ಖಾಲಿಸ್ತಾನ್ಗೆ ಬೆಂಬಲ ಆರೋಪ: ತನಿಖೆಗೆ ನಡೆಸುತ್ತೇವೆ ಎಂದ ಅಮಿತ್ ಶಾ
ಚಂಡೀಗಢ, ಫೆಬ್ರವರಿ 19: ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆಯ ಪ್ರಚಾರ ಶುಕ್ರವಾರ ಕೊನೆಗೊಂಡಿದೆ. ನಾಳೆ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ನಡುವೆ ಪಂಜಾಬ್ನಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಪ್ರತ್ಯೇಕವಾದಿಗಳ ಗುಂಪಿಗೆ (ಖಾಲಿಸ್ತಾನ್) ಬೆಂಬಲ ನೀಡಿದ್ದಾರೆ ಎಂಬ ಆರೋಪವು ಭಾರೀ ಸುದ್ದಿಯಾಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ನಾಯಕ ಹಾಗೂ ಕವಿ ಕುಮಾರ್ ವಿಶ್ವಾಸ್ ಅವರು ಬುಧವಾರ ಗಂಭೀರ ಆರೋಪ ಮಾಡಿದ್ದಾರೆ. "ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಖಾಲಿಸ್ತಾನ್ ಪ್ರತ್ಯೇಕತಾವಾದಿ ಚಳುವಳಿಯನ್ನು ಬೆಂಬಲಿಸುತ್ತಿದ್ದಾರೆ," ಎಂಬ ಆರೋಪವನ್ನು ಮಾಡಿದ್ದಾರೆ. ಫೆಬ್ರವರಿ 20 ರಂದು ನಡೆಯಲಿರುವ ಪಂಜಾಬ್ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ ಮಾಡಿರುವ ಈ ಆರೋಪ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕೇಜ್ರಿವಾಲ್ರಿಂದ ಖಾಲಿಸ್ತಾನ್ ಚಳವಳಿ ಬೆಂಬಲ: ಮಾಜಿ ಎಎಪಿ ನಾಯಕ
ಈ ನಡುವೆ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಆಗ್ರಹ ಮಾಡಿದ್ದಾರೆ. ಈ ನಡುವೆ, "ಆಪ್ ಪ್ರತ್ಯೇಕತಾವಾದಿಗಳ ಪರವಾಗಿರುವ ಆರೋಪವನ್ನು ಕೇಂದ್ರವು ಗಂಭೀರವಾಗಿ ಪರಿಗಣಿಸಿದೆ ಮತ್ತು ಈ ಬಗ್ಗೆ ನಾನು ವೈಯಕ್ತಿಕವಾಗಿ ವಿಚಾರಣೆ ನಡೆಸುತ್ತೇನೆ," ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಪಂಜಾಬಿಗಳನ್ನು ಚುನಾವಣೆಯಲ್ಲಿ ಎಎಪಿ ಬೆಂಬಲಿಸುವಂತೆ ಒತ್ತಾಯಿಸಿ ಪ್ರತ್ಯೇಕತಾವಾದಿ ಸಿಖ್ಸ್ ಫಾರ್ ಜಸ್ಟಿಸ್ (ಎಸ್ಎಫ್ಜೆ) ಬರೆದಿರುವ ಪತ್ರದ ಕುರಿತು ತನಿಖೆ ನಡೆಸುವಂತೆ ಕೋರಿ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಅವರ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಅಮಿತ್ ಶಾ ಈ ಮಾಹಿತಿಯನ್ನು ನೀಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಮತ್ತು ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಪ್ರತ್ಯೇಕತಾವಾದಿಗಳ ಬೆಂಬಲ ಪಡೆದು ಪಂಜಾಬ್ ಸಿಎಂ ಆಗಲು ಬಯಸಿದ್ದರು ಎಂಬ ಆಪ್ ಮಾಜಿ ನಾಯಕ ಕುಮಾರ್ ವಿಶ್ವಾಸ್ ಅವರ ಆರೋಪವನ್ನೂ ಚನ್ನಿ ಪ್ರಸ್ತಾಪಿಸಿದ್ದರು.
ಅಮಿತ್ ಶಾ ಹೇಳುವುದು ಏನು?
