ಪಂಜಾಬ್ ಚುನಾವಣೆ ಮುಂದೂಡಲು ಬಿಜೆಪಿಯಿಂದ ಮನವಿ
ಚಂಡೀಗಢ, ಜನವರಿ 17: ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಬಳಿಕ ಈಗ ಪಂಜಾಬ್ ಬಿಜೆಪಿಯು ಕೂಡಾ ಪಂಜಾಬ್ ಚುನಾವಣೆ ಮುಂದೂಡಿಕೆ ಮಾಡುವಂತೆ ಭಾರತದ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ರವಿದಾಸ್ ಜಯಂತಿಯ ನಿಮಿತ್ತ ಪಂಜಾಬ್ನಲ್ಲಿ ಚುನಾವಣೆಯನ್ನು ಮುಂದೂಡುವಂತೆ ಭಾರತದ ಚುನಾವಣಾ ಆಯೋಗಕ್ಕೆ ಪಂಜಾಬ್ ಬಿಜೆಪಿಯು ಫೆಬ್ರವರಿ 16 ರಂದು ಮನವಿ ಮಾಡಿದೆ.
ಸದ್ಯಕ್ಕೆ ನಿಗದಿ ಆಗಿರುವ ದಿನಾಂಕದ ಪ್ರಕಾರ ಪಂಜಾಬ್ ವಿಧಾನಸಭೆ ಚುನಾವಣೆ ಫೆ.14ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಹೊರಬೀಳಲಿದೆ. ಆದರೆ ಈ ನಡುವೆ ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಹಾಗೂ ಬಿಜೆಪಿಯು ಪಂಜಾಬ್ ಚುನಾವಣೆಯನ್ನು ಮುಂದೂಡುವಂತೆ ಮನವಿ ಮಾಡಿದೆ. ಆದರೆ ಚುನಾವಣಾ ಆಯೋಗ ಈ ಬಗ್ಗೆ ಯಾವುದೇ ಸ್ಪಂದನೆ ನೀಡಿಲ್ಲ.
ಪಂಚರಾಜ್ಯ ಚುನಾವಣೆ: ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಯಾರಿಗೆ ಅವಕಾಶ?
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಸೋಮ್ ಪ್ರಕಾಶ್ ಕೂಡ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ರಾಜ್ಯ ಚುನಾವಣೆಯನ್ನು ಫೆಬ್ರವರಿ 18 ರ ನಂತರ ಮರುನಿಗದಿ ಮಾಡುವಂತೆ ಕೋರಿದ್ದಾರೆ. ಇನ್ನು ಪಂಜಾಬ್ನಲ್ಲಿ ಚುನಾವಣೆಯನ್ನು ಒಂದು ವಾರ ಮುಂದೂಡುವ ಬೇಡಿಕೆಯನ್ನು ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ರ ಹೊಸ ಪಕ್ಷ ಪಂಜಾಬ್ ಲೋಕ ಕಾಂಗ್ರೆಸ್ ಬೆಂಬಲ ನೀಡಿದೆ.
ಮುಖ್ಯಮಂತ್ರಿ ಚನ್ನಿ ಹೇಳಿದ್ದೇನು?
ಗುರು ರವಿದಾಸ್ ಜಯಂತಿಗೆ ಉತ್ತರ ಪ್ರದೇಶದ ವಾರಣಾಸಿಗೆ ತೆರಳುವ ಭಕ್ತರು ಮತ ಚಲಾಯಿಸಲು ಅನುಕೂಲವಾಗುವಂತೆ ಪಂಜಾಬ್ ವಿಧಾನಸಭೆ ಚುನಾವಣೆಯನ್ನು ಕನಿಷ್ಠ ಆರು ದಿನಗಳ ಕಾಲ ಮುಂದೂಡಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಶನಿವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.
