ಅಗ್ನಿ ಸಾಕ್ಷಿಯಾಗಿ ಹೋಟೆಲ್ ರೂಮ್ನಲ್ಲಿ ವಿವಾಹ: ಅಸಿಂಧು ಎಂದು ಜೋಡಿಗೆ ದಂಡ ವಿಧಿಸಿದ ಕೋರ್ಟ್
ಹರಿಯಾಣ, ಅಕ್ಟೋಬರ್ 13: ಪ್ರೇಮಿಗಳು ಮನೆಯಿಂದ ಓಡಿ ಹೋಗಿ ಹೋಟೆಲ್ ರೂಮ್ನಲ್ಲಿ ಪಾತ್ರೆಯಲ್ಲಿ ಬೆಂಕಿ ಹಾಕಿ ತಾವು ಅಗ್ನಿ ಸಾಕ್ಷಿಯಾಗಿ ವಿವಾಹವಾಗಿದ್ದೇವೆ ಎಂದು ನ್ಯಾಯಾಲಯದ ಮುಂದೆ ನಿಂತಿದ್ದಾರೆ. ಆದರೆ, ಯುವ ಜೋಡಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ದಂಡ ವಿಧಿಸಿದ್ದು, ಈ ವಿವಾಹವು ಅಸಿಂಧು ಎಂದು ಹೇಳಿದೆ.
20 ವರ್ಷದ ಯುವತಿ ಹಾಗೂ 19 ವರ್ಷದ ಯುವಕನು ತಮಗೆ ಕುಟುಂಬಸ್ಥರಿಂದ ಬೆದರಿಕೆ ಇದೆ ಎಂದು ಹೇಳಿ, ತಮ್ಮ ರಕ್ಷಣೆಯನ್ನು ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠವು ನ್ಯಾಯಾಲಯದ 'ದಾರಿತಪ್ಪಿಸಿದ' ಆರೋಪದಲ್ಲಿ ಜೋಡಿಗೆ 25,000 ದಂಡ ವಿಧಿಸಿದೆ.
ತನಗೆ ಇಷ್ಟವಿಲ್ಲದೇ ಪ್ರೀತಿಸಿ ಮದುವೆ: ಮಗಳನ್ನೇ ಅಪಹರಿಸಿದ ತಾಯಿ
ಇನ್ನು ಈ ಜೋಡಿಯ ಪ್ರಕಾರ, ಜೋಡಿಯು ಸೆಪ್ಟೆಂಬರ್ 26, 2021 ರಂದು ಮನೆಯನ್ನು ತೊರೆದು ಓಡಿ ಹೋಗಿ ಮದುವೆಯಾಗಿದ್ದಾರೆ. ಆದರೆ ಈ ವಿವಾಹ ಆಗಿರುವ ಯಾವುದೇ ವಿವಾಹ ಪ್ರಮಾಣ ಪತ್ರವಾಗಲಿ ಅಥವಾ ಚಿತ್ರಗಳು ಆಗಲಿ ಈ ಜೋಡಿಯ ಬಳಿ ಇಲ್ಲ. ಇನ್ನು ಮದುವೆ ನಡೆದ ಸ್ಥಳದಲ್ಲಿ ಬೇರೆ ಯಾರೂ ಕೂಡಾ ಸಾಕ್ಷಿಯಾಗಿ ಇರಲಿಲ್ಲ ಎಂದು ಈ ಜೋಡಿಯು ಹೇಳಿಕೊಂಡಿದೆ.
ಈ ಹಿನ್ನೆಲೆಯಿಂದಾಗಿ ಕೋರ್ಟ್ ವಿವಾಹಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹೈಕೋರ್ಟ್ಗೆ ಸಲ್ಲಿಸುವಂತೆ ಈ ಜೋಡಿಗೆ ಸೂಚನೆ ನೀಡಿದೆ. ಹಾಗೆಯೇ ವಕೀಲರು ನೀವು ಮದುವೆಯಾದ ಸಂದರ್ಭದಲ್ಲಿ ಹಾಜರಿದ್ದ ಪುರೋಹಿತರು ನೀಡುವ ದಾಖಲೆಯನ್ನಾದರೂ ನೀಡಿ ಎಂದು ಜೋಡಿಗೆ ಹೇಳಿದ್ದರು. ಹಾಗೆಯೇ ವಿವಾಹ ಪ್ರಮಾಣ ಪತ್ರದ ಬಗ್ಗೆ ಜೋಡಿಗೆ ಮಾಹಿತಿಯನ್ನು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜೋಡಿಯು "ಈ ವಿವಾಹವು ಯಾವುದೇ ಪುರೋಹಿತರ ಸಮ್ಮುಖದಲ್ಲಿ ನಡೆದಿಲ್ಲ. ದೇವಾಲಯದಲ್ಲಿ ನಡೆದಿಲ್ಲ. ಈ ಕಾರಣದಿಂದಾಗಿ ಯಾವುದೇ ವಿವಾಹ ಪ್ರಮಾಣ ಪತ್ರವು ನಮಗೆ ದೊರಕಿಲ್ಲ," ಎಂದು ಹೇಳಿಕೊಂಡಿದೆ.
