ಪಂಜಾಬ್ ಕಾಂಗ್ರೆಸ್ನಲ್ಲಿ ಮುಗಿಯದ ಆಂತರಿಕ ಕಲಹ, ಚನ್ನಿ ವಿರುದ್ಧ ಸಿಧು ಗುಡುಗು
ಚಂಡೀಗಢ, ನವೆಂಬರ್ 02: ಇನ್ನೇನು ಪಂಜಾಬ್ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಆದರೆ ಕಾಂಗ್ರೆಸ್ನಲ್ಲಿ ಭಿನ್ನಾಭಿಪ್ರಾಯ ಇದುವರೆಗೂ ಶಮನವಾಗಿಲ್ಲ. ಪಂಜಾಬ್ ನಲ್ಲಿ ಮುಖ್ಯಮಂತ್ರಿ ಬದಲಾದರೂ ಸಹ ಚುನಾವಣೆ ಸನಿಹದಲ್ಲಿ ಆಡಳಿತಾರೂಢ ಕಾಂಗ್ರೆಸ್ ನ ಆಂತರಿಕ ಕಲಹ ಮುಗಿಯುವಂತೆ ಕಾಣುತ್ತಿಲ್ಲ.
ಈಗ ಸರ್ಕಾರದ ನಡೆಯನ್ನು ಕಾಂಗ್ರೆಸ್ ನ ಮುಖ್ಯಸ್ಥರಾಗಿರುವ ನವಜೋತ್ ಸಿಂಗ್ ಸಿಧು ತೀವ್ರವಾಗಿ ವಿರೋಧಿಸಿದ್ದು, ಚುನಾವಣೆಗೂ ಮುನ್ನ ಲಾಲಿಪಪ್ ಗಳನ್ನು ನೀಡುವ ರಾಜಕಾರಣಿಗಳನ್ನು ಟೀಕಿಸಿದ್ದು, ಪಂಜಾಬ್ ನ ಜನಕಲ್ಯಾಣವಾಗುವುದು ಮಾರ್ಗಸೂಚಿಗಳಿಂದಲೇ ಹೊರತು, ಚುನಾವಣೆಗಳ ಸಂದರ್ಭದಲ್ಲಿ ತಂತ್ರಗಳಿಂದ ಅಲ್ಲ ಎಂದು ಹೇಳಿದ್ದಾರೆ.
ಚುನಾವಣೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಪಂಜಾಬ್ ಸಿಎಂ ಚರಣ್ ಜೀತ್ ಸಿಂಗ್ ಚನ್ನಿ ಹಲವು ಜನಪ್ರಿಯ ಘೋಷಣೆಗಳನ್ನು ಮಾಡಿದ್ದರು.
ಸರ್ಕಾರಿ ಉದ್ಯೋಗಿಗಳಿಗೆ ತುಟ್ಟಿ ಭತ್ಯೆಯನ್ನು ಶೇ.11 ರಷ್ಟು ಏರಿಕೆ ಮಾಡಿ, ಗೃಹ ಉಪಯೋಗಿ ವಿದ್ಯುತ್ ಗೆ ಪ್ರತಿ ಯೂನಿಟ್ ಗೆ ರೂಪಾಯಿ 3 ರಷ್ಟು ಕಡಿತಗೊಳಿಸುವ ಘೋಷಣೆಯನ್ನು ಪ್ರಕಟಿಸಿದ್ದರು ಸಿಎಂ ಛನ್ನಿ. ಈ ಬೆನ್ನಲ್ಲೇ ಸರ್ಕಾರದ ನಡೆಯನ್ನು ಸಿಧು ಟೀಕಿಸಿದ್ದಾರೆ.
ಇದೇ ವೇಳೆ ರಾಜ್ಯದ ಜನತೆಗೂ ಕರೆ ನೀಡಿರುವ ಸಿಧು ಇಂತಹ ಭರವಸೆಗಳನ್ನು ನೋಡಿ ಮತ ಚಲಾಯಿಸದೇ ರಾಜ್ಯದ ಅಭಿವೃದ್ಧಿಯ ಅಜೆಂಡಾವನ್ನು ಗಮನದಲ್ಲಿಟ್ಟುಕೊಂಡು ಮತಚಲಾವಣೆ ಮಾಡುವಂತೆ ಸಲಹೆ ನೀಡಿದ್ದಾರೆ.
ಕೊನೆಯ ಎರಡು ತಿಂಗಳಲ್ಲಿ ಜನತೆಗೆ ಲಾಲಿಪಪ್ ನ್ನು ನೀಡುತ್ತಾರೆ. ಆದರೆ ಪ್ರಶ್ನೆ ಇರುವುದು ಎಲ್ಲಿಂದ ಸರ್ಕಾರ ನೀಡುತ್ತದೆ? ಜನರಿಗೆ ಸುಳ್ಳು ಭರವಸೆ ನೀಡಿ ಸರ್ಕಾರ ರಚಿಸುವುದೇ ಉದ್ದೇಶವೇ? ಎಂದು ಅವರು ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಾ ಹೇಳಿದ್ದರು.
ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನವಜೋತ್ಸಿಂಗ್ ಸಿಧು ಮೊದಲಿನಿಂದಲೂ ಬಂಡಾಯಗಾರ, ನಿಂತಲ್ಲಿ ನಿಲ್ಲದ, ಯಾವುದೇ ಕ್ಷಣದಲ್ಲೇ ಯಾವುದೇ ನಿರ್ಧಾರ ಬೇಕಾದರೂ ತೆಗೆದುಕೊಳ್ಳಬಹುದಾದ ವ್ಯಕ್ತಿತ್ವ.
