ಲಾರೆನ್ಸ್ ಬಿಷ್ಣೋಯ್ ಗಾಯಕನ ಹತ್ಯೆಯ ಮಾಸ್ಟರ್ ಮೈಂಡ್- ಪಂಜಾಬ್ ಪೊಲೀಸ್
ಚಂಡಿಗಢ ಜೂನ್ 23: ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರು ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರ ಹತ್ಯೆಯ ಮಾಸ್ಟರ್ ಮೈಂಡ್ ಆಗಿದ್ದು ಕಳೆದ ಆಗಸ್ಟ್ನಿಂದ ಹತ್ಯೆಯ ಸಂಚು ಯೋಜಿಸುತ್ತಿದ್ದರು ಎಂದು ಪಂಜಾಬ್ ಪೊಲೀಸ್ ಎಡಿಜಿಪಿ ಪ್ರಮೋದ್ ಬಾನ್ ಗುರುವಾರ ಹೇಳಿದ್ದಾರೆ. ಮತ್ತೊಬ್ಬ ಆರೋಪಿ ಬಲದೇವ್ ಅಲಿಯಾಸ್ ನಿಕ್ಕುನನ್ನು ಗುರುವಾರ ಬಂಧಿಸಲಾಗಿದೆ ಎಂದು ದರೋಡೆಕೋರರ ನಿಗ್ರಹ ಕಾರ್ಯಪಡೆಯ ಮುಖ್ಯಸ್ಥರೂ ಆಗಿರುವ ಬಾನ್ ಹೇಳಿದ್ದಾರೆ.
ಪಂಜಾಬ್ ಸರ್ಕಾರ ಗಾಯಕ ಸಿಧುಗೆ ಒದಗಿಸಲಾಗಿದ್ದ ಭದ್ರತಾ ಸಿಬ್ಬಂದಿ ತಾತ್ಕಾಲಿಕವಾಗಿ ಹಿಂಪಡೆದ ಒಂದು ದಿನದ ನಂತರ ಅಂದರೆ ಮೇ 29 ರಂದು ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೂಸೆವಾಲಾ ಅಲಿಯಾಸ್ ಶುಭದೀಪ್ ಸಿಂಗ್ ಸಿಧು ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.
"ನಾವು ಈ ಪ್ರಕರಣದಲ್ಲಿ ಇತ್ತೀಚೆಗೆ ಲಾರೆನ್ಸ್ ಬಿಷ್ಣೋಯ್ ಅವರನ್ನು ಬಂಧಿಸಿದ್ದೇವೆ ಮತ್ತು ಅವರ ಬಂಧನವನ್ನು ಜೂನ್ 27 ರವರೆಗೆ ವಿಸ್ತರಿಸಲಾಗಿದೆ. ಅವರು ತಾವೇ ಮಾಸ್ಟರ್ ಮೈಂಡ್ (ಮೂಸೆವಾಲಾ ಹತ್ಯೆಯಲ್ಲಿ) ಎಂದು ಒಪ್ಪಿಕೊಂಡಿದ್ದಾರೆ" ಎಂದು ಬಾನ್ ಸುದ್ದಿಗಾರರಿಗೆ ತಿಳಿಸಿದರು.
ಮೂರು ಬಾರಿ ದಾಳಿ
"ಕಳೆದ ವರ್ಷದ ಆಗಸ್ಟ್ನಿಂದಲೇ ಹತ್ಯೆ ನಡೆಸಲು ಯೋಜನೆ ರೂಪಿಸಲಾಗಿತ್ತು. ನಮ್ಮ ಮಾಹಿತಿ ಪ್ರಕಾರ ಮೂರು ಬಾರಿ ದಾಳಿ ನಡೆಸಲಾಗಿತ್ತು. ಜನವರಿಯಲ್ಲೂ ಮೂಸೆವಾಲಾನನ್ನು ಕೊಲ್ಲಲು ಬೇರೆ ಬೇರೆ ಶೂಟರ್ಗಳು ಬಂದಿದ್ದರು ಆದರೆ ಅದು ಸಾಧ್ಯವಾಗಲಿಲ್ಲ" ಎಂದು ಎಡಿಜಿಪಿ ಹೇಳಿದ್ದಾರೆ.
ಮೂಸೆವಾಲಾ ಹತ್ಯೆಗೆ ಬಳಸಿದ ವಾಹನದಲ್ಲಿ ಫತೇಹಾಬಾದ್ ಮೂಲದ ಪೆಟ್ರೋಲ್ ಪಂಪ್ನಿಂದ ಮೇ 25 ರ ರಶೀದಿ ಪತ್ತೆಯಾಗಿದೆ. ಇದು ಘಟನೆಗಳ ಜಾಡನ್ನು ಅನಾವರಣಗೊಳಿಸಲು ಪಂಜಾಬ್ ಪೊಲೀಸರಿಗೆ ಸಾಧ್ಯವಾಯಿತು ಎಂದು ಅವರು ಹೇಳಿದರು.
13 ಜನರ ಬಂಧನ
"ಫತೇಹಾಬಾದ್ ಪೆಟ್ರೋಲ್ ಪಂಪ್ನಿಂದ ಪಡೆದ ಸಿಸಿಟಿವಿ ದೃಶ್ಯಗಳಿಂದ, ನಾವು ಆರೋಪಿ ಪ್ರಿಯವ್ರತ್ ಅಲಿಯಾಸ್ ಫೌಜಿಯನ್ನು ಗುರುತಿಸಿದ್ದೇವೆ. ನಾವು ಇದುವರೆಗೆ 13 ಜನರನ್ನು ಬಂಧಿಸಿದ್ದೇವೆ ಮತ್ತು ಸಂಪೂರ್ಣ ಪಿತೂರಿಯನ್ನು ಬಿಚ್ಚಿಡಲಾಗಿದೆ" ಎಂದು ಬಾನ್ ಹೇಳಿದ್ದಾರೆ.
ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ವಿಚಾರಣೆಗಾಗಿ ಕಳೆದ ವಾರ ದೆಹಲಿಯಿಂದ ಪಂಜಾಬ್ ಪೊಲೀಸರು ರಾಜ್ಯಕ್ಕೆ ಕರೆತಂದಿದ್ದ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಪೊಲೀಸ್ ಕಸ್ಟಡಿಯನ್ನು ಮಾನ್ಸಾ ನ್ಯಾಯಾಲಯವು ವಿಸ್ತರಿಸಿದೆ. ಪ್ರಕರಣದಲ್ಲಿ ಇಬ್ಬರು ಶೂಟರ್ಗಳು ಸೇರಿದಂತೆ ಮೂವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ, ಘಟನೆಯ ಸಮಯದಲ್ಲಿ ಅವರಲ್ಲಿ ಒಬ್ಬರು ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಬಿಷ್ಣೋಯ್ ನೆಟ್ವರ್ಕ್
ಪೊಲೀಸರ ಪ್ರಕಾರ, ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಪಡೆಯುತ್ತಿದ್ದಾನೆ. "ಲಾರೆನ್ಸ್ ಬಿಷ್ಣೋಯ್ ಪಾಕಿಸ್ತಾನದಲ್ಲಿ ಉತ್ತಮ ನೆಟ್ವರ್ಕ್ ಹೊಂದಿದ್ದಾರೆ. ಇದಲ್ಲದೇ ಪಂಜಾಬ್ನ ಗ್ಯಾಂಗ್ಸ್ಟರ್ ಜಗ್ಗು ಭಗವಾನ್ಪುರಿ ಕೂಡ ಪಾಕಿಸ್ತಾನದಿಂದ ಡ್ರಗ್ಸ್ ಪಡೆಯುತ್ತಿದ್ದನು. ಅವರು ಪಾಕಿಸ್ತಾನದಿಂದ ಆರ್ಡರ್ ಮಾಡಿದ ಕನಿಷ್ಠ 40 ಪಿಸ್ತೂಲ್ಗಳು ಸಿಕ್ಕಿಬಿದ್ದಿವೆ. ಬಿಷ್ಣೋಯ್ ಗ್ಯಾಂಗ್ ಪಾಕಿಸ್ತಾನ, ಮಧ್ಯಪ್ರದೇಶ, ಮುಂಗೇರ್ನಿಂದ ಶಸ್ತ್ರಾಸ್ತ್ರಗಳನ್ನು ಆರ್ಡರ್ ಮಾಡುತ್ತಿದ್ದು, ವಿವಿಧ ಗಡಿಗಳಿಂದ ಪಂಜಾಬ್ಗೆ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಬಿಷ್ಣೋಯ್ನ ಜಾಲವು ಅಮೆರಿಕದಲ್ಲೂ ಕುಳಿತಿದೆ'' ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರದ ಮೇಲೆ ಆರೋಪ
ಮೇ 29 ರಂದು ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ಗಾಯಕ-ರಾಜಕಾರಣಿ ಸಿಧು ಮೂಸೆ ವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಸಿಧು ಮೂಸೆ ವಾಲಾ ಅವರ ಭದ್ರತೆಯನ್ನು ರಾಜ್ಯ ಸರ್ಕಾರ ಮೊಟಕುಗೊಳಿಸಿದ ಒಂದು ದಿನದ ನಂತರ ಸಿಧುಗೆ ಗುಂಡು ಹಾರಿಸಲಾಯಿತು. ಆತನೊಂದಿಗೆ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಆತನ ಸೋದರ ಸಂಬಂಧಿ ಮತ್ತು ಸ್ನೇಹಿತ ಕೂಡ ಹಲ್ಲೆಯಿಂದ ಗಾಯಗೊಂಡಿದ್ದಾರೆ.
ಸಿಧು ಮೂಸೆವಾಲಾ ಅವರಿಗೆ ಮಾನಸ ವಿಧಾನಸಭೆಯಿಂದ ಕಾಂಗ್ರೆಸ್ ಟಿಕೆಟ್ ನೀಡಿತು. ಆದರೆ ಅವರ ಜನಪ್ರಿಯತೆಯು ಆಮ್ ಆದ್ಮಿ ಪಕ್ಷದ ಅಲೆಯಲ್ಲಿ ಕೆಲಸ ಮಾಡಲಿಲ್ಲ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಪಕ್ಷದ ಅಭ್ಯರ್ಥಿ ಡಾ ವಿಜಯ್ ಸಿಂಗ್ಲಾ ಮೂಸೆವಾಲಾ ಅವರನ್ನು 63,323 ಮತಗಳ ಅಂತರದಿಂದ ಸೋಲಿಸಿದರು. ಎನ್ಎಸ್ಯುಐ ರಾಷ್ಟ್ರೀಯ ಕಾರ್ಯದರ್ಶಿ ರೋಷನ್ ಲಾಲ್ ಬಿಟ್ಟು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮುಸೇವಾಲಾ ಹತ್ಯೆಗೆ ಇವರಿಬ್ಬರೇ ಕಾರಣ ಎಂದು ಟ್ವಿಟ್ಟರ್ನಲ್ಲಿ ಆರೋಪಿಸಿದ್ದಾರೆ. ತಮ್ಮ ಭದ್ರತೆಯನ್ನು ಹಿಂಪಡೆದಿರುವ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ.