ಹರ್ಯಾಣ ಉಪ ಚುನಾವಣೆ: ಕಾಂಗ್ರೆಸ್ಸಿನಿಂದ ರಣದೀಪ್ ಸುರ್ಜೇವಾಲ ಕಣಕ್ಕೆ
ನವದೆಹಲಿ, ಜನವರಿ 10 : ಹರ್ಯಾಣದ ಜಿಂದ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ತನ್ನ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಪ್ರಕಟಿಸಿವೆ.
ಜನವರಿ 28ರಂದು ಉಪ ಚುನಾವಣೆ ನಡೆಯಲಿದ್ದು, ಜನವರಿ 31ರಂದು ಫಲಿತಾಂಶ ಹೊರ ಬರಲಿದೆ.ಕಾಂಗ್ರೆಸ್ಸಿನಿಂದ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೇವಾಲ ಅವರನ್ನು ಕಣಕ್ಕಿಳಿಸಲಾಗಿದೆ.
ಬಿಜೆಪಿಯಿಂದ ದಿವಂಗತ ಶಾಸಕ ಹರಿ ಚಂದ್ ಮಿಡ್ಡಾ ಅವರ ಪುತ್ರ ಕೃಷ್ಣನ್ ಮಿಡ್ಡಾ ಅವರು ಸ್ಪರ್ಧಿಸಲಿದ್ದಾರೆ. ಇಂಡಿಯನ್ ನ್ಯಾಷನಲ್ ಲೋಕ್ ದಳ್ (ಐಎನ್ ಎಲ್ ಡಿ)ದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಹರಿಚಂದ್ ಅವರು ಆಗಸ್ಟ್ ತಿಂಗಳಿನಲ್ಲಿ ನಿಧನರಾದ ಹಿನ್ನಲೆಯಲ್ಲಿ ಉಪ ಚುನಾವಣೆ ನಡೆಸಲಾಗುತ್ತಿದೆ.
ಹರ್ಯಾಣದ ಕೈಥಾಲ್ ಕ್ಷೇತ್ರದ ಹಾಲಿ ಶಾಸಕರಾಗಿರುವ ಸುರ್ಜೇವಾಲ ಅವರನ್ನು ಜಿಂದ್ ನಿಂದ ಸ್ಪರ್ಧಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ.
ಈ ಕ್ಷೇತ್ರದಲ್ಲಿ ಕೃಷ್ಣನ್ ಅವರ ತಂದೆ ಎರಡು ಬಾರಿ ಶಾಸಕರಾಗಿದ್ದರು. ಆದರೆ, ಈ ಬಾರಿ ಲೋಕದಳ್ ಬಿಟ್ಟು ಬಿಜೆಪಿಯಿಂದ ಅವರು ಸ್ಪರ್ಧಿಸುತ್ತಿದ್ದಾರೆ. ಇದು ಕ್ಷೇತ್ರದ ಜನತೆ ಮಾಡಿರುವ ದ್ರೋಹ. ನಾವು ನಮ್ಮ ಅಭ್ಯರ್ಥಿಯನ್ನು ಗುರುವಾರ(ಜನವರಿ 10) ಘೋಷಿಸುತ್ತೇವೆ, 25000 ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇವೆ ಎಂದು ವಿಪಕ್ಷ ನಾಯಕ, ಐಎನ್ ಎಲ್ ಡಿ ಮುಖಂಡ ಅಭಯ್ ಸಿಂಗ್ ಚೌಟಾಲ ಪ್ರತಿಕ್ರಿಯಿಸಿದ್ದಾರೆ.