ಪಂಜಾಬ್ ಚುನಾವಣೆ: ಎಎಪಿಯ 10ನೇ ಪಟ್ಟಿ ಬಿಡುಗಡೆ, ಪಟ್ಟಿಯಲ್ಲಿ ಪಕ್ಷಾಂತರಿ
ಚಂಡೀಗಢ, ಜನವರಿ 17: ಪಂಜಾಬ್ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ) ಇನ್ನೂ ಮೂವರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಭಾನುವಾರ ಆಮ್ ಆದ್ಮಿ ಪಕ್ಷ ತನ್ನ ಅಭ್ಯರ್ಥಿಗಳ 10 ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ನಿಂದ ಎಎಪಿಗೆ ಸೇರ್ಪಡೆಯಾದ ಮಾಜಿ ಶಾಸಕ ಜೋಗಿಂದರ್ ಸಿಂಗ್ ಮಾನ್ ಕೂಡಾ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಜೋಗಿಂದರ್ ಸಿಂಗ್ ಮಾನ್ರನ್ನು ಎಎಪಿಯು ಫಗ್ವಾರಾ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ಪರಿಶಿಷ್ಟ ಜಾತಿ ಸಮುದಾಯದ ನಾಯಕರಾದ ಮಾಜಿ ಶಾಸಕ ಜೋಗಿಂದರ್ ಸಿಂಗ್ ಮಾನ್ ವಿದ್ಯಾರ್ಥಿವೇತನ ಹಗರಣದ ಹಿಂದೆ ಇರುವವರ ವಿರುದ್ಧ ಪಕ್ಷವು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಆರೋಪ ಮಾಡಿದ್ದಾರೆ. ಹಾಗೆಯೇ ಫಗ್ವಾರವನ್ನು ಜಿಲ್ಲೆಯನ್ನಾಗಿ ಮಾಡುವ ಬಹುಕಾಲದ ಬೇಡಿಕೆಯ ವಿಚಾರದಲ್ಲಿ ಕಾಂಗ್ರೆಸ್ ನಿಲುವಿನಿಂದಾಗಿ ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆ ಪಕ್ಷಕ್ಕೆ ರಾಜೀನಾಮೆ ನೀಡಿ ಎಎಪಿಗೆ ಸೇರ್ಪಡೆ ಆಗಿದ್ದಾರೆ.
ಪಂಜಾಬ್ ಚುನಾವಣೆ: ನೀತಿ ಸಂಹಿತೆ ಉಲ್ಲಂಘಿಸಿದ ಎಎಪಿಗೆ ನೋಟಿಸ್
ಜೋಗಿಂದರ್ ಸಿಂಗ್ ಮಾನ್ ಕಾಂಗ್ರೆಸ್ಗೆ ಮತ್ತು ಪಂಜಾಬ್ ಆಗ್ರೋ ಇಂಡಸ್ಟ್ರೀಸ್ ಕಾರ್ಪೊರೇಶನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಯಾಂತ್ ಸಿಂಗ್, ರಾಜಿಂದರ್ ಕೌರ್ ಭಟ್ಟಾಲ್ ಮತ್ತು ಅಮರಿಂದರ್ ಸಿಂಗ್ ಸೇರಿದಂತೆ ಸಚಿವ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ ಫಗ್ವಾರಾದಿಂದ ಮೂರು ಬಾರಿ ಶಾಸಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದ ಜೋಗಿಂದರ್ ಸಿಂಗ್ ಮಾನ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದಲ್ಲಿ, "ನಾನು ಕಾಂಗ್ರೆಸ್ಸಿಗನಾಗಿ ಸಾಯುವ ಕನಸು ಹೊಂದಿದೆ," ಎಂದು ಉಲ್ಲೇಖ ಮಾಡಿದ್ದಾರೆ.
ಸೋನಿಯಾ ಗಾಂಧಿಗೆ ಜೋಗಿಂದರ್ ಸಿಂಗ್ ಮಾನ್ ಬರೆದ ಪತ್ರದಲ್ಲಿ ಏನಿದೆ?
