ರಾಹುಲ್ ಗಾಂಧಿ ರ್ಯಾಲಿ ಬಹಿಷ್ಕರಿಸಿದ 5 ಕಾಂಗ್ರೆಸ್ ಸಂಸದರು?
ಚಂಡೀಗಢ, ಜನವರಿ 27: ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಮತ್ತೊಂದು ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿರುವಂತೆ ಕಂಡು ಬಂದಿದೆ. ಮೂಲಗಳ ಪ್ರಕಾರ, ಐವರು ಸಂಸದರು "ಪಕ್ಷದ ಹಿರಿಯ ನಾಯಕತ್ವವನ್ನು ಧಿಕ್ಕರಿಸಲು" ಮುಂದಾಗಿದ್ದಾರೆ. ಆದರೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಈ ವರದಿಯನ್ನು ತಳ್ಳಿಹಾಕಿದ್ದಾರೆ.
ಪಂಜಾಬ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ಪ್ರಚಾರವನ್ನು ಬಹಿಷ್ಕರಿಸಲು ಸಂಸದರು ಯೋಜಿಸಿದ್ದರು ಎಂದು ಹೇಳಿದ್ದರು. ಜನವರಿ 27, ಗುರುವಾರದಂದು ರಾಹುಲ್ ಗಾಂಧಿ ಪಂಜಾಬ್ನಲ್ಲಿ ತಮ್ಮ ಮೆಗಾ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು. ಐವರು ಸಂಸದರು ರಾಹುಲ್ ಗಾಂಧಿಯವರ ನಾಯಕತ್ವವನ್ನು ಒಪ್ಪಿಕೊಂಡಿಲ್ಲ ಎಂದು ಮೂಲಗಳು ತಿಳಿಸಿದೆ.
ಪಂಜಾಬ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿದ ರಾಹುಲ್
ಆದರೆ ಈ ಬಹಿಷ್ಕಾರದ ವರದಿಗಳನ್ನು ಬಹಿಷ್ಕಾರ ಮಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಅವು ಕೇವಲ ಆಧಾರರಹಿತ ವದಂತಿಗಳು ಮತ್ತು ಇದು ನಿಜವಲ್ಲ ಎಂದು ತಿಳಿಸಿದ್ದಾರೆ. ಈ ನಡುವೆ ಖದೂರ್ ಸಾಹಿಬ್ನ ಕಾಂಗ್ರೆಸ್ ಸಂಸದ ಜಸ್ಬೀರ್ ಸಿಂಗ್ ಗಿಲ್ ಗುರುವಾರ ಅಮೃತಸರದಲ್ಲಿ ರಾಹುಲ್ ಗಾಂಧಿಯವರ ರ್ಯಾಲಿಗೆ ಹಾಜರಾಗಿಲ್ಲ. ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, "ಈ ಬಗ್ಗೆ ನಾಯಕತ್ವಕ್ಕೆ ಮೊದಲೇ ತಿಳಿಸಿದ್ದು, ಈ ಬಗ್ಗೆ ಸುಮ್ಮನೇ ವದಂತಿಯನ್ನು ಹಬ್ಬಬೇಡಿ," ಎಂದು ಮನವಿ ಮಾಡಿದ್ದಾರೆ.
ಆಹ್ವಾನ ನೀಡಿದ್ದರೆ, ನಾವು ಖಂಡಿತವಾಗಿಯೂ ಹೋಗುತ್ತಿದ್ದೆವು!
ಇನ್ನು ಈ ಬಗ್ಗೆ ಮಾತನಾಡಿದ ಜಸ್ಬೀರ್ ಸಿಂಗ್ ಗಿಲ್, "ಈ ಕಾರ್ಯಕ್ರಮಕ್ಕೆ ಹೋಗಲು ನಮಗೆ ಯಾವುದೇ ತೊಂದರೆ ಇರಲಿಲ್ಲ. 117 ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಕಾರ್ಯಕ್ರಮ ಎಂದು ನಮಗೆ ತಿಳಿದು ಬಂದಿದೆ. ಪಿಸಿಸಿ ಅಧ್ಯಕ್ಷರಾಗಲಿ ಅಥವಾ ಸಿಎಂ ಆಗಲಿ ನಮ್ಮನ್ನು ಆಹ್ವಾನಿಸಿಲ್ಲ. ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯೂ ಆಹ್ವಾನ ನೀಡಿಲ್ಲ. ನಮಗೆ ಆಹ್ವಾನ ನೀಡಿದ್ದರೆ, ನಾವು ಖಂಡಿತವಾಗಿಯೂ ಹೋಗುತ್ತಿದ್ದೆವು," ಎಂದು ತಿಳಿಸಿದ್ದಾರೆ.
