ಚಂಡೀಗಢ-ಮೊಹಾಲಿ ಗಡಿಯಲ್ಲಿ ರೈತರ ಪ್ರತಿಭಟನೆ 'ಅನಗತ್ಯ' ಎಂದ ಸಿಎಂ
ಚಂಡೀಗಢ ಮೇ 18: ಪಂಜಾಬ್ ಎಎಪಿ ಸರ್ಕಾರಕ್ಕೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ (ಮೇ17) ನಡೆದ ರೈತರು ಪ್ರತಿಭಟನೆಯನ್ನು ಅನಾಪೇಕ್ಷಿತ ಮತ್ತು ಅನಗತ್ಯ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಕರೆದಿದ್ದಾರೆ. ರೈತ ಸಂಘಗಳು ಘೋಷಣೆಗಳನ್ನು ನಿಲ್ಲಿಸಬೇಕು ಮತ್ತು ಪಂಜಾಬ್ನ ಕ್ಷೀಣಿಸುತ್ತಿರುವ ನೀರಿನ ಮಟ್ಟವನ್ನು ತಡೆಯಲು ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಹೇಳಿದ್ದಾರೆ.
ಗೋಧಿಯ ಮೇಲೆ ಬೋನಸ್ ಮತ್ತು ಜೂನ್ 10 ರಿಂದ ಭತ್ತ ಬಿತ್ತನೆಯನ್ನು ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳೊಂದಿಗೆ ಎಎಪಿ ಸರ್ಕಾರವನ್ನು ಒತ್ತಾಯಿಸಲು ಪಂಜಾಬ್ ರೈತರು ಮಂಗಳವಾರ ಚಂಡೀಗಢ-ಮೊಹಾಲಿ ಗಡಿಯ ಬಳಿ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪಂಜಾಬ್ ಸಿಎಂ, 'ರೈತರಿಗೆ ಮಾತುಕತೆ ನಡೆಸಲು ತನ್ನ ಕಚೇರಿ ಬಾಗಿಲು ಸದಾ ತೆರೆದಿರುತ್ತದೆ. ಆದರೆ ಇದೊಂದು ಅನಪೇಕ್ಷಿತ ಮತ್ತು ನೀರಿನ ತಳಮಟ್ಟವನ್ನು ಒಡೆಯುವ ಕುತಂತ್ರ ಎಂದು ಕರೆದಿದ್ದಾರೆ. ನಾನೂ ರೈತನ ಮಗನಾಗಿದ್ದು, ಬೆಳೆಗಾರರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಅರಿವಿದೆ ಎಂದರು.
ಗಡುವು ನೀಡಿದ ಪ್ರತಿಭಟನಾಕಾರರು
ಮಂಗಳವಾರ (ಮೇ17) ಕೇಂದ್ರಾಡಳಿತ ಪ್ರದೇಶದಲ್ಲಿ ಹಲವು ರೈತ ಸಂಘಟನೆಗಳು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಚಂಡೀಗಢ-ಮೊಹಾಲಿ ಗಡಿಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪ್ರತಿಭಟನೆಗಳಿಗೆ ಪ್ರತಿಕ್ರಿಯೆಯಾಗಿ ರದ್ದುಪಡಿಸಿದ ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ವರ್ಷವಿಡೀ ನಡೆದ ಆಂದೋಲನದ ಮಾದರಿಯಲ್ಲಿ ಹಲವಾರು ರೈತ ಸಂಘಗಳು ಚಂಡೀಗಢದಲ್ಲಿ ಅನಿರ್ದಿಷ್ಟ ಪ್ರತಿಭಟನೆಗೆ ಕರೆ ನೀಡಿದ್ದವು.
ಪ್ರತಿಭಟನಾ ನಿರತ ರೈತರನ್ನು ಚಂಡೀಗಢಕ್ಕೆ ಪ್ರವೇಶಿಸದಂತೆ ತಡೆಯಲು ಮೊಹಾಲಿ ಪೊಲೀಸರು ಬ್ಯಾರಿಕೇಡ್ಗಳು ಮತ್ತು ಟಿಪ್ಪರ್ಗಳನ್ನು ಹಾಕಿದರು ಮತ್ತು ಜಲಫಿರಂಗಿಗಳ ಬಳಕೆ ಮಾಡಲಾಯಿತು. ಚಂಡೀಗಢ ಪೊಲೀಸರು ಕೂಡ ಇದೇ ರೀತಿಯ ಭದ್ರತಾ ವ್ಯವಸ್ಥೆ ಮಾಡಿದ್ದರು.
"ಇದು ಪಂಜಾಬ್ನಲ್ಲಿ ನಮ್ಮ ಹೋರಾಟದ ಪ್ರಾರಂಭವಾಗಿದೆ ಮತ್ತು ಇದು ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಮುಂದುವರಿಯುತ್ತದೆ. ಇಲ್ಲಿಯವರೆಗೆ ಕೇವಲ 25 ಪ್ರತಿಶತದಷ್ಟು ರೈತರು ಮಾತ್ರ ಇಲ್ಲಿಗೆ ಬಂದಿದ್ದಾರೆ. ನಾಳೆ ಇನ್ನಷ್ಟು ಬರುತ್ತಾರೆ. ಇದು ಮಾಡು ಇಲ್ಲವೇ ಮಡಿ ಹೋರಾಟ" ಎಂದು ರೈತ ಮುಖಂಡರೊಬ್ಬರು ತಿಳಿಸಿದ್ದಾರೆ.
ಪ್ರತಿಭಟನೆ ವೇಳೆ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಪಂಜಾಬ್ ಸರ್ಕಾರಕ್ಕೆ ಗಡುವು ನೀಡಿದ್ದು, ಬುಧವಾರದೊಳಗೆ ಮುಖ್ಯಮಂತ್ರಿಗಳು ಪ್ರತಿಭಟನಾಕಾರರೊಂದಿಗೆ ಸಭೆ ನಡೆಸದಿದ್ದರೆ, ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಚಂಡೀಗಢದ ಬ್ಯಾರಿಕೇಡ್ಗಳನ್ನು ಮುರಿದು ಚಂಡೀಗಢದತ್ತ ತೆರಳುವುದಾಗಿ ಹೇಳಿದ್ದಾರೆ.
ಪಂಜಾಬ್ ಸರ್ಕಾರ ಹೇಳಿದ್ದೇನು?
*ಪಂಜಾಬ್ ಸರ್ಕಾರ ಗೋಧಿ ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ ರೂ 500 ಪರಿಹಾರವನ್ನು ನೀಡಬೇಕು.
*3 ರೈತರನ್ನು ಭೇಟಿಯಾಗಿ ನೀಡಿದ ಭರವಸೆಯಂತೆ ಮೆಕ್ಕೆಜೋಳ ಮತ್ತು ಮೂಂಗ್ ಅನ್ನು ಎಂಎಸ್ಪಿಯಲ್ಲಿ ಖರೀದಿಸಬೇಕು
*ಬಾಸ್ಮತಿ ಅಕ್ಕಿಯ ಮೇಲೆ ಕ್ವಿಂಟಾಲ್ಗೆ 4500 ರೂ ಬೆಲೆಯನ್ನು ಘೋಷಿಸಿ ಮತ್ತು ಖರೀದಿಯ ಅಧಿಸೂಚನೆಯನ್ನು ಹೊರಡಿಸಿ.
*ಪಂಜಾಬ್ ಸರ್ಕಾರವು ಕೇಂದ್ರ ಪೂಲ್ ಮೂಲಕ ಮೊದಲಿನಂತೆ ಪಡೆದ ವಿದ್ಯುತ್ ಅನ್ನು ಮರುಸ್ಥಾಪಿಸಬೇಕು.
*ಜೂ.10ರಿಂದ ಭತ್ತದ ಕೃಷಿ ಆರಂಭವಾಗುತ್ತಿದ್ದು, ಇದಕ್ಕಾಗಿ ರೈತರಿಗೆ ವಿದ್ಯುತ್ ಹಾಗೂ ಅಗತ್ಯ ನೀರು ಸಿಗಬೇಕು.
