ಶಾಲಾ ವಾಹನಕ್ಕೆ ಬೆಂಕಿ: ನಾಲ್ವರು ಮಕ್ಕಳು ಸಜೀವ ದಹನ
ಚಂಡೀಘಡ, ಫೆಬ್ರವರಿ 15: ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ನಾಲ್ವರು ಮಕ್ಕಳು ಸಜೀವ ದಹನವಾಗಿರುವ ಘಟನೆ ಪಂಜಾಬ್ ನ ಸಂಗ್ರೂರ್ ಜಿಲ್ಲೆಯ ಲೋಗ್ವಾಲ್ ಎಂಬಲ್ಲಿ ನಡೆದಿದೆ.
ಮಾರುತಿ ವ್ಯಾನೊಂದು ಹನ್ನೆರಡು ಮಂದಿ ಶಾಲಾ ಮಕ್ಕಳನ್ನು ಶಾಲೆಯಿಂದ ವಾಪಸ್ ಮನೆಗೆ ಕರೆದು ತರುತ್ತಿತ್ತು. ಮಾರ್ಗಮಧ್ಯೆ ಏಕಾ-ಏಕಿ ಮಾರುತಿ ವ್ಯಾನಿಗೆ ಬೆಂಕಿ ಹೊತ್ತಿಕೊಂಡಿದೆ.
ಹನ್ನೆರಡು ಮಕ್ಕಳಲ್ಲಿ ಎಂಟು ಮಕ್ಕಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಡ್ರೈವರ್ ಅನ್ನು ಸಹ ರಕ್ಷಿಸಲಾಗಿದೆ. ನಾಲ್ವರು ವಿದ್ಯಾರ್ಥಿಗಳು ಬೆಂಕಿಗೆ ಆಹುತಿಯಾಗಿದ್ದಾರೆ. ವ್ಯಾನ್ನಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳು 10-12 ವರ್ಷ ವಯಸ್ಸಿನವರಾಗಿದ್ದರು.
ವ್ಯಾನಿಗೆ ಬೆಂಕಿ ಬೀಳುತ್ತಿದ್ದಂತೆ ಡ್ರೈವರ್ ಬಾಗಿಲುಗಳನ್ನು ತೆರೆಯಲು ಯತ್ನಿಸಿದ ಆದರೆ ಸಾಧ್ಯವಾಗಲಿಲ್ಲ. ಕೊನೆಗೆ ಸ್ಥಳೀಯರು ಸೇರಿ ವಾಹನದ ಕಿಟಕಿಯ ಮೂಲಕ ಎಂಟು ಮಕ್ಕಳನ್ನು ರಕ್ಷಿಸಿದರು ಆದರೆ ನಾಲ್ಕು ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪಂಜಾಬ್ ನ ಸಿಎಂ ಕ್ಯಾಪ್ಟನ್ ಅಮರೇಂದರ್ ಸಿಂಗ್, ಘಟನೆ ಕುರಿತು ತನಿಖೆ ನಡೆಸಲು ಮ್ಯಾಜಿಸ್ಟ್ರೇಟ್ ಹಂತದ ಸಮಿತಿ ರಚಿಸುವುದಾಗಿ ಹೇಳಿದ್ದಾರೆ. ತಪ್ಪಿತಸ್ತರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದಿದ್ದಾರೆ.