18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಮಹಿಳೆಗೆ 1000 ರೂ: ಕೇಜ್ರಿವಾಲ್ ಘೋಷಣೆ
ಚಂಡೀಗಢ, ನವೆಂಬರ್ 22: ಪಂಜಾಬ್ನಲ್ಲಿ ತಮ್ಮ ಸರ್ಕಾರ ರಚನೆಯಾದರೆ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಮಹಿಳೆಗೆ ಪ್ರತಿ ತಿಂಗಳು 1000 ರೂಪಾಯಿ ನೀಡಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಮಹತ್ವದ ಘೋಷಣೆ ಮಾಡಿದ್ದಾರೆ.
ಪಂಜಾಬ್ನ ಮೋಗಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಅವರು, ಪಂಜಾಬ್ನಲ್ಲಿ ನಮ್ಮ ಸರ್ಕಾರ ರಚನೆಯಾದರೆ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಮಹಿಳೆಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ನೀಡುತ್ತೇವೆ ಎಂದು ಹೇಳಿದ್ದಾರೆ. ಒಂದು ಮನೆಯಲ್ಲಿ ಮೂವರು ಮಹಿಳೆಯರಿದ್ದರೆ ಪ್ರತಿಯೊಬ್ಬರಿಗೂ 1000 ರೂ. ನೀಡಲಾಗುತ್ತದೆ. ಇದು ವಿಶ್ವದಲ್ಲೇ ಮಹಿಳಾ ಸಬಲೀಕರಣದ ಅತಿ ದೊಡ್ಡ ಕಾರ್ಯಕ್ರಮವಾಗಲಿದೆ ಎಂದು ಹೇಳಿದ್ದಾರೆ.
ಇದಲ್ಲದೇ ವೃದ್ಧಾಪ್ಯ ವೇತನ ಪಡೆಯುತ್ತಿರುವ ಮಹಿಳೆಯರಿಗೆ ಪಿಂಚಣಿಯನ್ನು ಮುಂದುವರಿಸಲಾಗುವುದು, ಇದರ ಜೊತೆಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಕೂಡ ಬರಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ನಕಲಿ ಕೇಜ್ರಿವಾಲ್ ಬಗ್ಗೆ ಎಚ್ಚರದಿಂದಿರಿ ಎಂದು ಪಂಜಾಬ್ ಮುಖ್ಯಮಂತ್ರಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ಪಂಜಾಬ್ ನಲ್ಲಿ ನಕಲಿ ಕೇಜ್ರಿವಾಲ್ ಓಡಾಡುತ್ತಿದ್ದಾರೆ. ನಾನು ಭರವಸೆ ನೀಡಿದ್ದನ್ನು ಪುನರಾವರ್ತಿಸುತ್ತಿದ್ದಾರೆ. ಇಡೀ ದೇಶದಲ್ಲಿ ಒಬ್ಬ ವ್ಯಕ್ತಿ (ಅರವಿಂದ ಕೇಜ್ರಿವಾಲ್) ಮಾತ್ರ ನಿಮ್ಮ ವಿದ್ಯುತ್ ಬಿಲ್ ಅನ್ನು ಶೂನ್ಯಕ್ಕೆ ತರಬಹುದು. ಇದರ ಬಗ್ಗೆ ಸಿಎಂ ಚನ್ನಿ ಎಚ್ಚರಿಕೆ ವಹಿಸಬೇಕು ಎಂದರು. ಈ ಬಾರಿ ಪಂಜಾಬ್ನಲ್ಲಿ ಯಾರಿಗೆ ಮತ ಹಾಕಬೇಕೆಂದು ಮನೆಯೊಳಗಿನ ಮಹಿಳೆಯರು ನಿರ್ಧರಿಸುತ್ತಾರೆ ಎಂದು ಅವರು ಹೇಳಿದ್ದಾರೆ.
