ಕಾಂಗ್ರೆಸ್ ಟಿಕೆಟ್ ನಿರಾಕರಣೆ: ಚನ್ನಿ ಸಹೋದರ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ
ಚಂಡೀಗಢ, ಜನವರಿ 16: ಪಂಜಾಬ್ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಪಕ್ಷವು ಎಷ್ಟೆ ಚಾಣಕ್ಯ ನಡೆಯನ್ನು ತೋರಿದ್ದರೂ ಕಾಂಗ್ರೆಸ್ನ ಕೆಲವು ಟಿಕೆಟ್ ಆಕಾಂಕ್ಷಿಗಳು ಅಸಮಾಧಾನ ಹೊಂದಿರುವುದು ನಿಜ. ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದಲ್ಲಿಯೇ ಕೆಲವು ಭಿನ್ನಾಭಿಪ್ರಾಯ ಹುಟ್ಟಿದೆ. ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಸೋದರ ಮನೋಹರ್ ಸಿಂಗ್ಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದು, ಈ ಹಿನ್ನೆಲೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಮನೋಹರ್ ಸಿಂಗ್ ಮುಂದಾಗಿದ್ದಾರೆ.
ಇನ್ನು ಮಾನ್ಸಾ, ಮೊಗಾ, ಮಾಲೌಟ್ ಮತ್ತು ಬಸ್ಸಿ ಪಠಾನಾ ವಿಧಾನಸಭಾ ಕ್ಷೇತ್ರಗಳಲ್ಲಿ ಅತೃಪ್ತಿ ಎದ್ದುಕಾಣುತ್ತಿದೆ. ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಸಹೋದರ ಮನೋಹರ್ ಸಿಂಗ್ಗೆ ಟಿಕೆಟ್ ನಿರಾಕರಣೆ ಮಾಡಿದೆ. ಖರಾರ್ ಸಿವಿಲ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದ ಚನ್ನಿ ಸಹೋದರ ಮನೋಹರ್ ಸಿಂಗ್ ಬಸ್ಸಿ ಪಠಾನಾದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರೀಕ್ಷೆಯನ್ನು ಹೊಂದಿದ್ದರು.
ಸೋನು ಸೂದ್ ಸಹೋದರಿಗೆ ಸ್ಥಾನ: ಪಂಜಾಬ್ ಕಾಂಗ್ರೆಸ್ ಶಾಸಕ ಬಿಜೆಪಿಗೆ ಸೇರ್ಪಡೆ
ಕಾಂಗ್ರೆಸ್ ತನ್ನ ಶಾಸಕರನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಒಟ್ಟು 79 ಶಾಸಕರ ಪೈಕಿ 61 ಶಾಸಕರಿಗೆ ಪಕ್ಷದ ಟಿಕೆಟ್ ನೀಡಿದೆ. ಈ ಹಿನ್ನೆಲೆಯಿಂದಾಗಿ ಪಕ್ಷದ ಶಾಸಕರುಗಳು ಕಾಂಗ್ರೆಸ್ ಪಕ್ಷದಲ್ಲಿಯೇ ಉಳಿದುಕೊಂಡಿದ್ದರೂ ಟಿಕೆಟ್ ಆಂಕಾಕ್ಷಿಗಳು ಮಾತ್ರ ಅಸಮಾಧಾನ ಹೊಂದಿದ್ದಾರೆ. ಮನೋಹರ್ ಸಿಂಗ್ ಬಸ್ಸಿ ಪಠಾನಾದಿಂದ ಸ್ಪರ್ಧಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಬಸ್ಸಿ ಪಠಾನಾ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಗುರುಪ್ರೀತ್ ಸಿಂಗ್ ಜಿಪಿ ಅವರನ್ನೇ ಕಣಕ್ಕೆ ಇಳಿಸಿದೆ. ಇದರಿಂದಾಗಿ ಅಸಮಾಧಾನಗೊಂಡಿರುವ ಮನೋಹರ್ ಸಿಂಗ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಟಿಕೆಟ್ ಸಿಗದ ಕಾರಣ ಓರ್ವ ಶಾಸಕ ಬಿಜೆಪಿ ಸೇರ್ಪಡೆ