*ಕಬ್ಬು ಬೆಳೆಯ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು
*ಚಿಪ್ ಮೀಟರ್ಗಳನ್ನು ಸ್ಥಾಪಿಸುವ ನಿರ್ಧಾರವನ್ನು ರದ್ದುಗೊಳಿಸಬೇಕು
*ಸಾಲ ಮತ್ತು ಅಟ್ಯಾಚ್ಮೆಂಟ್ನಿಂದಾಗಿ ರೈತರ ವಿರುದ್ಧ ಹೊರಡಿಸಿರುವ ವಾರಂಟ್ಗಳನ್ನು ವಾಪಸ್ಪಡೆಯಬೇಕು ಮತ್ತು ಬ್ಯಾಂಕ್ಗಳಿಂದ 22000 ಪ್ರಕರಣಗಳನ್ನು ಹಿಂಪಡೆಯಬೇಕು. ಚುನಾವಣೆಗೂ ಮುನ್ನ ಸಾಲ ಮನ್ನಾ ಭರವಸೆಗಳನ್ನು ಈಡೇರಿಸಬೇಕು.
*ಅವರ ವಿವಿಧ ಬೇಡಿಕೆಗಳ ಪೈಕಿ ಬಿಸಿಗಾಳಿ ಪರಿಸ್ಥಿತಿಗಳಿಂದಾಗಿ ಅವರ ಇಳುವರಿ ಕುಸಿದು ಕುಗ್ಗಿದ ಕಾರಣ ರೈತರು ಪ್ರತಿ ಕ್ವಿಂಟಾಲ್ ಗೋಧಿಗೆ ರೂ 500 ಬೋನಸ್ ಬಯಸುತ್ತಾರೆ.
*ವಿದ್ಯುತ್ ಹೊರೆ ಕಡಿಮೆ ಮಾಡಲು ಮತ್ತು ಅಂತರ್ಜಲವನ್ನು ಸಂರಕ್ಷಿಸಲು ಜೂನ್ 18 ರಿಂದ ಭತ್ತ ಬಿತ್ತನೆಗೆ ಅವಕಾಶ ನೀಡುವ ಪಂಜಾಬ್ ಸರ್ಕಾರದ ನಿರ್ಧಾರವನ್ನು ಅವರು ವಿರೋಧಿಸಿದ್ದಾರೆ.
*ಜೂನ್ 10 ರಿಂದ ಭತ್ತ ಬಿತ್ತನೆ ಮಾಡಲು ಸರ್ಕಾರ ಅನುಮತಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಮೆಕ್ಕೆಜೋಳ ಮತ್ತು ಮುಂಗಾರು ಕನಿಷ್ಠ ಬೆಂಬಲ ಬೆಲೆಗೆ ಅಧಿಸೂಚನೆ ಹೊರಡಿಸಬೇಕು ಎಂದಿದ್ದಾರೆ.