If we form govt in Punjab in 2022, then we will give every woman of the state, who is above 18 years of age, Rs 1000 per month. If a family has 3 female members then each will get Rs 1000. This'll be the world's biggest women empowerment program: Delhi CM Arvind Kejriwal in Moga pic.twitter.com/7hAwC4achY
— ANI (@ANI) November 22, 2021
ಮೊಗಾದಲ್ಲಿ ತಮ್ಮ ಭಾಷಣದಲ್ಲಿ ಕೇಜ್ರಿವಾಲ್ ಅವರು ಕಾಲೇಜಿಗೆ ಹೋಗುವುದರಿಂದ ವಂಚಿತರಾದ ಹೆಣ್ಣುಮಕ್ಕಳಿಗೆ 1000 ರೂಪಾಯಿಗಳನ್ನು ನೀಡಲಾಗುತ್ತದೆ ನಂತರ ಅವರು ಕಾಲೇಜಿಗೆ ಹೋಗಬಹುದು ಎಂದು ಹೇಳಿದರು. ಮಹಿಳೆಯರು ಹಣಕ್ಕಾಗಿ ಗಂಡನ ಕಡೆಗೆ ನೋಡುವ ಅಗತ್ಯವಿಲ್ಲ. ಈ ಯೋಜನೆಯು ಪಂಜಾಬ್ನ ಮಹಿಳೆಯರಿಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ ಎಂದು ಅವರು ಹೇಳಿದರು. ನವೆಂಬರ್ 23 ಮಂಗಳವಾರ ಅಮೃತಸರದಲ್ಲಿ ಕೇಜ್ರಿವಾಲ್ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಹಿಂದೆ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಸರ್ಕಾರವು ಕೃಷಿ ಕ್ಷೇತ್ರಕ್ಕೆ ಉಚಿತ ವಿದ್ಯುತ್ ಮತ್ತು ನೀರಿನ ಪೂರೈಕೆಯನ್ನು ಮುಂದುವರಿಸುತ್ತದೆ ಮತ್ತು ಅದನ್ನು ಬಡವರಿಗೂ ವಿಸ್ತರಿಸುತ್ತದೆ ಎಂದು ಹೇಳಿದ್ದರು. ಜೊತೆಗೆ ಅವರ ಕಳೆದ ಐದು ವರ್ಷಗಳ ಬಾಕಿ ನೀರು ಮತ್ತು ವಿದ್ಯುತ್ ಬಿಲ್ಗಳನ್ನು ಮನ್ನಾ ಮಾಡಲಾಗುತ್ತದೆ ಎಂದು ಹೇಳಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪ್ರಮುಖ ನಾಯಕರಾಗಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸೆಪ್ಟೆಂಬರ್ 18ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ಸೇರಿ, ಸಿಎಂ ಆಗಿ ಚರಣ್ಜಿತ್ ಸಿಂಗ್ ಚನ್ನಿ ಅವರನ್ನು ಆಯ್ಕೆ ಮಾಡಿದ್ದಾರೆ.
ಪ್ರಸ್ತುತ ರಾಷ್ಟ್ರ ರಾಜಧಾನಿಯಲ್ಲಿ ಗಾಳಿ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಮತ್ತೊಮ್ಮೆ ಶಿಸ್ತುಕ್ರಮಗಳನ್ನು ಜಾರಿಗೊಳಿಸಲು ಪ್ರಾರಂಭಿಸಿದೆ. ನವೆಂಬರ್ 26ರವರೆಗೂ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವುದಕ್ಕೆ ಸೂಚಿಸಲಾಗಿದೆ. ನವದೆಹಲಿಗೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿದಂತೆ ಇತರೆ ಸರಕುಗಳನ್ನು ಹೊತ್ತು ಬರುವ ಎಲ್ಲಾ ಟ್ರಕ್ ಸಂಚಾರಕ್ಕೆ ನಿರ್ಬಂಧವನ್ನು ವಿಸ್ತರಿಸಲಾಗಿದೆ. "ಅಗತ್ಯ ಸೇವೆಗಳಲ್ಲಿ ತೊಡಗಿರುವವರನ್ನು ಹೊರತುಪಡಿಸಿ ಸರ್ಕಾರಿ ಕಚೇರಿಗಳು 26 ನವೆಂಬರ್ 2021ರವರೆಗೆ ಬಂದ್ ಆಗಿರುತ್ತವೆ. ಖಾಸಗಿ ಕಚೇರಿಗಳು ತಮ್ಮ ಸಿಬ್ಬಂದಿಗೆ 26 ನವೆಂಬರ್ 2021ರವರೆಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತೆ ಸೂಚಿಸಲಾಗಿದೆ," ಎಂದು ಕೇಜ್ರಿವಾಲ್ ಸರ್ಕಾರದ ಆದೇಶದಲ್ಲಿ ತಿಳಿಸಿದೆ.