕಾರಿ ಆದಾಯದಿಂದ 20,000 ಕೋಟಿ ರೂ. ಗಳಿಸಬಹುದು. ಪಂಜಾಬ್ ಸಮರ್ಥವಾಗಿ ಕೆಲಸ ಮಾಡಲು ಕನಿಷ್ಠ 35,000 ಕೋಟಿ ಗಳಿಸಬೇಕಾಗಿದೆ. ಆದರೆ ಉತ್ತಮ ಲಾಭ ಗಳಿಸಲು ಮತ್ತು ಮಾಫಿಯಾವನ್ನು ಕಿತ್ತುಹಾಕಲು ವ್ಯವಸ್ಥೆಯನ್ನು ಬದಲಾಯಿಸಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.
ಕೇಬಲ್ ಮಾಫಿಯಾ
ಕೇಬಲ್ ಮಾಫಿಯಾ ಕುರಿತು ಮಾತನಾಡಿದ ಅವರು, ನಿಮಗೆ ತಿಂಗಳಿಗೆ 100 ರೂ.ಗೆ ಕೇಬಲ್ ನೆಟ್ವರ್ಕ್ ಸೇವೆ ನೀಡುವುದಿಲ್ಲ ಆದರೆ ಇದರಿಂದ ರಾಜ್ಯಕ್ಕೆ ಏನು ಲಾಭ? ಹಿಂದಿನ ಸರ್ಕಾರಗಳ ಆಶ್ರಯದಲ್ಲಿ ಕೇಬಲ್ ನೆಟ್ವರ್ಕ್ ಮಾಲೀಕರು ಸಣ್ಣ ಆಪರೇಟರ್ಗಳನ್ನು ಜೀತದಾಳುಗಳನ್ನಾಗಿ ಮಾಡಿದ್ದಾರೆ ಎಂದು ಅವರು ಹೇಳಿದರು. "ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಬಾಕಿ ಇರುವ ಕೇಬಲ್ ಮಾಫಿಯಾದಿಂದ ನಾನು ಎಲ್ಲಾ ತೆರಿಗೆಗಳು ಮತ್ತು ಬಾಡಿಗೆಗಳನ್ನು ವಸೂಲಿ ಮಾಡುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ" ಎಂದು ಅವರು ಹೇಳಿದರು. ಕೇಬಲ್ ವ್ಯವಸ್ಥೆಯಿಂದ ನಾವು 5,000 ಕೋಟಿ ಗಳಿಸಬಹುದು,'' ಎಂದು ಅವರು ಹೇಳಿದ್ದಾರೆ.
ವಿವಾದಿತ ಕೃಷಿ ಕಾನೂನು
ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಹೋರಾಟದಲ್ಲಿ ರೈತರು ಗೆದ್ದಿದ್ದಾರೆ. ಆದರೆ ಕೇಂದ್ರ ಸರ್ಕಾರವು ಆಹಾರ ಧಾನ್ಯಗಳ ಖರೀದಿಗೆ ಖಾತರಿ ನೀಡದ ಕಾರಣ ಈ ಗೆಲುವು ಅರ್ಧಕ್ಕೆ ನಿಂತಿದೆ. ಖರೀದಿಯ ಖಾತರಿಯನ್ನು ಅವರು ನೀಡಿಲ್ಲ ಎಂಬುದು ಪ್ರಶ್ನೆಯಾಗಿದೆ. ಮುಂದಿನ ವರ್ಷಗಳಲ್ಲಿ ರೈತರಿಂದ ಸರಕಾರ ಖರೀದಿ ಸ್ಥಗಿತಗೊಳಿಸಬಹುದು ಎಂದು ರೈತರಿಗೆ ಎಚ್ಚರಿಕೆ ನೀಡಿದರು.