*ಜೊತೆಗೆ ವಿದ್ಯುತ್ ಹೊರೆಯನ್ನು 4,800 ರೂ.ಗಳಿಂದ 1,200 ರೂ.ಗೆ ವಿಸ್ತರಿಸುವುದು, 10-12 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮತ್ತು ಕಬ್ಬಿನ ಬಾಕಿ ಪಾವತಿಯನ್ನು ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಪ್ರತಿಭಟನಕಾರರು ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಸರ್ಕಾರದೊಂದಿಗೆ ಇಂದು ಮಾತುಕತೆ
ಈ ಎಲ್ಲಾ ಬೇಡಿಕೆಯೊಂದಿಗೆ ಮಂಗಳವಾರ (ಮೇ17) ರೇಷನ್, ಹಾಸಿಗೆಗಳು, ಫ್ಯಾನ್ಗಳು, ಕೂಲರ್ಗಳು, ಪಾತ್ರೆಗಳು, ಅಡುಗೆ ಅನಿಲ ಸಿಲಿಂಡರ್ಗಳು ಮತ್ತು ಇತರ ವಸ್ತುಗಳನ್ನು ಹೊತ್ತುಕೊಂಡು, ಪಂಜಾಬ್ನಾದ್ಯಂತದ ರೈತರು ಮೊಹಾಲಿಯ ಗುರುದ್ವಾರ ಅಂಬ್ ಸಾಹಿಬ್ನಲ್ಲಿ ಒಟ್ಟುಗೂಡಿದರು. ಇದರಿಂದ ಪಂಜಾಬ್ ಸರ್ಕಾರದಿಂದ ಸಭೆಗೆ ಸಂದೇಶ ಬಂದಿದೆ ಎಂದು ಪ್ರತಿಭಟನಾನಿರತ ರೈತರು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ರೈತರು, ಕೇಂದ್ರಾಡಳಿತ ಪ್ರದೇಶ ಡಿಜಿಪಿಯಿಂದ ಬುಧವಾರ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಮಾನ್ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ ಎಂದು ನಮಗೆ ಸಂದೇಶ ಬಂದಿದೆ. ನಂತರ ಮತ್ತೊಂದು ಸಂದೇಶ ಬಂದಿದ್ದು, ಸಿಎಂ ದೆಹಲಿಗೆ ಹೋಗಿರುವುದರಿಂದ ಮುಖ್ಯ ಕಾರ್ಯದರ್ಶಿಯೊಂದಿಗೆ ಸಭೆ ನಡೆಸಬಹುದು ಎಂದು ತಿಳಿಸಿದರು.
ಆದರೆ, ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಭರವಸೆ ಪ್ರತಿಭಟನಾಕಾರರಿಗೆ ಇಲ್ಲ. "ಮುಖ್ಯಮಂತ್ರಿ ಮಾನ್ ನಮ್ಮೊಂದಿಗೆ ಸಭೆ ನಡೆಸಿ ನಾಳೆಯೊಳಗೆ ನಮ್ಮ ಸಮಸ್ಯೆಗಳನ್ನು ಪರಿಹರಿಸದಿದ್ದರೆ, ನಾವು ಪ್ರತಿಭಟನೆಯನ್ನು ಮುಂದುವರಿಸುತ್ತೇವೆ" ಎಂದು ರೈತ ಮುಖಂಡ ದಲ್ಲೆವಾಲ್ ಹೇಳಿದ್ದಾರೆ.
ರೈತರ ಸಹಕಾರ ಕೇಳಿದ ಸಿಎಂ
ಈ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ ಮಾನ್, ಪ್ರತಿಭಟನಾನಿರತ ರೈತರು ಸಭೆಗೆ ಯಾವಾಗ ಬೇಕಾದರೂ ಬರಬಹುದು ಆದರೆ ಪರಿಸರ ಸಂರಕ್ಷಣೆಯಲ್ಲಿ ತಮ್ಮ ಸರ್ಕಾರದ ಪ್ರಯತ್ನಗಳಿಗೆ ಬೆಂಬಲವನ್ನು ಕೋರಿದರು. "ಮಾತುಕತೆಗಳು ಯಾವಾಗಲೂ ಮುಕ್ತವಾಗಿರುತ್ತವೆ. ಅವರು (ರೈತರು) 'ಧರಣಿ' ನಡೆಸುವ ಪ್ರಜಾಸತ್ತಾತ್ಮಕ ಹಕ್ಕನ್ನು ಹೊಂದಿದ್ದಾರೆ. ಅವರು ತಮ್ಮ ಸಮಸ್ಯೆಗಳನ್ನು ವಿವರಿಸಬೇಕು" ಎಂದು ಮಾನ್ ದೆಹಲಿಯಿಂದ ಹಿಂದಿರುಗಿದ ನಂತರ ಸುದ್ದಿಗಾರರಿಗೆ ತಿಳಿಸಿದರು.
