ಪಂಜಾಬ್ ಮಾಜಿ ಸಿಎಂ ಅಮರೀಂದರ್ ಇಂದು ಶಾ, ನಡ್ಡಾರನ್ನು ಭೇಟಿ ಸಾಧ್ಯತೆ: ಬಿಜೆಪಿ ಸೇರ್ಪಡೆ?
ಚಂಡೀಗಢ, ಸೆಪ್ಟೆಂಬರ್, 28: ಪಂಜಾಬ್ನ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ನ ಹಿರಿಯ ನಾಯಕ ಅಮರೀಂದರ್ ಸಿಂಗ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆಯೇ ಎಂಬ ಅನುಮಾನಗಳು ಮೂಡಿದೆ. ಪಂಜಾಬ್ ಕಾಂಗ್ರೆಸ್ನ ರಾಜಕೀಯ ಬಿಕ್ಕಟ್ಟಿನ ಬೆನ್ನಲ್ಲೇ ಪಂಜಾಬ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಮರೀಂದರ್ ಸಿಂಗ್ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದಾರೆ ಎಂದು ಮಾಹಿತಿ ಲಭಿಸಿದೆ.
ಆದರೆ ಪಂಜಾಬ್ನ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಈ ದೆಹಲಿ ಭೇಟಿಯನ್ನು ಅವರ ವೈಯಕ್ತಿಕ ಮಾಧ್ಯಮ ಸಲಹೆಗಾರ ರವೀಣ್ ತುಕ್ರಲ್ ಮಾತ್ರ "ಇದು ಅಮರೀಂದರ್ ಸಿಂಗ್ ಅವರ ವೈಯಕ್ತಿಕ ಭೇಟಿ," ಎಂದು ಹೇಳಿಕೊಂಡಿದ್ದಾರೆ.
Breaking: ಪಂಜಾಬ್ ಸಿಎಂ ಸ್ಥಾನಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆ
"ಅಮರೀಂದರ್ ಸಿಂಗ್ ದೆಹಲಿಗೆ ಭೇಟಿ ನೀಡುವ ವಿಚಾರದಲ್ಲಿ ಹಲವಾರು ಸುದ್ದಿಗಳು ಆಗುತ್ತಿರುವುದನ್ನು ನಾನು ಓದಿದ್ದೇನೆ. ಅಮರೀಂದರ್ ಸಿಂಗ್ ದೆಹಲಿಗೆ ಬಂದಿರುವುದು ತಮ್ಮ ವೈಯಕ್ತಿಕ ಭೇಟಿಗಾಗಿ. ಈ ಸಂದರ್ಭದಲ್ಲಿ ಅವರು ತಮ್ಮ ಸ್ನೇಹಿತರನ್ನು ಭೇಟಿಯಾಗಲಿದ್ದಾರೆ. ಹಾಗೆಯೇ ನೂತನ ಮುಖ್ಯಮಂತ್ರಿಗಾಗಿ ಕಪುರ್ತಲದ ಮನೆಯನ್ನು ತೆರವು ಮಾಡಲಿದ್ದಾರೆ. ಈ ಹಿನ್ನೆಲೆ ಅನಗತ್ಯ ವದಂತಿ ಹರಡುವ ಯಾವುದೇ ಅಗತ್ಯವಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಇವೆ ಎನ್ನುವಷ್ಟರಲ್ಲಿ ಪಂಜಾಬ್ ಕಾಂಗ್ರೆಸ್ನ ರಾಜಕೀಯ ಬಿಕ್ಕಟ್ಟಿನ ಕಾರಣದಿಂದಾಗಿ ಪಂಜಾಬ್ನ ಮುಖ್ಯಮಂತ್ರಿಯಾಗಿದ್ದ ಅಮರೀಂದರ್ ಸಿಂಗ್ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಂಜಾಬ್ನ ಕಾಂಗ್ರೆಸ್ ಮುಖ್ಯಸ್ಥ ನವಜ್ಯೋತ್ ಸಿಂಗ್ ಸಿಧು ಜೊತೆಗಿನ ಮೈಮನ್ಸಸ್ಸಿನ ಬೆನ್ನಲ್ಲೇ ಈ ಎಲ್ಲಾ ಬೆಳವಣಿಗೆಗಳು ನಡೆದಿದೆ.
ಪಂಜಾಬ್ನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ವಿರುದ್ದವಾಗಿ ಕಳೆದ ತಿಂಗಳು ನಾಲ್ಕು ಸಚಿವರುಗಳು ಹಾಗೂ ಸುಮಾರು ಹನ್ನೆರಡಕ್ಕೂ ಅಧಿಕ ಶಾಸಕರುಗಳು ಬಂಡಾಯ ಎದ್ದಿದ್ದರು. ಪಂಜಾಬ್ನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಬಗ್ಗೆ ಯಾವುದೇ ನಂಬಿಕೆ ನಮಗೆ ಇಲ್ಲ ಎಂದು ಈ ಶಾಸಕರು, ಸಚಿವರುಗಳು ಹೇಳಿಕೊಂಡಿದ್ದರು. ಈ ಹಿನ್ನೆಲೆ ಪಕ್ಷದ ಒಳಗಿನ ಈ ಬಿಕ್ಕಟ್ಟನ್ನು ಸರಿಪಡಿಸುವುದು ಕಾಂಗ್ರೆಸ್ ಹೈಕಮಾಂಡ್ಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು. ಶಾಸಕರುಗಳು ಕೂಡಾ ಸಭೆ ಕರೆಯುವಂತೆ ಒತ್ತಡ ಹೇರುತ್ತಿದ್ದರು ಎಂದು ಹೇಳಲಾಗಿದೆ. ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸುಮಾರು 50 ರಷ್ಟು ಶಾಸಕರು ಪತ್ರ ಬರೆದಿದ್ದರು.