ಮಾಲೌಟ್ ಮತ್ತು ಮೊಗಾದಲ್ಲಿ, ಕಾಂಗ್ರೆಸ್ ಹಾಲಿ ಶಾಸಕ, ಪಂಜಾಬ್ ವಿಧಾನಸಭೆಯ ಉಪ ಸ್ಪೀಕರ್ ಅಜೈಬ್ ಸಿಂಗ್ ಭಟ್ಟಿ ಮತ್ತು ಹರ್ಜೋತ್ ಕಮಲ್ ಅವರಿಗೆ ಕೂಡಾ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದೆ. ಕೆಲ ದಿನಗಳ ಹಿಂದೆ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದ ವಿವಾದಿತ ಪಂಜಾಬಿ ಗಾಯಕ ಸಿಧು ಮುಸ್ಸೆವಾಲಾ ಮಾನ್ಸಾದಿಂದ ಸ್ಪರ್ಧಿಸಲಿದ್ದಾರೆ. ಮೊಗಾದಿಂದ ಹರ್ಜೋತ್ ಕಮಲ್ ಬದಲಾಗಿ ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಸ್ಪರ್ಧೆಗೆ ಇಳಿಯಲಿದ್ದಾರೆ. ತನಗೆ ಟಿಕೆಟ್ ನೀಡದರೆ ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ಗೆ ಟಿಕೆಟ್ ನೀಡಿದ್ದಕ್ಕೆ ಹರ್ಜೋತ್ ಕಮಲ್ ಅಸಮಧಾನಗೊಂಡು ಶನಿವಾರ ಬಿಜೆಪಿ ಸೇರಿದ್ದಾರೆ.
2019 ರಲ್ಲಿ ಎಎಪಿ ತೊರೆದ ನಂತರ ಕಾಂಗ್ರೆಸ್ಗೆ ಸೇರ್ಪಡೆ ಆದ ಹಾಲಿ ಶಾಸಕ ನಾಜರ್ ಸಿಂಗ್ ಮನ್ಶಾಹಿಯಾ ಬದಲಾಗಿ ಆ ಕ್ಷೇತ್ರದಲ್ಲಿ ಮುಸ್ಸೆವಾಲಾ ಸ್ಪರ್ಧೆಗೆ ಇಳಿಯಲಿದ್ದಾರೆ. ಎಎಪಿಯಿಂದ ಕಾಂಗ್ರೆಸ್ಗೆ ಸೇರ್ಪಡೆ ಆದ ರೂಪಿಂದರ್ ಕೌರ್ 'ರೂಬಿ' ಅವರನ್ನು ಪಕ್ಷವು ಮಾಲೌಟ್-ಎಸ್ಸಿ ಸ್ಥಾನದಿಂದ ಕಣಕ್ಕಿಳಿಸಿದೆ. ಕಳೆದ ಚುನಾವಣೆಯಲ್ಲಿ ಎಎಪಿ ಟಿಕೆಟ್ನಲ್ಲಿ ಬಟಿಂಡಾ ಗ್ರಾಮಾಂತರದಿಂದ ಸ್ಪರ್ಧಿಸಿ ಕಣಕ್ಕೆ ಇಳಿದಿದ್ದರು.
ಪಂಜಾಬ್ ಚುನಾವಣೆ: ಶಾಸಕರ ಹಿಂಡು ಉಳಿಸಿಕೊಳ್ಳಲು ಕಾಂಗ್ರೆಸ್ನ ಯತ್ನ
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಪಂಜಾಬ್, ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಪಂಜಾಬ್ನಲ್ಲಿ ಫೆಬ್ರವರಿ 14 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ 86 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.
Recommended Video
ಚಮ್ಕೌರ್ ಸಾಹಿಬ್ನಿಂದ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ಅಮೃತಸರ ಪೂರ್ವದಿಂದ ಪಿಸಿಸಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಸ್ಫರ್ಧಿಸಲಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷವನ್ನು ತೊರೆದು ತನ್ನದೇ ಆದ ಪಕ್ಷವನ್ನು ಸ್ಥಾಪನೆ ಮಾಡಿರುವ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ರ ಪಟಿಯಾಲ ನಗರ ಕ್ಷೇತ್ರಕ್ಕೆ ಕಾಂಗ್ರೆಸ್ ಇನ್ನೂ ಕೂಡಾ ಯಾವುದೇ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. 117 ಸದಸ್ಯ ಬಲದ ವಿಧಾನಸಭೆಗೆ ಪಕ್ಷವು ತನ್ನ ಉಳಿದ 31 ಸ್ಥಾನಗಳನ್ನು ಶೀಘ್ರದಲ್ಲೇ ಘೋಷಿಸಲಿದೆ. (ಒನ್ಇಂಡಿಯಾ ಸುದ್ದಿ)