ಪ್ರತಿಭಟನಾನಿರತ ರೈತರು ತಮ್ಮನ್ನು ಭೇಟಿಯಾಗಲು ಹಠ ಹಿಡಿದಿರುವ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು , 'ಮುರ್ದಾಬಾದ್' ಘೋಷಣೆಗಳನ್ನು ಅನಾಪೇಕ್ಷಿತ ಎಂದಿದ್ದಾರೆ. ಜೊತೆಗೆ ಮೂಂಗ್ ಮತ್ತು ಬಾಸುಮತಿ ಬೆಳೆಗಳಿಗೆ ಎಂಎಸ್ಪಿಯನ್ನು ರೈತರಿಗೆ ನೀಡಲಾಗುವುದು ಎಂದು ಅವರು ಹೇಳಿದರು.
ಒಂದು ವರ್ಷದವರೆಗೆ ಅವರ ಬೆಂಬಲವನ್ನು ಕೋರಿದ ಮನ್, ಈ ಅವಧಿಯಲ್ಲಿ ರೈತರಿಗೆ ಏನಾದರೂ ನಷ್ಟವಾದರೆ ಅವರಿಗೆ ರಾಜ್ಯ ಸರ್ಕಾರದಿಂದ ಸಂಪೂರ್ಣ ಪರಿಹಾರ ನೀಡಲಾಗುವುದು ಎಂದು ಹೇಳಿದರು. ಭತ್ತದ ಬಿತ್ತನೆ ಹಂಗಾಮು ಆರಂಭವಾಗುವ ದಿನಾಂಕದ ಕುರಿತು ಮಾತತನಾಡಿದ ಅವರು, 'ನಾನು ರೈತನ ಮಗ, ಅದು ಹೇಗೆ ಆಗಬಹುದು ಎಂಬುದು ನನಗೆ ಗೊತ್ತು, ಜೂನ್ 18 ಮತ್ತು 10ರ ನಡುವೆ ಏನು ವ್ಯತ್ಯಾಸವಿದೆ' ಎಂದು ಹೇಳಿದರು.
ಮಂಗಳವಾರ ತೀವ್ರಗೊಂಡಿದ್ದ ಪ್ರತಿಭಟನೆ
ಹಿಂದಿನ ದಿನ ಪ್ರತಿಭಟನಾಕಾರರು ಗುರುದ್ವಾರ ಅಂಬ್ ಸಾಹಿಬ್ನಿಂದ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಿದರು ಮತ್ತು ಚಂಡೀಗಢ-ಮೊಹಾಲಿ ಗಡಿಯ ಬಳಿ ಮೊಹಾಲಿ ಪೊಲೀಸರು ಹಾಕಿದ ಇತರ ಅಡೆತಡೆಗಳ ಕಡೆಗೆ ತೆರಳಿದಾಗ ಬ್ಯಾರಿಕೇಡ್ಗಳನ್ನು ಮುರಿದರು. ಆದರೆ ಎರಡನೇ ಬಾರಿಗೆ ಬ್ಯಾರಿಕೇಡ್ಗಳನ್ನು ಒಡೆಯದಂತೆ ಪ್ರತಿಭಟನಾಕಾರರನ್ನು ಒತ್ತಾಯಿಸಿದ ದಲ್ಲೆವಾಲ್ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು.
"ಬ್ಯಾರಿಕೇಡ್ಗಳನ್ನು ಮುರಿದು ಮುಂದೆ ಸಾಗುವುದು ನಿಮಗೆ ದೊಡ್ಡ ವಿಷಯವಲ್ಲ. ಆದರೆ ನಾವು ಇಲ್ಲಿ ಶಾಂತಿಯುತವಾಗಿ ಕುಳಿತುಕೊಳ್ಳುತ್ತೇವೆ. ನಾವು ಇಲ್ಲಿ ಪ್ರತಿಭಟನೆ ನಡೆಸುತ್ತೇವೆ... ಇದು ದೆಹಲಿಯ ಆಂದೋಲನದಂತೆ" ಎಂದು ದಲ್ಲೆವಾಲ್ ಹೇಳಿದರು. ಭಾರತಿ ಕಿಸಾನ್ ಯೂನಿಯನ್ (ಲಖೋವಾಲ್) ಪ್ರಧಾನ ಕಾರ್ಯದರ್ಶಿ ಹರಿಂದರ್ ಸಿಂಗ್ ಲಖೋವಲ್ ಅವರು ಈ ಪ್ರತಿಭಟನೆಯನ್ನು ನಾವು ಗೆಲ್ಲುತ್ತೇವೆ ಎಂದಿದ್ದಾರೆ.
ಕೊಟ್ಟ ಮಾತು ಉಳಿಸಿಕೊಳ್ಳದ ಸರ್ಕಾರ
ಏಪ್ರಿಲ್ 17 ರಂದು ಮುಖ್ಯಮಂತ್ರಿಗಳೊಂದಿಗೆ ತಮ್ಮ ಕೊನೆಯ ಸಭೆಯ ಸಂದರ್ಭದಲ್ಲಿ ಅವರು 11 ಬೇಡಿಕೆಗಳ ಸನ್ನದು ಸಲ್ಲಿಸಿದ್ದರು ಮತ್ತು ಮಾನ್ ಅವರ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದ್ದರು ಎಂದು ಅವರು ಹೇಳಿದ್ದಾರೆ. ಆದರೆ ಒಂದೇ ಒಂದು ಬೇಡಿಕೆಯನ್ನು ಇನ್ನೂ ಅಂಗೀಕರಿಸಲಾಗಿಲ್ಲ ಎಂದು ಭಾರತ್ ಕಿಸಾನ್ ಯೂನಿಯನ್ (ಲಖೋವಾಲ್) ಪ್ರಧಾನ ಕಾರ್ಯದರ್ಶಿ ಹರಿಂದರ್ ಸಿಂಗ್ ಲಖೋವಲ್ ಪ್ರತಿಪಾದಿಸಿದರು.
ಮೊಹಾಲಿ ಪೊಲೀಸರು ಮಂಗಳವಾರ ಪ್ರತಿಭಟನಾಕಾರರನ್ನು ತಡೆದ ನಂತರ, ರೈತರು ತಮ್ಮ ವಾಹನಗಳನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ ಅಲ್ಲಿಯೇ ಕುಳಿತುಕೊಂಡರು. ಅವರಲ್ಲಿ ಕೆಲವರು ಅಲ್ಲಿ ಚಹಾ ಮಾಡಲು ಪ್ರಾರಂಭಿಸಿದರು. ಪೊಲೀಸರು ಚಂಡೀಗಢ-ಮೊಹಾಲಿ ರಸ್ತೆಯ ವೈಪಿಎಸ್ ಚೌಕ್ ಬಳಿ ಸಂಚಾರವನ್ನು ಪರ್ಯಾಯ ಮಾರ್ಗಗಳಿಗೆ ಬದಲಾಯಿಸಬೇಕಾಯಿತು.
ಎಎಪಿಯ ಪಂಜಾಬ್ ಘಟಕದ ಮುಖ್ಯ ವಕ್ತಾರ ಮಲ್ವಿಂದರ್ ಸಿಂಗ್ ಕಾಂಗ್ ಮಾತನಾಡಿ, ರಾಜ್ಯ ಸರ್ಕಾರವು ರೈತರ ಕಲ್ಯಾಣಕ್ಕೆ ಬದ್ಧವಾಗಿದೆ ಮತ್ತು ಇದು ಅವರ ನಿಜವಾದ ಬೇಡಿಕೆಗಳನ್ನು ಪರಿಹರಿಸುತ್ತದೆ ಎಂದಿದ್ದಾರೆ. ರೈತ ಸಂಘಟನೆಗಳು ರೈತ ವಲಯಕ್ಕಾಗಿ ಸಂವಾದ ನಡೆಸಲು ಬಯಸಿದರೆ, ರಾಜ್ಯ ಸರ್ಕಾರದ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂದು ಕಾಂಗ್ ಹೇಳಿದರು.