ಕರ್ನಾಟಕ, ಗುಜರಾತ್ ಮಾದರಿಯಲ್ಲೇ ಪಂಜಾಬ್ಗೂ ಅಚ್ಚರಿಯ ಸಿಎಂ
ಈ ಎಲ್ಲಾ ಬೆಳವಣಿಯ ಬೆನ್ನಲ್ಲೇ ಕಾಂಗ್ರೆಸ್ ಪಂಜಾಬ್ನ ಉಸ್ತುವಾರಿ ಹರೀಶ್ ರಾವತ್ ರಾತ್ರೋರಾತ್ರಿ ಟ್ವೀಟ್ ಮಾಡಿ ಮರುದಿನ ಸಂಜೆ ಸಭೆ ನಡೆಯಲಿರುವ ಬಗ್ಗೆ ತಿಳಿಸಿದ್ದರು. "ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಸಭೆಯನ್ನು ಸೇರುವಂತೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ ನಿರ್ದೇಶನ ನೀಡಿದೆ. ಕಾಂಗ್ರೆಸ್ನ ಎಲ್ಲಾ ಶಾಸಕರುಗಳು ಈ ಸಭೆಗೆ ಹಾಜರಾಗಬೇಕಾಗಿ ವಿನಂತಿ," ಎಂದು ಹೇಳಿದ್ದರು.
ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಪಂಜಾಬ್ನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ತನ್ನ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಬಗ್ಗೆ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ಅಮರೀಂದರ್ ಸಿಂಗ್, ತಾನು "ಅವಮಾನಕ್ಕೆ ಒಳಗಾಗುತ್ತೇನೆ ಎಂದನಿಸಿತು, ಆದ್ದರಿಂದ ನಾನು ರಾಜೀನಾಮೆ ನೀಡಿದೆ," ಎಂದಿದ್ದರು.
"ನಾನು ರಾಜೀನಾಮೆ ನೀಡಲು ಹೋಗುತ್ತಿದ್ದೇನೆ ಎಂದು ಈಗಾಗಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ತಿಳಿಸಿದ್ದೇನೆ. ಇದು ಮೂರನೇ ಬಾರಿ ನಡೆಯುತ್ತಿದೆ. ನಾನು ಅವಮಾನಕ್ಕೆ ಒಳಗಾಗಿದ್ದೇನೆ. ಅವರು ಯಾರನ್ನು ನಂಬಬಲ್ಲರೋ ಅವರನ್ನು ಮುಖ್ಯಮಂತ್ರಿ ಮಾಡಬಹುದು. ಕಾಂಗ್ರೆಸ್ ಅಧ್ಯಕ್ಷೆ ಏನು ನಿರ್ಧಾರ ಮಾಡುತ್ತಾರೋ ಅದು ಸರಿ. ನಾನು ಕಾಂಗ್ರೆಸ್ ಪಕ್ಷದೊಂದಿಗೆ ಇದ್ದೇನೆ, ನನ್ನ ಬೆಂಬಲತರನ್ನು ಭೇಟಿಯಾದ ಬಳಿಕ ನಾನು ನನ್ನ ಮುಂದಿನ ಜೀವನದ ರಾಜಕೀಯದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ," ಎಂದು ಕೂಡಾ ತಿಳಿಸಿದ್ದರು.
ಇದಾದ ಬಳಿಕ ಪಂಜಾಬ್ನಲ್ಲಿ ಕರ್ನಾಟಕ ಹಾಗೂ ಗುಜರಾತ್ನಂತೆ ಮುಖ್ಯಮಂತ್ರಿ ನೇಮಕ ವಿಚಾರದಲ್ಲಿ ಅಚ್ಚರಿ ನಡೆದಿದೆ. ಪಂಜಾಬ್ನಲ್ಲಿಯೂ ಮುಖ್ಯಮಂತ್ರಿಯ ಅಚ್ಚರಿ ಆಯ್ಕೆ ಆಗಿದೆ. ಚರಂಜಿತ್ ಸಿಂಗ್ ಚನ್ನಿರನ್ನು ಮುಖ್ಯಮಂತ್ರಿಯನ್ನಾಗಿಸಲಾಗಿದೆ.
ಇದೀಗ ಕಾಂಗ್ರೆಸ್ನಲ್ಲಿ ವೈಮನ್ಸಸ್ಸು ಹೊಂದಿರುವ ಪಂಜಾಬ್ನ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಬಿಜೆಪಿಯನ್ನು ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದಾರೆ ಎಂದು ಕೂಡಾ ಹೇಳಲಾಗಿದೆ. ಇನ್ನು ಅಮರೀಂದರ್ ಸಿಂಗ್ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳು ತಮ್ಮ ಮುಂದಿನ ನಡೆಯ ಬಗ್ಗೆ ಅಮರೀಂದರ್ ಸಿಂಗ್ಗೆ ಪ್ರಶ್ನೆ ಮಾಡಿದಾಗ, "ನನ್ನ ಎಲ್ಲಾ ಬೆಂಬಲಿಗರು ಏನು ಹೇಳುತ್ತಾರೆ ಎಂದು ನಾನು ಕೇಳುತ್ತೇನೆ," ಎಂದು ಹೇಳಿದ್ದರು.
(ಒನ್ಇಂಡಿಯಾ ಸುದ್ದಿ)