ಬಿಎಸ್ಎಫ್ ಅಧಿಕಾರ ವ್ಯಾಪ್ತಿ ವಿಸ್ತರಣೆಗೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಬೆಂಬಲ!
ನವದೆಹಲಿ, ಅಕ್ಟೋಬರ್ 14: ಭಾರತದಲ್ಲಿ ಗಡಿ ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿ ವಿಸ್ತರಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಪಂಜಾಬ್ ಸೇರಿದಂತೆ ಹಲವು ರಾಜ್ಯಗಳು ಕೇಂದ್ರದ ವಿರುದ್ಧ ವಿರೋಧ ವ್ಯಕ್ತಪಡಿಸುತ್ತಿದ್ದು ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿವೆ.
ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿಯನ್ನು 50 ಕಿಲೋ ಮೀಟರ್ ವಿಸ್ತರಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಬೆಂಬಲವಿದೆ ಎಂದು ಸಂಪುಟ ಸಚಿವ ಪರ್ಗತ್ ಸಿಂಗ್ ದೂಷಿಸಿದ್ದಾರೆ.
ಭಾರತದಲ್ಲಿ ಗಡಿ ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿ ವಿಸ್ತರಿಸಿದ ಕೇಂದ್ರ ಸರ್ಕಾರ
"ಕ್ಯಾಪ್ಟನ್ ಸಾಹಿಬ್ ಏನು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆ? ಅವರು ಬಿಜೆಪಿಯೊಂದಿಗೆ ಇದ್ದಾರೆ ಎಂದು ನಾನು ಯಾವಾಗಲೂ ಹೇಳುತ್ತಿದ್ದೆ. ಈ ಹಿಂದೆ ಅವರು ದೆಹಲಿಗೆ ಹೋಗಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿದಾಗ ಭತ್ತ ಸಂಗ್ರಹಣೆ 10 ದಿನ ವಿಳಂಬವಾಗಿತ್ತು. ಈಗ ಅವರು ಮತ್ತೆ ದೆಹಲಿಗೆ ಹೋದ ಸಂದರ್ಭದಲ್ಲಿ ಬಿಎಸ್ಎಫ್ನ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ," ಎಂದು ಸಿಂಗ್ ಹೇಳಿದ್ದಾರೆ.
ಕ್ಯಾಪ್ಟನ್ ಅಮರೀಂದರ್ ಸಿಂಗ್ ವಿರುದ್ಧ ಆರೋಪ:
"ಕ್ಯಾಪ್ಟನ್ ಸಾಹಿಬ್ ದಯವಿಟ್ಟು ಈ ರೀತಿ ನಡೆದುಕೊಳ್ಳಬೇಡಿ. ನಾವು ನಿಮ್ಮನ್ನು ತುಂಬಾ ಗೌರವಿಸುತ್ತೇವೆ. ಆದರೆ ನೀವು ಈ ದಾರಿಯಲ್ಲಿ ಹೋಗಬೇಡಿ. ಬಿಜೆಪಿಯೊಂದಿಗೆ ಸೇರಿಕೊಂಡು ಇದನ್ನೆಲ್ಲ ಮಾಡುವುದು ಸರಿಯಲ್ಲ. ಪಂಜಾಬ್ ಅನ್ನು ತೊಂದರೆಗೊಳಗಾದ ರಾಜ್ಯವಾಗಲು ಬಿಡುವುದಿಲ್ಲ ಎಂಬುದನ್ನು ಕೇಸರಿ ಪಕ್ಷವು ಅರ್ಥಮಾಡಿಕೊಳ್ಳಬೇಕು. ಅವರು ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆಯನ್ನು ಹೇರಲು ಬಯಸುತ್ತಾರೆ. ಬಿಜೆಪಿಗೆ ಅದರಲ್ಲಿ ಯಶಸ್ವಿಯಾಗಲು ನಾವು ಅವಕಾಶ ನೀಡುವುದಿಲ್ಲ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ," ಎಂದಿದ್ದಾರೆ.
ಪಂಜಾಬ್ ಜನರು ಹುನ್ನಾರಗಳಿಗೆ ಬಲಿಯಾಗುವುದಿಲ್ಲ:
"ಭಾರತ ಸರ್ಕಾರದ ನಿರ್ಧಾರವು ಪಂಜಾಬ್ನ ಅರ್ಧ ಭಾಗವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸಮಾನವಾಗಿದೆ. ಇದು ಬಿಜೆಪಿಯ ಧ್ರುವೀಕರಣ ನೀತಿಯ ಮಾದರಿ. ಪಂಜಾಬ್ ಗುರು ನಾನಕ್ ದೇವ್ ಅವರ ಸಿದ್ಧಾಂತ ಮತ್ತು ಬೋಧನೆಗಳನ್ನು ಅನುಸರಿಸುತ್ತದೆ ಎಂದು ನಾನು ಅವರಿಗೆ ನೆನಪಿಸಲು ಬಯಸುತ್ತೇನೆ. ಬಿಜೆಪಿ ಜನರನ್ನು ಕೋಮುವಾದದಲ್ಲಿ ವಿಭಜಿಸಲು ಬಯಸುತ್ತದೆ ಆದರೆ ಪಂಜಾಬ್ ಎಂದಿಗೂ ಆಡಳಿತಗಾರರ ಇಂತಹ ಹುನ್ನಾರಗಳಿಗೆ ಬಲಿಯಾಗಿಲ್ಲ," ಎಂದು ಸಂಪುಟ ಸಚಿವ ಪರ್ಗತ್ ಸಿಂಗ್ ತಿಳಿಸಿದ್ದಾರೆ.
ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಚನ್ನಿ ಪ್ರಶ್ನೆ:
ಭಾರತ ಗಡಿ ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿರುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಕ್ರಮವನ್ನು ರಾಜಕೀಯ ನಾಯಕರು ಪ್ರಶ್ನೆ ಮಾಡಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ, ಉಪ ಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧಾವ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 'ಈ ನಿರ್ಧಾರವನ್ನು ತಕ್ಷಣವೇ ಹಿಂದಕ್ಕೆ ಪಡೆಯಿರಿ' ಎಂದು ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಟ್ವೀಟ್ ಮಾಡಿದ್ದಾರೆ.
"ಅಂತಾರಾಷ್ಟ್ರೀಯ ಗಡಿಗಳಲ್ಲಿ 50 ಕಿ.ಮೀ ವ್ಯಾಪ್ತಿಯಲ್ಲಿ ಬಿಎಸ್ಎಫ್ ಹೆಚ್ಚುವರಿ ಅಧಿಕಾರವನ್ನು ನೀಡುವ ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದು ಒಕ್ಕೂಟ ವ್ಯವಸ್ಥೆ ಮೇಲಿನ ನೇರ ದಾಳಿಯಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ತಕ್ಷಣವೇ ಈ ನಿರ್ಧಾರವನ್ನು ಹಿಂಪಡೆಯುವಂತೆ ನಾನು ಒತ್ತಾಯಿಸುತ್ತೇನೆ," ಎಂದು ಟ್ವೀಟ್ ಮಾಡಿದ್ದಾರೆ.
