'ಶೌರ್ಯ ಮತ್ತು ಧೈರ್ಯಕ್ಕೆ ಸೆಲ್ಯೂಟ್': ಚಿರತೆ ಹಿಡಿದ ಪೊಲೀಸ್-ಅರಣ್ಯ ಇಲಾಖೆ
ಪಾಣಿಪತ್ ಮೇ 09: ಹರಿಯಾಣದ ಪಾಣಿಪತ್ ಜಿಲ್ಲೆಯ ಬಹರಂಪುರ ಗ್ರಾಮದಲ್ಲಿ ರಾತ್ರಿಯ ಕತ್ತಲೆಯಲ್ಲಿ ಚಿರತೆಯನ್ನು ಹಿಡಿಯಲು ಪೊಲೀಸರು ಮತ್ತು ಅರಣ್ಯ ಇಲಾಖೆ ತಂಡ ಜೀವದ ಹಂಗು ತೊರೆದು ಹೋರಾಡಿದ್ದಾರೆ. ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದ್ದರಿಂದ ಸ್ಥಳೀಯರು ಭಯಭೀತರಾಗಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಹಾಗೂ ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದೆ.
ಈ ವೇಳೆ ಚಿರತೆ ಎಸ್ಎಚ್ಒ ಸೇರಿ ಮೂವರ ಮೇಲೆ ದಾಳಿ ಮಾಡಿದೆ. ಗಾಯಗೊಂಡ ಬಳಿಕವೂ ಧೈರ್ಯ ಕಳೆದುಕೊಳ್ಳದ ತಂಡ, ಕೊನೆಗೂ ಚಿರತೆಯನ್ನು ನಿಯಂತ್ರಿಸಿದೆ. ವಿಡಿಯೋವನ್ನು ಶೇರ್ ಮಾಡಿರುವ ಪಾಣಿಪತ್ ಎಸ್ಪಿ ಶಶಾಂಕ್ ಕುಮಾರ್ ಸಾವನ್, "ಪೊಲೀಸರಿಗೆ ಮತ್ತು ಅರಣ್ಯ ಇಲಾಖೆಯವರಿಗೆ ಧೈರ್ಯಕ್ಕೆ ವಂದನೆಗಳು. ಚಿರತೆ ಸೇರಿದಂತೆ ಎಲ್ಲರೂ ಸುರಕ್ಷಿತವಾಗಿದ್ದಾರೆ" ಎಂದು ಹೇಳಿದ್ದಾರೆ.
ನಡುರಸ್ತೆಯಲ್ಲಿ ಚಿರತೆ ತಿಂದ ಕಾಡುಹಂದಿಗಳು: ಶಾಕಿಂಗ್ ವಿಡಿಯೋ ವೈರಲ್
ಮಾಹಿತಿ ಪ್ರಕಾರ ಬಹರಂಪುರ ಗ್ರಾಮದಲ್ಲಿ ಚಿರತೆ ಓಡಾಡುತ್ತಿರುವುದು ಕಂಡುಬಂದಿದೆ. ಗ್ರಾಮದಲ್ಲಿ ಚಿರತೆ ಇರುವ ಬಗ್ಗೆ ರೈತರೊಬ್ಬರು ಬಾಪೌಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯ ತಂಡ ರಾತ್ರಿಯ ಕತ್ತಲಲ್ಲಿ ಸ್ಥಳಕ್ಕೆ ತಲುಪಿದೆ. ಇದಕ್ಕೂ ಮುನ್ನ ಬಾಪೋಲಿ ಹಾಗೂ ಸನೌಲಿ ಠಾಣೆಯ ಪೊಲೀಸರು ಗ್ರಾಮಸ್ಥರ ನೆರವಿನಿಂದ ಚಿರತೆಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.
ಚಿರತೆ ದಾಳಿಗೆ ಎಸ್ಎಚ್ಒ ಸೇರಿ ಮೂವರಿಗೆ ಗಾಯ
ಚಿರತೆ ಹಿಡಿಯಲು ಪೊಲೀಸರು ಹೊಲದ ಸುತ್ತ ಬಲೆ ಹಾಕಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಎಸ್ಪಿ ಶಶಾಂಕ್ ಕುಮಾರ್ ಸಾವನ್ ಅವರಿಗೆ ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ ಅರಣ್ಯ ಇಲಾಖೆ ತಂಡ ಕೂಡ ಸ್ಥಳಕ್ಕೆ ಆಗಮಿಸಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಚಿರತೆ ತಂಡದ ಮೇಲೆ ದಾಳಿ ಮಾಡಿದೆ. ಈ ದಾಳಿಯಲ್ಲಿ ಸನೌಲಿ ಪೊಲೀಸ್ ಠಾಣೆಯ ಎಸ್ಎಚ್ಒ ಜಗಜಿತ್ ಸಿಂಗ್, ವನ್ಯಜೀವಿ ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್, ಡಾ ಅಶೋಕ ಖಾಸಾ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪ್ರಜ್ಞೆ ತಪ್ಪಿದ ಚಿರತೆ
3 ಮಂದಿ ಗಾಯಗೊಂಡ ಬಳಿಕವೂ ಧೈರ್ಯ ಕಳೆದುಕೊಳ್ಳದ ತಂಡ, ಕೊನೆಗೆ ಪ್ರಜ್ಞೆ ತಪ್ಪಿ ಬಿದ್ದಿದ್ದ ಚಿರತೆಯನ್ನು ಹಿಡಿದು ತನ್ನೊಂದಿಗೆ ಕರೆದುಕೊಂಡು ಹೋಗಿದೆ. ಬಳಿಕ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ರಾತ್ರಿ 11 ಗಂಟೆಗೆ 5 ಗಂಟೆಗಳ ಪರಿಶ್ರಮದ ನಂತರ ಚಿರತೆಯನ್ನು ಹಿಡಿಯಲಾಯಿತು ಎಂದು ಎಸ್ಎಚ್ಒ ಜಗಜಿತ್ ಸಿಂಗ್ ತಿಳಿಸಿದ್ದಾರೆ.