ಕಾಂಗ್ರೆಸ್ ಟಿಕೆಟ್ ನಿರಾಕರಣೆ: ಚನ್ನಿ ಸಹೋದರ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ
ಈ ವಿಚಾರವನ್ನು ಪರಿಶಿಷ್ಟ ಜಾತಿ ಸಮುದಾಯದ ಪ್ರತಿನಿಧಿಗಳು ತಮ್ಮ ಗಮನಕ್ಕೆ ತಂದಿದ್ದಾರೆ ಎಂದು ಪಂಜಾಬ್ನಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಸಿಎಂ ಚನ್ನಿ ಹೇಳಿದ್ದಾರೆ. ಫೆಬ್ರವರಿ 10 ರಿಂದ ಫೆಬ್ರವರಿ 16, 2022 ರ ನಡುವೆ ಸುಮಾರು 20 ಲಕ್ಷ ಪರಿಶಿಷ್ಟ ಜಾತಿ ಸಮುದಾಯದ ಭಕ್ತರು ಉತ್ತರ ಪ್ರದೇಶದ ವಾರಣಾಸಿಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಕೂಡಾ ಸಿಎಂ ಚನ್ನಿ ಉಲ್ಲೇಖ ಮಾಡಿದ್ದರು.
"ಮೇಲೆ ಉಲ್ಲೇಖ ಮಾಡಿ ಕಾರಣದಂತೆ ಚುನಾವಣೆಯ ಮತದಾನವನ್ನು ಕನಿಷ್ಠ ಆರು ದಿನಗಳ ಕಾಲ ಮುಂದೂಡುವುದು ನ್ಯಾಯಯುತ ಮತ್ತು ಸೂಕ್ತವೆಂದು ಪರಿಗಣಿಸಲಾಗಿದೆ. ಇದು ಸುಮಾರು 20 ಲಕ್ಷ ಜನರು ತಮ್ಮ ಮತದಾನದ ಹಕ್ಕನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ನೀವು ಇದನ್ನು ಸಹಾನುಭೂತಿಯಿಂದ ಪರಿಗಣಿಸುತ್ತೀರಿ ಎಂದು ನನಗೆ ಖಾತ್ರಿಯಿದೆ. ಅಗತ್ಯವಿದ್ದಂತೆ ಮಾಡಿ," ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರರಿಗೆ ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಶನಿವಾರ ಪತ್ರ ಬರೆದಿದ್ದಾರೆ.
ಗುರು ರವಿದಾಸ್ ಜಯಂತಿ
ಈ ವರ್ಷ ಫೆಬ್ರವರಿ 16 ರಂದು ಗುರು ರವಿದಾಸ್ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಂತ ಗುರು ರವಿದಾಸ್ ಅವರ 645 ನೇ ಜನ್ಮದಿನವನ್ನು ಆಚರಿಸಲಾಗುತ್ತದೆ. ಗುರು ರವಿದಾಸ್ ಭಕ್ತಿ ಚಳವಳಿಯ ಪ್ರಸಿದ್ಧ ಸಂತರಾಗಿದ್ದು, ರವಿದಾಸ್ಗೆ ಮಾನ್ಯತೆ ಪಡೆದ ಸುಮಾರು 40 ಕವಿತೆಗಳನ್ನು ಪವಿತ್ರ ಸಿಖ್ ಧರ್ಮಗ್ರಂಥವಾದ ಆದಿ ಗ್ರಂಥದಲ್ಲಿ ಸೇರಿಸಲಾಗಿದೆ. ಜಾತೀಯತೆಯ ತಾರತಮ್ಯ ಪದ್ಧತಿಯನ್ನು ಹೋಗಲಾಡಿಸಲು ಗುರು ರವಿದಾಸ್ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಗುರು ರವಿದಾಸ್ ಜಯಂತಿಯಂದು, ಧಾರ್ಮಿಕ ವಿಧಿಗಳ ಭಾಗವಾಗಿ ಭಕ್ತರು ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಹೆಚ್ಚಾಗಿ ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ವಾರಣಾಸಿಗೆ ಭಕ್ತರು ತೆರಳುತ್ತಾರೆ.
Recommended Video
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಪಂಜಾಬ್, ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್ಇಂಡಿಯಾ ಸುದ್ದಿ)