ಹೈದರಾಬಾದ್: ಅಪ್ರಾಪ್ತೆಯ ಮದುವೆಯಾದ ಸೂಡಾನ್ ಟೆಕ್ಕಿ
ಇನ್ನು ಈ ಜೋಡಿಯ ಪ್ರಕಾರ ಜೋಡಿಯು ಸೆಪ್ಟೆಂಬರ್ 26, 2021 ರಂದು ವಿವಾಹವಾಗಿದ್ದಾರೆ. ಆ ದಿನ ಈ ಜೋಡಿಯು ಹೋಟೆಲ್ನ ರೂಮ್ ಒಂದರಲ್ಲಿ ತಂಗಿದ್ದಾರೆ. ಸಂಜೆಯ ಹೊತ್ತಿಗೆ ಈ ಯುವಕನು, ಯುವತಿಯ ಹಣೆಗೆ ಸಿಂಧೂರ ಹಾಕಿದ್ದಾನೆ. ಬಳಿಕ ಇಬ್ಬರೂ ಕೂಡಾ ಹೂಮಾಲೆಯನ್ನು ಅದಲು ಬದಲು ಮಾಡಿಕೊಂಡಿದ್ದಾರೆ. ರೂಮಿನಲ್ಲಿ ಇದ್ದ ಪಾತ್ರೆಯಲ್ಲಿ ಬೆಂಕಿಯನ್ನು ಹಾಕುವ ಮೂಲಕ ಸಪ್ತಪದಿ ತುಳಿದಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಶ್ಲೋಕವನ್ನು ಹೇಳಲಾಗಿಲ್ಲ.
ಜೋಡಿಯ ಈ ವಿವರಣೆಯನ್ನು ಆಲಿಸಿದ ನ್ಯಾಯಮೂರ್ತಿ ಗುರುವಿಂದರ್ ಸಿಂಗ್ ಗಿಲ್ರನ್ನು ಒಳಗೊಂಡ ನ್ಯಾಯಾಪೀಠವು, ಈ ಪ್ರಕರಣದಲ್ಲಿ ಯುವಕನು ವಿವಾಹ ಆಗುವ ವಯಸ್ಸಿನವನು ಅಲ್ಲ ಎಂಬುವುದನ್ನು ಗುರುತಿಸಿದ್ದಾರೆ. ಭಾರತದಲ್ಲಿ ವಿವಾಹವಾಗಲು ಪುರುಷರಿಗೆ 21 ವಯಸ್ಸಿನ ಮಿತಿಯಾಗಿದೆ. ಆದರೆ ಈ ಯುವಕನಿಗೆ 19 ವರ್ಷವಾಗಿದೆ.
"ಈ ಜೋಡಿಯು ವಿವಾಹವಾಗಿದ್ದೇವೆ ಎಂದು ಹೇಳುವ ಮೂಲಕ ನ್ಯಾಯಾಲಯವನ್ನು ದಾರಿ ತಪ್ಪಿಸಿದೆ. ಆದರೆ ಈ ಜೋಡಿ ವಿವಾಹವಾಗಿರುವ ಬಗ್ಗೆ ಯಾವುದೇ ಸಾಕ್ಷಿಯೂ ಇಲ್ಲ. ಈ ಜೋಡಿಯು ಹೋಟೆಲ್ ರೂಮ್ನಲ್ಲಿ ವಿವಾಹವಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅದು ಕೂಡಾ ಯಾವುದೇ ಶ್ಲೋಕವನ್ನು ಹೇಳದೆಯೇ ವಿವಾಹವಾಗಿದ್ದೇವೆ ಎಂದಿದ್ದಾರೆ," ಎಂದು ನ್ಯಾಯಾಲಯವು ಹೇಳಿದೆ.
"ಈ ಜೋಡಿಯ ಬಳಿ ತಾವು ವಿವಾಹವಾಗಿರುವ ಬಗ್ಗೆ ಯಾವುದೇ ದಾಖಲೆಗಳು ಇಲ್ಲ. ಅದನ್ನು ತಾವಾಗಿಯೇ ಹೇಳಿಕೊಂಡಿದ್ದಾರೆ. ಆದರೆ ಕೋರ್ಟ್ನ ದಾರಿ ತಪ್ಪಿಸುವುದು ಸರಿಯಲ್ಲ. ಈ ಜೋಡಿಗೆ ರಕ್ಷಣೆ ಇಲ್ಲ, ಜೀವಕ್ಕೆ ಅಪಾಯ ಇದೆ ಎಂದಾದರೆ ಈ ಬಗ್ಗೆ ಕೋರ್ಟ್ ಯಾವುದೇ ಕಡೆಗಣನೆ ಮಾಡುವುದಿಲ್ಲ. ಆದ್ದರಿಂದ ಈ ಬಗ್ಗೆ ಪಂಚಕುಲದ ಪೊಲೀಸ್ ಆಯುಕ್ತರು ಪರಿಶೀಲನೆ ನಡೆಸಲು ಹಾಗೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗುವುದು," ಎಂದು ನ್ಯಾಯಮೂರ್ತಿ ಗುರುವಿಂದರ್ ಸಿಂಗ್ ಗಿಲ್ ತಿಳಿಸಿದ್ದಾರೆ.
ಆದರೆ ಬಳಿಕ ನ್ಯಾಯಪೀಠವು ಜೋಡಿಗೆ ದಂಡ ವಿಧಿಸಿದೆ. "ಈ ನ್ಯಾಯಾಲಯಕ್ಕೆ ಸರಿಯಾದ ಮಾಹಿತಿಯನ್ನು ಈ ಜೋಡಿಯು ನೀಡಿಲ್ಲ, ನ್ಯಾಯಾಲಯವನ್ನು ತಪ್ಪುದಾರಿಗೆಳೆಯುವ ಪ್ರಯತ್ನ ಮಾಡಿದ್ದಾರೆ, ಹಾಗಾಗಿ 25000 ರೂ. ದಂಡ ವಿಧಿಸಲಾಗುವುದು," ಎಂದಿದೆ.
(ಒನ್ಇಂಡಿಯಾ ಸುದ್ದಿ)