ಕಲ್ಲಿದ್ದಲು ಬಿಕ್ಕಟ್ಟು: ಪಂಜಾಬ್ನಲ್ಲಿ ದಿನಕ್ಕೆ 4 ರಿಂದ 7 ತಾಸು ಪವರ್ ಕಟ್!
ಚಂಡೀಗಢ, ಅಕ್ಟೋಬರ್ 13: ಕಲ್ಲಿದ್ದಲು ಬಿಕ್ಕಟ್ಟಿನಿಂದ ವಿದ್ಯುತ್ ಪೂರೈಕೆಯಿಲ್ಲ ತೀವ್ರ ಸಂಕಷ್ಟಕ್ಕೆ ಸಿಲುಕಿದ ಉತ್ತರ ಭಾರತದ ಹಲವು ರಾಜ್ಯಗಳ ಪೈಕಿ ಪಂಜಾಬ್ ಹೆಚ್ಚು ಹಾನಿ ಅನುಭವಿಸುತ್ತಿದೆ. ಕಳೆದ ಅಕ್ಟೋಬರ್ 11ರ ಸೋಮವಾರ ರಾಜ್ಯದಲ್ಲಿ 2,300 ಮೆಗಾವ್ಯಾಟ್ ಕೊರತೆಯಿದ್ದು, ವಿದ್ಯುತ್ ಕಡಿತಗೊಳಿಸಲಾಗಿತ್ತು. ಸೋಮವಾರದಂತೆಯೇ, ಮಂಗಳವಾರವೂ ರಾಜ್ಯಾದ್ಯಂತ 4 ರಿಂದ 7 ತಾಸುಗಳವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಉತ್ತರ ಪ್ರಾದೇಶಿಕ ಲೋಡ್ ರವಾನೆ ಕೇಂದ್ರ (NRLDC) ಬಿಡುಗಡೆ ಮಾಡಿದ ವರದಿಯ ಪ್ರಕಾರ, ಪಂಜಾಬ್ನಲ್ಲಿ 11,046 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯ ಇರುವ ಪ್ರದೇಶಗಳಲ್ಲಿ ಗ್ರಾಹಕರಿಗೆ ಕೇವಲ 8,751 ಮೆಗಾವ್ಯಾಟ್ ವಿದ್ಯುತ್ ಸರಬರಾಜು ಮಾಡುವುದಕ್ಕೆ ಮಾತ್ರ ಸಾಧ್ಯವಾಗುತ್ತಿದೆ. ಬಾಕಿ ಉಳಿದ 2,295 ಮೆಗಾವ್ಯಾಟ್ ಕೊರತೆಯನ್ನು ವಿದ್ಯುತ್ ಕಡಿತವಾಗಿ ಪರಿವರ್ತನೆ ಮಾಡಲಾಗುತ್ತಿದೆ.
ಕಲ್ಲಿದ್ದಲು ಬಿಕ್ಕಟ್ಟು: ಮಹಾರಾಷ್ಟ್ರದಲ್ಲಿ 4,000 ಮೆಗಾ ವ್ಯಾಟ್ ವಿದ್ಯುತ್ ಕೊರತೆ
ಪಂಜಾಬ್ ನೆರೆಯ ರಾಜ್ಯವಾಗಿರುವ ಹರಿಯಾಣದಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ 8,382 ಮೆಗಾವ್ಯಾಟ್ ಇದ್ದು 8,319 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದ್ದು, ಕೇವಲ 63 ಮೆಗಾವಾಟ್ ವಿದ್ಯುತ್ ಕೊರತೆ ಕಂಡು ಬಂದಿದೆ. ರಾಜಸ್ಥಾನದ ಗರಿಷ್ಠ ಬೇಡಿಕೆ 12,534 ಮೆಗಾವ್ಯಾಟ್ ಆಗಿದ್ದು, 12,262 ಮೆಗಾವ್ಯಾಟ್ ಬೇಡಿಕೆಯನ್ನು ಪೂರೈಸಲಾಗುತ್ತಿದೆ. 272 ಮೆಗಾವ್ಯಾಟ್ ಕೊರತೆ ಎದುರಿಸಲಾಗುತ್ತಿದೆ.
ಯುಪಿ, ದೆಹಲಿ, ಉತ್ತರಾಖಂಡ್ ಪರಿಸ್ಥಿತಿ?
