ಉಗ್ರರ ವಿರುದ್ಧ ಕಾದಾಡಿದ್ದ ಶೌರ್ಯ ಚಕ್ರ ಪ್ರಶಸ್ತಿ ವಿಜೇತ ಬಲ್ವಿಂದರ್ ಸಿಂಗ್ ಹತ್ಯೆ
ಚಂಡೀಗಡ, ಅಕ್ಟೋಬರ್ 17: ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಹಲವು ವರ್ಷ ಭಾಗಿಯಾಗಿದ್ದ, ಶೌರ್ಯ ಚಕ್ರ ಪ್ರಶಸ್ತಿ ವಿಜೇತ ಬಲ್ವಿಂದರ್ ಸಿಂಗ್ ಅವರನ್ನು ಇಬ್ಬರು ಅಪರಿಚಿತ ದುಷ್ಕರ್ಮಿಗಳು ಪಂಜಾಬ್ನ ತರ್ನ್ ತರನ್ ಜಿಲ್ಲೆಯಲ್ಲಿ ಶುಕ್ರವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆ ರಾಜ್ಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬಲ್ವಿಂದರ್ ಅವರ ಕುಟುಂಬ ಅನೇಕ ವರ್ಷಗಳಿಂದ ಉಗ್ರರ ಹಿಟ್ ಲಿಸ್ಟ್ನಲ್ಲಿತ್ತು.
62 ವರ್ಷದ ಬಲ್ವಿಂದರ್ ಅವರಿಗೆ ಭಯೋತ್ಪಾದಕರಿಂದ ಜೀವ ಬೆದರಿಕೆ ಇತ್ತು ಎಂಬ ಕಾರಣಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಆದರೆ ಸ್ಥಳೀಯ ಪೊಲೀಸರ ಶಿಫಾರಸಿನಂತೆ ಕಳೆದ ವರ್ಷವಷ್ಟೇ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ವಾಪಸ್ ಪಡೆಯಲಾಗಿತ್ತು.
ಉತ್ತರ ಪ್ರದೇಶ: ಗುಂಡು ಹಾರಿಸಿ ಬಿಜೆಪಿ ಮುಖಂಡನ ಹತ್ಯೆ
ಬಲ್ವಿಂದರ್ ಅವರ ಹತ್ಯೆಗೆ ಆಘಾತ ಮತ್ತು ಖಂಡನೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಈ ಕೊಲೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಫಿರೋಜ್ಪುರ ಉಪ ಪೊಲೀಸ್ ಮಹಾ ನಿರ್ದೇಶಕ ನೇತೃತ್ವದ ಎಸ್ಐಟಿ ಬಲ್ವಿಂದರ್ ಸಿಂಗ್ ಅವರ ಬರ್ಬರ ಹತ್ಯೆ ಪ್ರಕರಣದ ಕುರಿತು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಿ, ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಶೀಘ್ರವೇ ಬಂಧಿಸಲಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
ಬಲ್ವಿಂದರ್ ಸಿಂಗ್ ಅವರನ್ನು ಶುಕ್ರವಾರ ಬೆಳಗಿನ ಜಾವ 7 ಗಂಟೆ ಸುಮಾರಿಗೆ ಹತ್ಯೆ ಮಾಡಲಾಗಿದೆ. ಇಬ್ಬರು ಅಪರಿಚಿತ ಪುರುಷರು ಇದರಲ್ಲಿ ಭಾಗಿಯಾಗಿದ್ದಾರೆ. ಬಲ್ವಿಂದರ್ ನಿವಾಸದ ಒಳಗೆ ಹೋದ ಒಬ್ಬ ವ್ಯಕ್ತಿ ಅವರ ಮೇಲೆ ಸಮೀಪದಿಂದ ಗುಂಡು ಹಾರಿಸಿದ್ದಾನೆ. ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ದುಷ್ಕರ್ಮಿಗಳು ಬಳಸಿದ ವಾಹನದ ವಿವರಗಳ ಆಧಾರದಲ್ಲಿ ತನಿಖೆ ಮಾಡಲಾಗುತ್ತಿದೆ.
1990 ಮತ್ತು 1991ರ ನಡುವೆ ಉಗ್ರರು ತಮ್ಮ ಮನೆಯ ಮೇಲೆ ನಡೆಸಿದ ಅನೇಕ ದಾಳಿಗಳಲ್ಲಿ ಬಲ್ವಿಂದರ್ ಸಿಂಗ್ ಹೋರಾಟ ನಡೆಸಿದ್ದರು. ತಮ್ಮ ಮನೆಯ ಮಹಡಿಯಲ್ಲಿ ಅವರು ಬಂಕರ್ಗಳನ್ನು ಸಹ ಸ್ಥಾಪಿಸಿದ್ದರು.
ಕೊಡಲಿಯಿಂದ ಕೊಚ್ಚಿ ನಾಲ್ಕು ಕಂದಮ್ಮಗಳ ಬರ್ಬರ ಕೊಲೆ
1990ರ ಸೆಪ್ಟೆಂಬರ್ನಲ್ಲಿ ಕನಿಷ್ಠ 200 ಉಗ್ರರು ನಡೆಸಿದ ದಾಳಿಯಲ್ಲಿ ಬಲ್ವಿಂದರ್ ಮತ್ತು ಅವರ ಕುಟುಂಬ ಬದುಕುಳಿದಿತ್ತು. ಬಲ್ವಿಂದರ್, ಅವರ ಸಹೋದರ ಮತ್ತು ಅವರ ಪತ್ನಿಯರು ಶಸ್ತ್ರಸಜ್ಜಿತ ಉಗ್ರರ ವಿರುದ್ಧ ಸುಮಾರು ಐದು ಗಂಟೆ ಹೋರಾಡಿದ್ದರು. ಸರ್ಕಾರ ಒದಗಿಸಿದ್ದ ಪಿಸ್ತೂಲು ಮತ್ತು ಸ್ಟೆನ್ ಗನ್ಗಳನ್ನು ಬಳಸಿ ಉಗ್ರರ ವಿರುದ್ಧ ಕಾದಾಡಿದ್ದರು. ಅವರ ತೀವ್ರ ಪ್ರತಿರೋಧದ ಬಳಿಕ ಉಗ್ರರು ಅಲ್ಲಿಂದ ಕಾಲ್ಕಿತ್ತಿದ್ದರು. ಇದರಿಂದ ಬಲ್ವಿಂದರ್ ಕುಟುಂಬ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿತ್ತು. ಅವರ ಕುಟುಂಬಕ್ಕೆ ಶೌರ್ಯ ಚಕ್ರ ಪ್ರಶಸ್ತಿ ನೀಡಲಾಗಿತ್ತು.