ಸಿಧು-ಚನ್ನಿ ಭಿನ್ನಾಭಿಪ್ರಾಯ ಶಮನ
ಇನ್ನು ಈ ಬಿಕ್ಕಟ್ಟು ಇರುವುದು ನಿಜವಾದರೆ ಪಂಜಾಬ್ನಲ್ಲಿ ಕಾಂಗ್ರೆಸ್ಗೆ ಮತ್ತೊಂದು ತಲೆ ನೋವು ಉಂಟಾಗಲಿದೆ. ಕಳೆದ ವರ್ಷ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಜೊತೆಗೆ ಭಿನ್ನಾಭಿಪ್ರಾಯದಿಂದಾಗಿ ಕಾಂಗ್ರೆಸ್ ತೊರೆದು ತನ್ನದೇ ಆದ ಪಕ್ಷವನ್ನು ರಚನೆ ಮಾಡಿದ್ದಾರೆ. ಮುಂದಿನ ತಿಂಗಳು ವಿಧಾನಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಪಂಜಾಬ್ ಲೋಕಸಭೆ ಕಾಂಗ್ರೆಸ್ 37 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಬಿಜೆಪಿ 65 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
ಕಾಂಗ್ರೆಸ್ ಭಾರೀ ಸಂಕಷ್ಟಕ್ಕೆ ಒಳಗಾಗಬಹುದು!
ಸಿಧು ಮತ್ತು ಸಿಎಂ ಚರಣ್ಜಿತ್ ಸಿಂಗ್ ಚನ್ನಿ ನಡುವಿನ ಭಿನ್ನಾಭಿಪ್ರಾಯಕ್ಕೆ ಸಂಬಂಧಿಸಿದ ಮತ್ತೊಂದು ಬಿಕ್ಕಟ್ಟು ಸ್ವಲ್ಪ ಸರಿಯಾಗುತ್ತಿರುವಂತೆ ಕಾಣುತ್ತಿದೆ. ಆದರೆ ಇನ್ನೂ ಐವರು ಸಂಸದರು ಹೈಕಮಾಂಡ್ ಆಜ್ಞೆಯನ್ನು ಧಿಕ್ಕರಿಸಿದರೆ, ಫೆಬ್ರವರಿ 20 ರಂದು 117 ಸ್ಥಾನಗಳ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಸಂಕಷ್ಟಕ್ಕೆ ಒಳಗಾಗಬಹುದು.
ರಾಹುಲ್ ಗಾಂಧಿ ಗೋಲ್ಡನ್ ಟೆಂಪಲ್ಗೆ ಭೇಟಿ
ಗುರುವಾರ ಜಲಂಧರ್ನಲ್ಲಿ ನಡೆಯಲಿರುವ ವರ್ಚುವಲ್ ರ್ಯಾಲಿಗೂ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೃತಸರದ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿದ್ದಾರೆ. ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಜೊತೆಯಾಗಿ ರಾಹುಲ್ ಗಾಂಧಿ ಅಮೃತಸರದ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿದರು. ನಿನ್ನೆಯಷ್ಟೇ ಈ ಬಗ್ಗೆ ಮಾಹಿತಿ ನೀಡಿದ್ದ ಕಾಂಗ್ರೆಸ್ ಎಲ್ಲಾ 117 ಕಾಂಗ್ರೆಸ್ ಅಭ್ಯರ್ಥಿಗಳು ಜೊತೆಯಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದರು. ಆದರೆ ಇಂದು 109 ಕಾಂಗ್ರೆಸ್ ಚುನಾವಣಾ ಅಭ್ಯರ್ಥಿಗಳು ಜೊತೆ ಇದ್ದರು. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್ಇಂಡಿಯಾ ಸುದ್ದಿ)