2004ರಲ್ಲಿ ಬಿಜೆಪಿ ಸೇರ್ಪಡೆಯೊಂದಿಗೆ ರಾಜಕೀಯ ಕಾಲಿಟ್ಟಸಿಧು, 2004ರಲ್ಲಿ ಲೋಕಸಭೆಗೆ ಆಯ್ಕೆಯಾದರು. 2014ರವರೆಗೆ ಅವರು ಬಿಜೆಪಿ ಸಂಸದರಾಗಿದ್ದರು. 2014ರಲ್ಲಿ ಬಿಜೆಪಿ ಅವರಿಗೆ ಲೋಕಸಭೆ ಟಿಕೆಟ್ ನಿರಾಕರಿಸಿತು. ಅದಕ್ಕೆ ಪ್ರತಿಯಾಗಿ 2016ರಲ್ಲಿ ಅವರನ್ನು ರಾಜ್ಯಸಭೆಗೆ ಕಳಿಸಿತು. ಆದರೆ ಹೈಕಮಾಂಡ್ ವಿರುದ್ಧ ಮುನಿಸಿಕೊಂಡ ಸಿಧು ರಾಜ್ಯಸಭೆ ಸದಸ್ಯತ್ವ ಮತ್ತು ಬಿಜೆಪಿಗೆ ರಾಜೀನಾಮೆ ಸಲ್ಲಿಸಿದರು.
2017ರಲ್ಲಿ ಕಾಂಗ್ರೆಸ್ ಸೇರಿದ ಸಿಧು ವಿಧಾನಸಭೆಗೆ ಆಯ್ಕೆಯಾದರು. ಜೊತೆಗೆ ಅಮರೀಂದರ್ ಸಂಪುಟದಲ್ಲಿ ಡಿಸಿಎಂ ಪಟ್ಟಕ್ಕಾಗಿ ಪಟ್ಟುಹಿಡಿದರು. ಪಟ್ಟಸಿಗದೇ ಇದ್ದಾಗ ಪದೇ ಪದೇ ಅಮರೀಂದರ್ ವಿರುದ್ಧ ಟೀಕಾಪ್ರಹಾರ ನಡೆಸುತ್ತಲೇ ಬಂದರು. ಸಚಿವ ಹುದ್ದೆಯಲ್ಲಿದ್ದರೂ ಸರ್ಕಾರವನ್ನು ಟೀಕಿಸುವುದು ಬಿಡಲಿಲ್ಲ.
ಈ ನಡುವೆ ರಾಜ್ಯಾಧ್ಯಕ್ಷ ಪಟ್ಟಕ್ಕೆ ಸಿಧು ಸ್ಕೆಚ್ ಹಾಕಿದರು. ಅದಕ್ಕೆ ಹೈಕಮಾಂಡ್ ಒಪ್ಪದಿದ್ದಾಗ ಆಮ್ಆದ್ಮಿ ಸೇರಲು ಸಿದ್ಧತೆ ನಡೆಸಿದ್ದರು. ಆದರೆ ಅಲ್ಲೂ ಸಿಎಂ ಪಟ್ಟಸಿಗುವುದು ಖಾತ್ರಿಯಾಗದೇ ಇದ್ದಾಗ ಮತ್ತೆ ಬಿಜೆಪಿ ಸೇರುವ ವದಂತಿಗಳೂ ಹಬ್ಬಿದ್ದವು. ಕೊನೆಗೆ ರಾಜ್ಯದಲ್ಲಿ ಪಕ್ಷ ಉಳಿಸಿಕೊಳ್ಳುವ ಸಲುವಾಗಿ ಸಿಧುಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಲಾಯಿತು.
ಹುದ್ದೆ ವಹಿಸಿಕೊಂಡ ದಿನದಿಂದಲೂ ಸಿಎಂಗೆ ವಿರುದ್ಧವಾಗಿ ಚಟುವಟಿಕೆ ನಡೆಸಿಕೊಂಡೇ ಬಂದು ಎಲ್ಲರ ಕೆಂಗಣ್ಣಿಗೆ ಗುರಿಯಾದರು. ಇದೀಗ ತಮ್ಮ ಆಪ್ತ ಸಿಎಂ ಚನ್ನಿ ಮತ್ತು ಹೈಕಮಾಂಡ್ ನಿರ್ಧಾರ ವಿರೋಧಿಸಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ವಾಪಾಸಾಗಿದ್ದಾರೆ. ಆದರೂ ಆಂತರಿಕ ಕಲಹ ಇನ್ನೂ ನಿಂತಿಲ್ಲ.
ಸೆಪ್ಟೆಂಬರ್ 28ರಂದು ಸಿಧು ರಾಜೀನಾಮೆ ನೀಡಿದರೂ ಕಾಂಗ್ರೆಸ್ ಹೈಕಮಾಂಡ್ ನಾಯಕರು ಅದನ್ನು ಒಪ್ಪಿರಲಿಲ್ಲ. ಸಿಧು ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದಿರಲೂ ಇಲ್ಲ. ಅವರು ರಾಹುಲ್ ಗಾಂಧಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.