ಸೇಡಿಗಾಗಿ ಬಹುಮಾನ: ಸಿಧು ಮೂಸೆವಾಲಾ ಹಂತಕರ ಸುಳಿವು ನೀಡಿದರೆ 5 ಲಕ್ಷ!
ಚಂಡೀಘರ್, ಜೂನ್ 2: ಪಂಜಾಬಿ ಗಾಯಕ ಮತ್ತು ರಾಜಕಾರಣಿ ಸಿಧು ಮೂಸೆವಾಲಾ ಹತ್ಯೆಯ ಹಂತಕರ ಸುಳಿವು ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ.
ಪಂಜಾಬಿನಲ್ಲಿ ಸಿಧು ಮೂಸೆವಾಲಾ ಹತ್ಯೆ ಪ್ರಕರಣವು ಭಯದ ವಾತಾವರಣವನ್ನು ಸೃಷ್ಟಿಸಿರುವುದರ ಮಧ್ಯೆ ಮತ್ತೊಂದು ಗ್ಯಾಂಗ್ ಘರ್ಷಣೆಯಲ್ಲಿ ತೊಡಗಿದೆ. ಗಾಯಕ ಸಿಧು ಸಾವಿನ ಬಗ್ಗೆ ದೇವಿಂದರ್ ಬಾಂಬಿಹಾ ಗ್ಯಾಂಗ್ ಆಕ್ರೋಶ ವ್ಯಕ್ತಪಡಿಸಿದ್ದು, ದರೋಡೆಕೋರ ಭೂಪಿ ರಾಣಾ ಕೂಡ ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾನೆ.
Breaking: ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆಯ ಮೊದಲ ಆರೋಪಿ ಬಂಧನ
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಸೇಡು ತೀರಿಸಿಕೊಳ್ಳುವುದಾಗಿ ಶಪಥ ಮಾಡುವ ಮೂಲಕ ಜೈಲಿನಲ್ಲಿರುವ ಹರ್ಯಾಣ ದರೋಡೆಕೋರ ಭೂಪೇಂದರ್ ಸಿಂಗ್ ಅಲಿಯಾಸ್ ಭೂಪಿ ರಾಣಾ, ಹಂತಕರ ಸುಳಿವು ನೀಡಿದವರಿಗೆ 5 ಲಕ್ಷ ರೂಪಾಯಿ ನೀಡುವುದಾಗಿ ಹೇಳಿಕೊಂಡಿದ್ದಾರೆ.
ಹಂತಕರ ಸುಳಿವು ನೀಡಿದವರಿಗೆ ಬಹುಮಾನದ ಉಡುಗೊರೆ
ಪಂಜಾಬಿನಲ್ಲಿ ಸಿಧು ಮೂಸೆವಾಲಾ ಎಂದು ಜನಪ್ರಿಯವಾಗಿರುವ ಗಾಯಕ ಶುಭದೀಪ್ ಸಿಂಗ್ ಸಿಧು ಹತ್ಯೆಗೆ ಸೇಡು ತೀರಿಸಿಕೊಳ್ಳುವುದಾಗಿ ಹೇಳಿರುವ ಭೂಪಿಂದರ್ ರಾಣಾ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದಾರೆ. ಸಿಧು ಹಂತಕರ ಕುರಿತು ಯಾವುದೇ ರೀತಿ ಮಾಹಿತಿಯನ್ನು ನೀಡಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ ಎಂದು ವರದಿಯಾಗಿದೆ.
ಈ ವರದಿಗಳ ಪ್ರಕಾರ, ಭೂಪಿಂದರ್ ರಾಣಾ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ, "ನಾವು ಸಿಧು ಮೂಸೆವಾಲಾ ಜೊತೆ ಯಾವುದೇ ಸಂಬಂಧವನ್ನು ಹೊಂದಿರಲಿಲ್ಲ. ಆದರೆ ಈಗ ಆತನನ್ನು ಕೊಂದ ನಂತರದಲ್ಲಿ ನನ್ನ ಸಹೋದರ ಎಂದು ಕರೆದಿದ್ದಾರೆ, ಈಗ ನಮ್ಮ ಜವಾಬ್ದಾರಿ ನಮಗೆ ತಿಳಿದಿದೆ." ಎಂದು ಬರೆದುಕೊಂಡಿದ್ದಾರೆ.
5 ಲಕ್ಷ ರೂಪಾಯಿ ಬಹುಮಾನದ ಕುರಿತು ಪೋಸ್ಟ್
"ಸಿಧು ಮೂಸೆವಾಲಾ ಹಂತಕರ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ, ಅವರು ಕೆನಡಾ ಅಥವಾ ಅಮೆರಿಕದಲ್ಲಿದ್ದರೂ ಪರವಾಗಿಲ್ಲ ನಮಗೆ ತಿಳಿಸಿ ಎಂದು ಎಲ್ಲರಲ್ಲೂ ವಿನಂತಿಸಿಕೊಳ್ಳುತ್ತೇನೆ. ಈ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು. ಅದರ ಜೊತೆಗೆ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ರಾಣಾ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಜೈಲಿನಲ್ಲಿದ್ದು ಸಾಮಾಜಿಕ ಜಾಲತಾಣ ಬಳಸಿದ್ದು ಹೇಗೆ?
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪೋಸ್ಟ್ಗಳ ಬಗ್ಗೆ ಇನ್ನೂ ಪರಿಶೀಲಿಸಲಾಗಿಲ್ಲ. ಪಂಜಾಬ್ ಪೊಲೀಸರು ಜೈಲಿನಲ್ಲಿರುವ ದರೋಡೆಕೋರರು ಸಾಮಾಜಿಕ ಜಾಲತಾಣವನ್ನು ಬಳಸಿದ್ದು ಹೇಗೆ ಎಂಬುದರ ಬಗ್ಗೆ ತನಿಖೆ ಶುರು ಮಾಡಿದ್ದಾರೆ. ಬುಧವಾರ ರಾತ್ರಿ ಅಪ್ಲೋಡ್ ಮಾಡಿದ ಮತ್ತೊಂದು ಪೋಸ್ಟ್ನಲ್ಲಿ ಭೂಪಿಂದರ್ ರಾಣಾ ಹೆಸರಿನಲ್ಲಿ, "ನಾವು ಮೂಸ್ ವಾಲಾವನ್ನು ಮರಳಿ ತರಲು ಸಾಧ್ಯವಿಲ್ಲ, ಆದರೆ ನಾವು ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಬಹುದು" ಎಂದು ಬರೆದಿದ್ದಾರೆ.
ಸಿಧು ಮೂಸೆವಾಲಾ ಕಾರಿನ ಮೇಲೆ ಗುಂಡಿನ ದಾಳಿ
ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ಮೇ 29ರ ಭಾನುವಾರ ಸಿಧು ಮೂಸೆವಾಲಾ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದರು. ಈ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು. ಮೇ 31ರಂದು ಪಂಜಾಬಿನ ಮಾನ್ಸಾ ಜಿಲ್ಲೆಯ ಸಿಧು ಮೂಸೆವಾಲಾ ಸ್ವಗ್ರಾಮ ಮೂಸಾದಲ್ಲಿರುವ ಕೃಷಿ ಭೂಮಿಯಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು.