ಮೋದಿ ಬೆಂಗಾವಲು ಪಡೆ ತಡೆಯಲು ರೈತರಿಗೆ ಸೂಚಿಸಿದ್ದೇ ಪಂಜಾಬ್ ಸರ್ಕಾರ: ಹರಿಯಾಣ ಸಿಎಂ
ಚಂಡೀಗಢ, ಜನವರಿ 13: ಪಂಜಾಬ್ನ ಚರಂಜಿತ್ ಸಿಂಗ್ ಚನ್ನಿ ಸರ್ಕಾರವು ಪ್ರಧಾನಿ ನರೇಂದ್ರ ಮೋದಿಯವರ ಜೀವಕ್ಕೆ ಅಪಾಯವನ್ನುಂಟುಮಾಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಾಹನವನ್ನು ತಡೆಯಲು ಪಂಜಾಬ್ ಸರ್ಕಾರವೇ ರೈತರನ್ನು ಕಳುಹಿಸಿದೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಬುಧವಾರ ಆರೋಪಿಸಿದ್ದಾರೆ.
ಪ್ರಧಾನಿ ಮೋದಿಯವರ ಭದ್ರತೆಯ ಉಲ್ಲಂಘನೆಯ ಕುರಿತು ಟಿವಿ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡುತ್ತಾ ಹರಿಯಾಣ ಸಿಎಂ ಈ ಆರೋಪವನ್ನು ಮಾಡಿದ್ದಾರೆ. ಪಂಜಾಬ್ ಪೊಲೀಸ್ ಠಾಣೆಯ ಎಸ್ಎಚ್ಒ ಜನಸಂದಣಿಯನ್ನು ಹಾಗೂ ರಸ್ತೆಯನ್ನು ನಿರ್ಬಂಧ ಮಾಡಲು ಸೂಚನೆ ನೀಡಲಾಗಿದೆ ಎಂದು ಮಾಧ್ಯಮಕ್ಕೆ ತಿಳಿಸಿರುವುದನ್ನು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.
PM ಭದ್ರತಾ ಲೋಪ: ಏಕಪಕ್ಷೀಯ ವಿಚಾರಣೆ ಇಲ್ಲ- ಸುಪ್ರಿಂ
ಇನ್ನು ಹರಿಯಾಣ ಸರ್ಕಾರದ ಹೇಳಿಕೆಯಲ್ಲಿ ಮನೋಹರ್ ಲಾಲ್ ಖಟ್ಟರ್, "ಕೆಟ್ಟ ಹವಾಮಾನದ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗವನ್ನು ಯೋಜಿಸಬೇಕಾಗಬಹುದು ಎಂದು ಪಂಜಾಬ್ ಎಚ್ಚರಿಸಿದೆ," ಎಂದು ಉಲ್ಲೇಖ ಮಾಡಿದ್ದಾರೆ. "ಈ ಪಂಜಾಬ್ ಸರ್ಕಾರವು ಯಾವುದೇ ವ್ಯವಸ್ಥೆಗಳನ್ನು ಮಾಡದೆ, ಮುಖಂಡರಿಗೆ ಪ್ರಧಾನಿ ಮಾರ್ಗವನ್ನು ಹೇಗೆ ತಡೆಯುವುದು ಎಂಬುದರ ಕುರಿತು ಸ್ಪಷ್ಟ ಸೂಚನೆಗಳನ್ನು ನೀಡಿದೆ," ಎಂದು ಆರೋಪ ಮಾಡಿದ್ದಾರೆ.