ಉತ್ತರ ಪ್ರಾದೇಶಿಕ ಲೋಡ್ ರವಾನೆ ಕೇಂದ್ರ (NRLDC) ಪ್ರಕಾರ, ಅಕ್ಟೋಬರ್ 11ರಂದು ನವದೆಹಲಿಯಲ್ಲಿ ವಿದ್ಯುತ್ ಪೂರೈಕೆ ಕೊರತೆ ಶೂನ್ಯವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಅಗತ್ಯವಿರುವ 4,683 ಮೆಗಾವ್ಯಾಟ್ ವಿದ್ಯುತ್ ಅನ್ನು ಪೂರೈಕೆ ಮಾಡಲಾಗುತ್ತಿದೆ. ಆದರೆ ಉತ್ತರ ಪ್ರದೇಶದಲ್ಲಿ 19,843 ಮೆಗಾವ್ಯಾಟ್ ವಿದ್ಯುತ್ ಪೂರೈಸುವ ಬೇಡಿಕೆಯಿದ್ದು, ಈ ಪೈಕಿ ರಾಜ್ಯವು 18,973 ಮೆಗಾವ್ಯಾಟ್ ಅನ್ನು ಮಾತ್ರ ಪೂರೈಸುತ್ತಿದ್ದು, 870 ಮೆಗಾವ್ಯಾಟ್ ಕೊರತೆಯನ್ನು ಎದುರಿಸುತ್ತಿದೆ.
ಉತ್ತರಾಖಂಡವು 2,052 ಮೆಗಾವ್ಯಾಟ್ ಗರಿಷ್ಠ ಬೇಡಿಕೆಯನ್ನು ಹೊಂದಿದ್ದು, 1,862 ಮೆಗಾವ್ಯಾಟ್ ಅನ್ನು ಪೂರೈಸುವುದಕ್ಕಷ್ಟೇ ಶಕ್ತವಾಗಿದೆ. ಹಿಮಾಚಲ ಪ್ರದೇಶಕ್ಕೆ 1551 ಮೆಗಾವ್ಯಾಟ್ ಬೇಡಿಕೆಯನ್ನು ಪೂರೈಸಿದ್ದರಿಂದ ಯಾವುದೇ ಕೊರತೆಯಿಲ್ಲ, ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 200 ಮೆಗಾವ್ಯಾಟ್ ವಿದ್ಯುತ್ ಕೊರತೆ ಎದುರಿಸಲಾಗುತ್ತಿದೆ.
ಪಂಜಾಬ್ನಲ್ಲಿ ಪರಿಸ್ಥಿತಿ ಮತ್ತಷ್ಟು ಕಠಿಣಗೊಳ್ಳುವ ಸಾಧ್ಯತೆ
ಪಂಜಾಬ್ ತನ್ನ ಸರ್ಕಾರಿ ಸ್ವಾಮ್ಯದ ಹಾಗೂ ಖಾಸಗಿ ಥರ್ಮಲ್ಗಳಲ್ಲಿ ಪ್ರತಿದಿನವೂ ಕಲ್ಲಿದ್ದಲನ್ನು ಪಡೆಯುತ್ತಿದೆ. ಅದಾಗ್ಯೂ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಕಠಿಣಗೊಳ್ಳುವ ಅಪಾಯವಿದೆ ಎಂದು ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಪಿಎಸ್ಪಿಸಿಎಲ್) ನ ಸಿಎಂಡಿ, ವೇಣುಪ್ರಸಾದ್ ಹೇಳಿದ್ದಾರೆ.
ಪಂಜಾಬ್ ಪರಿಸ್ಥಿತಿಗೆ ದಾಸ್ತಾನು ಸಂಗ್ರಹಿಸದಿರುವುದೇ ಕಾರಣ
"ಪಂಜಾಬ್ ರಾಜ್ಯ ವಿದ್ಯುತ್ ಮಂಡಳಿ ಎಲ್ಲಾ ಸರ್ಕಾರಿ ಸ್ವಾಮ್ಯದ ಥರ್ಮಲ್ಗಳನ್ನು ನಡೆಸುತ್ತಿದ್ದ ಸಂದರ್ಭದಲ್ಲಿ 30-40 ದಿನಗಳವರೆಗೆ ಕಲ್ಲಿದ್ದಲು ದಾಸ್ತಾನುಗಳನ್ನು ಯಾವಾಗಲೂ ಸಂಗ್ರಹಿಸಿ ಇಡಲಾಗುತ್ತಿತ್ತು. ಪಂಜಾಬ್ ಕಲ್ಲಿದ್ದಲು ಗಣಿಗಳಿಂದ ದೂರವಿದೆ ಮತ್ತು ಆದ್ದರಿಂದ ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು, ನಾವು ಯಾವಾಗಲೂ ಒಂದು ತಿಂಗಳ ದಾಸ್ತಾನು ನಮ್ಮೊಂದಿಗೆ ಇಟ್ಟುಕೊಳ್ಳುತ್ತಿದ್ದೆವು. ಪಂಜಾಬ್ ಆ ಸ್ಟಾಕ್ ಅನ್ನು ಇಟ್ಟುಕೊಂಡಿದ್ದರೆ, ನಾವು ಮೇಲ್ಪಂಕ್ತಿಯಲ್ಲಿರುತ್ತಿದ್ದೆವು ಮತ್ತು ಖರೀದಿಸುವ ಬದಲು ಪ್ರೀಮಿಯಂ ದರದಲ್ಲಿ ವಿದ್ಯುತ್ ಮಾರಾಟ ಮಾಡಬಹುದಿತ್ತು," ಎಂದು ಪಂಜಾಬ್ ರಾಜ್ಯ ವಿದ್ಯುತ್ ಮಂಡಳಿ (ಪಿಎಸ್ಇಬಿ) ಎಂಜಿನಿಯರ್ಗಳ ಸಂಘದ ಪ್ರಧಾನ ಕಾರ್ಯದರ್ಶಿ ಅಜಯ್ಪಾಲ್ ಸಿಂಗ್ ಅತ್ವಾಲ್ ಹೇಳಿದ್ದಾರೆ.