"ನಾನು ಕಾಂಗ್ರೆಸ್ಸಿಗನಾಗಿ ಸಾಯುವ ಕನಸು ಹೊಂದಿದೆ. ಆದರೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಯ ತಪ್ಪಿತಸ್ಥರನ್ನು ಕಾಂಗ್ರೆಸ್ ಬೆಂಬಲಿಸುತ್ತಿರುವುದರಿಂದ, ನನ್ನ ಆತ್ಮಸಾಕ್ಷಿಯು ನಾನು ಸಾಯುವವರೆಗೂ ಕಾಂಗ್ರೆಸ್ನಲ್ಲಿಯೇ ಉಳಿಯುವ ಮನಸ್ಸನ್ನು ನೀಡುತ್ತಿಲ್ಲ," ಎಂದು ತಿಳಿಸಿದ್ದಾರೆ.
ಪಂಜಾಬ್ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯನ್ನು ಜನತೆಗೆ ಬಿಟ್ಟ ಆಮ್ ಆದ್ಮಿ ಪಕ್ಷ
ಇನ್ನು ಜೋಗಿಂದರ್ ಸಿಂಗ್ ಮಾನ್ ಎಎಪಿ ಸೇರ್ಪಡೆಯು ಎಎಪಿ ನಾಯಕ ಮತ್ತು ಪಂಜಾಬ್ ಸಹ-ಪ್ರಭಾರಿ ರಾಘವ್ ಚಡ್ಡಾ ರಾಜ್ಯದಲ್ಲಿ ಪಕ್ಷಕ್ಕೆ ದೊಡ್ಡ ಉತ್ತೇಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ. "ಅರವಿಂದ್ ಜಿ ಅವರ ದೂರದೃಷ್ಟಿಯಿಂದ ಪ್ರೇರಿತರಾದ ಪಂಜಾಬ್ನ ಮಾಜಿ ಸಂಪುಟ ಸಚಿವ ಹಾಗೂ ಮೂರು ಬಾರಿ ಶಾಸಕರಾಗಿದ್ದ ಜೋಗಿಂದರ್ ಸಿಂಗ್ ಮಾನ್ ಜಿ ಅವರು ಕಾಂಗ್ರೆಸ್ ಜೊತೆಗಿನ ತಮ್ಮ 50 ವರ್ಷಗಳ ಹಳೆಯ ಒಡನಾಟವನ್ನು ಕೊನೆ ಮಾಡಿದ್ದಾರೆ. ಅವರು ಪ್ರಸ್ತುತ ಪಂಜಾಬ್ ಆಗ್ರೋ ಇಂಡಸ್ಟ್ರೀಸ್ ಕಾರ್ಪೊರೇಷನ್ನ ಅಧ್ಯಕ್ಷರಾಗಿದ್ದರು. ಅವರು ಎಎಪಿಗೆ ಸೇರ್ಪಡೆ ಆಗಿದ್ದು, ಅದು ಪಂಜಾಬ್ನಲ್ಲಿ ಪಕ್ಷದ ಘಟಕಕ್ಕೆ ದೊಡ್ಡ ಉತ್ತೇಜನವನ್ನು ನೀಡುತ್ತದೆ," ಎಂದು ರಾಘವ್ ಚಡ್ಡಾ ಟ್ವೀಟ್ ಮಾಡಿದ್ದಾರೆ.
ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಜೋಗಿಂದರ್ ಸಿಂಗ್ ಮಾನ್ ಎಎಪಿಗೆ ಸೇರುತ್ತಿರುವುದನ್ನು ತೋರಿಸುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇನ್ನು ಎಎಪಿ ಈವರೆಗೆ ಸುಮಾರು 112 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಪಂಜಾಬ್ನಲ್ಲಿ 117 ವಿಧಾನಸಭೆ ಸ್ಥಾನಗಳು ಇದ್ದು, ಈ ಪೈಕಿ ಕಳೆದ ಬಾರಿ ಎಎಪಿ 20 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.
Aam Aadmi Party releases 10th list of 3 candidates for Punjab Assembly elections pic.twitter.com/BwdxV9muFr
— ANI (@ANI) January 16, 2022
Recommended Video
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಪಂಜಾಬ್, ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್ಇಂಡಿಯಾ ಸುದ್ದಿ)