ಅಂತಹ ಸಂಘಟನೆಗಳೊಂದಿಗೆ ಯಾವುದೇ ರಾಜಕೀಯ ಸಂಘಟನೆಯ ಸಂಬಂಧಗಳು ಮತ್ತು ಚುನಾವಣೆಯ ಸಮಯದಲ್ಲಿ ಅವರ ಬೆಂಬಲವನ್ನು ಕೋರುವುದು ತೀವ್ರ ಕಳವಳಕಾರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತನ್ನ ಪತ್ರದಲ್ಲಿ ಹೇಳಿದ್ದಾರೆ. ಅಂತಹ ಅಂಶಗಳ ಕಾರ್ಯಸೂಚಿಯು ದೇಶ ವಿರೋಧಿ ಅಂಶಗಳ ಅಜೆಂಡಾಕ್ಕಿಂತ ಭಿನ್ನವಾಗಿಲ್ಲ ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ. ದೇಶದ ಸಮಗ್ರತೆ ಮತ್ತು ಸೌಹಾರ್ದತೆಯೊಂದಿಗೆ ಆಟವಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಪಂಜಾಬ್ ಸಿಎಂ ಚನ್ನಿಗೆ ಭರವಸೆ ನೀಡಿದ್ದಾರೆ. "ಭಾರತ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ನಾನು ಅದನ್ನು ಪರಿಶೀಲಿಸುತ್ತೇನೆ," ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಖಾಲಿಸ್ತಾನ್ ಚಳವಳಿಗೆ ಬೆಂಬಲ ಆರೋಪ: ಕೇಜ್ರಿವಾಲ್ ವಿರುದ್ಧ ತನಿಖೆ ನಡೆಸಲು ಮೋದಿಗೆ ಚನ್ನಿ ಮನವಿ
ತನಿಖೆ ನಡೆಸಲು ಮನವಿ ಮಾಡಿದ್ದ ಚನ್ನಿ
ಗುರುವಾರ ಮಧ್ಯರಾತ್ರಿ ಚನ್ನಿ ಮಾಜಿ ಎಎಪಿ ನಾಯಕರ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದರು. "ಪಂಜಾಬ್ ಸಿಎಂ ಆಗಿ ನಾನು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜಿ ಅವರನ್ನು ಡಾ.ಕುಮಾರ್ ವಿಶ್ವಾಸ್ ಅವರ ವೀಡಿಯೊ ವಿಷಯದಲ್ಲಿ ನಿಷ್ಪಕ್ಷಪಾತ ತನಿಖೆಗೆ ಆದೇಶಿಸುವಂತೆ ವಿನಂತಿಸುತ್ತೇನೆ. ರಾಜಕೀಯವನ್ನು ಬದಿಗಿಟ್ಟು, ಪ್ರತ್ಯೇಕತಾವಾದದ ವಿರುದ್ಧ ಹೋರಾಡುವಾಗ ಪಂಜಾಬ್ನ ಜನರು ಭಾರಿ ಬೆಲೆ ತೆತ್ತಿದ್ದಾರೆ. ಗೌರವಾನ್ವಿತ ಪ್ರಧಾನಿಯವರು ಪ್ರತಿಯೊಬ್ಬ ಪಂಜಾಬಿಯ ಚಿಂತೆಯನ್ನು ಪರಿಹರಿಸಬೇಕಾಗಿದೆ," ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಪಂಜಾಬ್ನ ಮುಖ್ಯ ಚುನಾವಣಾ ಅಧಿಕಾರಿಯ ಪತ್ರವನ್ನು ಹಂಚಿಕೊಂಡು ಟ್ವಿಟ್ಟರ್ನಲ್ಲಿ ಬರೆದಿದ್ದಾರೆ. ಎಎಪಿ ಮಾಜಿ ನಾಯಕರ ಈ ಹೇಳಿಕೆಯನ್ನು ಪ್ರಚಾರ ಮಾಡದಂತೆ ಮಾಧ್ಯಮಗಳಿಗೆ ಚುನಾವಣಾ ಅಧಿಕಾರಿ ಆದೇಶ ನೀಡಿ, ಬಳಿಕ ಆದೇಶವನ್ನು ಹಿಂಪಡೆದ ಬಳಿಕ ಚನ್ನಿ ಈ ಆರೋಪದ ಬಗ್ಗೆ ತನಿಖೆಗೆ ಒತ್ತಾಯ ಮಾಡಿದ್ದಾರೆ. (ಒನ್ಇಂಡಿಯಾ ಸುದ್ದಿ)
Recommended Video