ರಾಜಕೀಯ ನಾಯಕರ ಟೀಕೆಗೆ ಬಿಎಸ್ಎಫ್ ಪ್ರತಿಕ್ರಿಯೆ:
ಅಂತಾರಾಷ್ಟ್ರೀಯ ಗಡಿಗಳಲ್ಲಿ ಅಧಿಕಾರ ವ್ಯಾಪ್ತಿಯ ವಿಸ್ತರಣೆಯ ಟೀಕೆಗಳಿಗೆ ಬಿಎಸ್ಎಫ್ ಪ್ರತಿಕ್ರಿಯೆ ನೀಡಿದೆ. ಹೊಸ ತಿದ್ದುಪಡಿಯಿಂದ ಗಡಿ ರಾಜ್ಯಗಳಾದ ಪಂಜಾಬ್, ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ಥಾನ ಮತ್ತು ಅಸ್ಸಾಂನಲ್ಲಿ ತನ್ನ ಕಾರ್ಯಾಚರಣೆಗೆ ಏಕರೂಪತೆಯನ್ನು ತರುತ್ತದೆ. ಈಗ ಅದು ಗಡಿಯಿಂದ 50 ಕಿಮೀ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಬಹುದು ಎಂದು ಬಿಎಸ್ಎಫ್ ಹೇಳಿದೆ. ಈ ಹಿಂದೆ "ಅಕ್ಟೋಬರ್ 11 ರಂದು ಜಾರಿಗೆ ಬಂದ ತಿದ್ದುಪಡಿಯು ಬಿಎಸ್ಎಫ್ ತನ್ನ ಕರ್ತವ್ಯಗಳ ಚಾರ್ಟರ್ ಪ್ರಕಾರ ಕಾರ್ಯನಿರ್ವಹಿಸಬಹುದಾದ ಪ್ರದೇಶವನ್ನು ವ್ಯಾಖ್ಯಾನಿಸುವಲ್ಲಿ ಏಕರೂಪತೆಯನ್ನು ಸ್ಥಾಪಿಸುತ್ತದೆ ಮತ್ತು ಅದರ ಪ್ರದೇಶಗಳಲ್ಲಿ ಗಡಿ ಭದ್ರತಾ ಕಾರ್ಯವನ್ನು ನಿರ್ವಹಿಸುತ್ತದೆ," ಎಂದು ಗೃಹ ವ್ಯವಹಾರಗಳ ಸಚಿವಾಲಯವು ಸೂಚನೆ ನೀಡಿತ್ತು.
ಯಾವ ಗಡಿಯಲ್ಲಿ ಎಷ್ಟಿದೆ ಅಧಿಕಾರ ವ್ಯಾಪ್ತಿ?:
ಗುಜರಾತ್ನಲ್ಲಿ ಬಿಎಸ್ಎಫ್ ಅಧಿಕಾರ ವ್ಯಾಪ್ತಿಯ ಪ್ರದೇಶವನ್ನು 80 ಕಿಮೀ ಪ್ರದೇಶದಿಂದ 50 ಕಿಮೀಗೆ ತಗ್ಗಿಸಲಾಗಿದೆ. ರಾಜಸ್ಥಾನದಲ್ಲಿ 50 ಕಿಮೀ ದೂರದಲ್ಲಿ ಹಾಗೆಯೇ ಉಳಿದಿದ್ದು, ಮೇಘಾಲಯ, ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರಾ, ಮಣಿಪುರ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನಲ್ಲಿ ಈ ಹಿಂದಿನಂತೆ ಯಾವುದೇ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಗಡಿ ಭದ್ರತಾ ಪಡೆ ಕಾಯಿದೆ, 1968ರ ಸೆಕ್ಷನ್ 139, ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿಯನ್ನು ಸೂಚಿಸಲು ಕೇಂದ್ರಕ್ಕೆ ಅಧಿಕಾರ ನೀಡುತ್ತದೆ. ಅಂತಹ ಯಾವುದೇ ಆದೇಶವನ್ನು ಸಂಸತ್ ಪ್ರತಿ ಸದನದ ಮುಂದೆ ಇಡಲಿದ್ದು, ಅದನ್ನು ಮಾರ್ಪಾಡು ಮಾಡುವ ಅಥವಾ ರದ್ದುಗೊಳಿಸುವ ಅಧಿಕಾರವನ್ನು ಸಂಸತ್ ಹೊಂದಿರುತ್ತದೆ.