"ಪ್ರಧಾನ ಮಂತ್ರಿಯವರು ತಮ್ಮ ರಾಜ್ಯಕ್ಕೆ ಬರುವ ಸಂದರ್ಭದಲ್ಲಿ ಈ ಸರ್ಕಾರವು ಯಾವುದೇ ವ್ಯವಸ್ಥೆಯನ್ನು ಮಾಡಿಲ್ಲ. ಬದಲಾಗಿ ರೈತ ಮುಖಂಡರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬರುವಾಗ ದಾರಿಯನ್ನು ಯಾವ ರೀತಿ ತಡೆಯುವುದು ಎಂಬ ಬಗ್ಗೆ ಸೂಚನೆಯನ್ನು ನೀಡಲಾಗಿದೆ. ಈ ರೀತಿ ಮಾಡುವ ಮೂಲಕ ಪಂಜಾಬ್ ಸರ್ಕಾರವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀವಕ್ಕೆ ಅಪಾಯವನ್ನು ಉಂಟು ಮಾಡಿದೆ," ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Breaking: ಪಿಎಂ ಭದ್ರತಾ ವೈಫಲ್ಯ, ಎಲ್ಲಾ ತನಿಖೆ ನಿಲ್ಲಿಸುವಂತೆ ಸುಪ್ರೀಂ ಸೂಚನೆ
ಚನ್ನಿ ಸರ್ಕಾರದ ವಿರುದ್ಧ ಖಟ್ಟರ್, ಅನಿಲ್ ವಿಜ್ ವಾಗ್ದಾಳಿ
ಪ್ರಧಾಣ ಮಂತ್ರಿ ನರೇಂದ್ರ ಮೋದಿಯ ಭದ್ರತಾ ಉಲ್ಲಂಘನೆಯ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ವಿರುದಧವಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಮಾತ್ರವಲ್ಲದೇ ರಾಜ್ಯದ ಗೃಹ ಸಚಿವ ಅನಿಲ್ ವಿಜ್ ಕೂಡಾ ವಾಗ್ದಾಳಿ ನಡೆಸಿದ್ದಾರೆ. ಸುದ್ದಿ ವಾಹಿನಿಯೊಂದು ಮಾಡಿದ ಸ್ಟಿಂಗ್ ಆಫರೇಷನ್ ಅನ್ನು ಉಲ್ಲೇಖ ಮಾಡಿ ಕೆಲವು ಪಂಜಾಬ್ ಪೊಲೀಸ್ ಅಧಿಕಾರಿಗಳು ಚಾನೆಲ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರತಿಭಟನಾಕಾರರು ಪ್ರಧಾನಿ ಮೋದಿಯವರ ಮಾರ್ಗವನ್ನು ತಡೆದರೂ ಕೂಡಾ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಹೇಳಿದರು.
"ರಾಷ್ಟ್ರೀಯ ಸುದ್ದಿ ವಾಹಿನಿಯ ಸ್ಟಿಂಗ್ ಆಫರೇಷನ್ನಲ್ಲಿ ಹವಾಮಾನ ವೈಪರೀತ್ಯದ ಕುರಿತು ಸಿಐಡಿ ವರದಿ ಎಚ್ಚರಿಕೆ ನೀಡಿರುವುದು ಸ್ಪಷ್ಟವಾಗಿದ್ದು, ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಬೇಕಾಗಿತ್ತು," ಎಂದು ಹೇಳಿರುವ ಮನೋಹರ್ ಲಾಲ್ ಖಟ್ಟರ್, "ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ಅವರ ಜೀವವನ್ನು ಉದ್ದೇಶಪೂರ್ವಕವಾಗಿ ಅಪಾಯಕ್ಕೆ ಸಿಲುಕಿಸಲಾಗಿದೆ, ನಾನು ಅದನ್ನು ಬಲವಾಗಿ ಖಂಡಿಸುತ್ತೇನೆ," ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. "ಪ್ರಧಾನ ಮಂತ್ರಿಗೆ ಭದ್ರತೆಯನ್ನು ಸರಿಯಾಗಿ ನೀಡದೆ ಇರುವುದನ್ನು ನಾನು ಬಲವಾಗಿ ಖಂಡನೆ ಮಾಡುತ್ತೇನೆ," ಎಂದು ರಾಜ್ಯ ಸರ್ಕಾರದ ಹೇಳಿಕೆಯಲ್ಲಿ ತಿಳಿಸಿದರು.
"ವಿಧಾನಸಭಾ ಚುನಾವಣೆಯನ್ನು ರಾಷ್ಟ್ರಪತಿ ಆಳ್ವಿಕೆಯಲ್ಲಿ ನಡೆಸಬೇಕು"
Recommended Video
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಪಂಜಾಬ್, ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಈ ನಡುವೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಚನ್ನಿ ಸರ್ಕಾರವನ್ನು ವಜಾಗೊಳಿಸಿ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ರಾಷ್ಟ್ರಪತಿ ಆಳ್ವಿಕೆಯಲ್ಲಿ ನಡೆಸಬೇಕು ಎಂದು ಈ ಹಿಂದೆಯೇ ಆಗ್ರಹ ಮಾಡಿದ್ದಾರೆ. (ಒನ್ಇಂಡಿಯಾ ಸುದ್ದಿ)