ವಿದ್ಯುತ್ ಖರೀದಿಗೆ ಎರಡು ಪಟ್ಟು ಹಣ
ಕಲ್ಲಿದ್ದಲು ದಾಸ್ತಾನು ವೆಚ್ಚವು 100-150 ಕೋಟಿ ರೂಪಾಯಿ ಆಗಿರಬಹುದು ಎಂದು ಮೂಲಗಳು ತಿಳಿಸಿವೆ. ಕಳೆದ ಕೆಲವು ದಿನಗಳಲ್ಲಿ PSPCL ಯುನಿಟ್ ಗೆ 17 ರೂ.ಗಳಷ್ಟು ದುಬಾರಿ ದರಗಳಲ್ಲಿ ದುಪ್ಪಟ್ಟು ಮೊತ್ತಕ್ಕೆ ವಿದ್ಯುತ್ ಖರೀದಿಸಿದೆ. ಪಿಎಸ್ಪಿಸಿಎಲ್ ಮೂಲಗಳನ್ನು ಸೇರಿಸಿದಾಗ ಖಾಸಗಿ ಥರ್ಮಲ್ಗಳಿಗೆ ಒಂದು ತಿಂಗಳ ಕಲ್ಲಿದ್ದಲು ದಾಸ್ತಾನು ಇರಿಸಲು ಏಕೆ ಆದೇಶಿಸಲಿಲ್ಲ ಎಂಬುದು ಆಶ್ಚರ್ಯಕರವಾಗಿದೆ. ಮಂಗಳವಾರ ಕೂಡ ರೈತರು ಕಳಪೆ ವಿದ್ಯುತ್ ಪೂರೈಕೆಯ ಬಗ್ಗೆ ದೂರು ನೀಡಿದರು ಮತ್ತು ಅವರು ಪಂಜಾಬ್ನ ವಿವಿಧ ಜಿಲ್ಲೆಗಳ ಪಿಎಸ್ಪಿಸಿಎಲ್ ಮುಖ್ಯ ಎಂಜಿನಿಯರ್ಗಳಿಗೆ ಮನವಿ ಸಲ್ಲಿಸಿದ್ದಾರೆ.
ವಿದ್ಯುತ್ ಉತ್ಪಾದನೆ ಹೆಚ್ಚಿಸುವಂತೆ ಭರವಸೆ
ಕೇಂದ್ರ ಸರ್ಕಾರವು ದುರ್ಗಾ ಪೂಜೆ ವೇಳೆಗೆ ವಿದ್ಯುತ್ ಉತ್ಪಾದನಾ ಘಟಕಗಳಿಗೆ ದಿನಕ್ಕೆ 1.55 ರಿಂದ 1.60 ದಶಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಪೂರೈಕೆ ಮಾಡಬೇಕು. ಅಕ್ಟೋಬರ್ 20ರ ನಂತರ ಈ ಪ್ರಮಾಣವನ್ನು 1.70 ದಶಲಕ್ಷ ಮೆಟ್ರಿಕ್ ಟನ್ ಗೆ ಹೆಚ್ಚಿಸಬೇಕು ಎಂದು ಕೋಲ್ ಇಂಡಿಯಾ ಲಿಮಿಡೆಟ್ ಕಂಪನಿಗೆ ಕೇಂದ್ರ ಸರ್ಕಾರ ತಿಳಿಸಿದೆ. ವಿದ್ಯುತ್ ಉತ್ಪಾದಿಸುವ ಸ್ಥಾವರಗಳ ಬೇಡಿಕೆಯನ್ನು ಪೂರೈಸಲು ದೇಶದಲ್ಲಿ ಸಾಕಷ್ಟು ಇಂಧನ ಲಭ್ಯವಿರುವುದಾಗಿ ಕಲ್ಲಿದ್ದಲು ಸಚಿವಾಲಯವು ಭಾನುವಾರ ಭರವಸೆ ನೀಡಿದೆ. ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಅಡ್ಡಿ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದೆ.